ಜನಾರ್ದನ ರೆಡ್ಡಿ ಆಪ್ತರಿಗೆ ಹುಡಾ ಅಧ್ಯಕ್ಷಗಿರಿ; ಬಿಜೆಪಿ ಜಿಲ್ಲಾಧ್ಯಕ್ಷರ ರಾಜೀನಾಮೆ
ಬಳ್ಳಾರಿ, ಅಕ್ಟೋಬರ್ 26: ಗಣಿ ಧಣಿ ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ಅವರು ಈಗ ಬಿಜೆಪಿಗೆ ಬೇಡವಾದ ನಾಯಕ ಎಂಬ ಮಾತು ಎಲ್ಲೆಲ್ಲೂ ಕೇಳಿಬರುತ್ತಿದ್ದವು. ಆದರೆ ಬಿಜೆಪಿ ಒಳಗೊಳಗೇ ರೆಡ್ಡಿ ಆಪ್ತರಿಗೆ ಭರ್ಜರಿ ಉಡುಗೊರೆ ನೀಡುತ್ತಿದ್ದು, ಇದು ಜಿಲ್ಲೆಯ ಬಿಜೆಪಿ ನಾಯಕರ ಕೆಂಗಣ್ಣಿಗೆ ಗುರಿಯಾಗಿದೆ.

ಒಂದು ಕಾಲದಲ್ಲಿ ಬಿಜೆಪಿಯ ನಾಯಕ ಅಂದರೆ ಅದು ಗಾಲಿ ಜನಾರ್ಧನ ರೆಡ್ಡಿ. ಯಾವಾಗ ಅವರು ಜೈಲು ಪಾಲಾದರೋ ಆಗಿನಿಂದ ಬಿಜೆಪಿ ಅಂತರ ಕಾಯ್ದುಕೊಂಡಿದೆ ಎಂಬ ಮಾತುಗಳು ಹರಿದಾಡುತ್ತಿದ್ದವು. ಆದರೆ ಅವೆಲ್ಲ ಸುಳ್ಳು, ಈಗಲೂ ರೆಡ್ಡಿಯವರದ್ದೇ ಮಾತು ನಡೆಯುತ್ತಿದೆ ಎಂದು ಪಕ್ಷದ ಕೆಲವರು ದೂರುತ್ತಿದ್ದಾರೆ.
ಪಕ್ಷಕ್ಕಾಗಿ ದುಡಿದ ನಾಯಕರು, ಕಾರ್ಯಕರ್ತರನ್ನು ಕಡೆಗಣಿಸಿ ಗಾಲಿ ಜನಾರ್ದನ ರೆಡ್ಡಿ ಪರಮಾಪ್ತ ದಮ್ಮೂರು ಶೇಖರ್ ಅವರನ್ನು ಹುಡಾ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದೆ. ಅಲ್ಲದೇ ದಮ್ಮೂರು ಶೇಖರ್ ಮೂಲತಃ ಬಿಜೆಪಿ ಪಕ್ಷದವರಲ್ಲ. ಯಾವಾಗ ಗಾಲಿ ಜನಾರ್ಧನ ರೆಡ್ಡಿ ಅಧಿಕಾರ ಮತ್ತು ದುಡ್ಡಿನಿಂದ ಬಲಿಷ್ಠರಾದರೋ ಆಗ ಇವರು ಗಾಲಿ ಹಿಂಬಾಲಕರಾಗಿದ್ದರು. ಹೀಗಾಗಿಯೇ ಇವರನ್ನು ಹುಡಾ ಅಧ್ಯಕ್ಷರನ್ನಾಗಿ ಮಾಡಲಾಗಿದೆ ಎಂಬ ಮಾತು ಕೇಳಿಬರುತ್ತಿದೆ.
ಪಕ್ಷದ ಈ ನಡೆ ಸ್ಥಳೀಯ ಬಿಜೆಪಿ ನಾಯಕರ ಅಸಮಾಧಾನಕ್ಕೆ ಕಾರಣವಾಗಿದೆ. ಇದೇ ಕಾರಣಕ್ಕೆ ಬಿಜೆಪಿ ಜಿಲ್ಲಾಧ್ಯಕ್ಷ ಚನ್ನ ಬಸವನಗೌಡ ಪಾಟೀಲ್ ಸಹ ಅಸಮಾಧಾನಗೊಂಡಿದ್ದು ಜಿಲ್ಲಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಹುಬ್ಬಳ್ಳಿಯಲ್ಲಿ ನಡೆದ ಬಿಜೆಪಿ ನಾಯಕರ ಸಭೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕಟೀಲ್ ಅವರಿಗೆ ರಾಜೀನಾಮೆ ಪತ್ರ ನೀಡಿದ್ದಾರೆ. ಪಕ್ಷಕ್ಕೆ ದುಡಿದ ಕಾರ್ಯಕರ್ತರಿಗೆ ನನ್ನಿಂದ ನ್ಯಾಯ ಕೊಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ನಾನು ರಾಜೀನಾಮೆ ನೀಡುತ್ತೇನೆ ಎಂದು ರಾಜೀನಾಮ ಪತ್ರ ಬರೆದಿದ್ದಾರೆ.












Click it and Unblock the Notifications