ಬಳ್ಳಾರಿಯಲ್ಲಿ ಕಾಂಗ್ರೆಸ್ ಸಮಾವೇಶ; ಸಂಚಾರ ಮಾರ್ಗ ಬದಲು
ಬಳ್ಳಾರಿ, ಅಕ್ಟೋಬರ್ 13; ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆ ಬಳ್ಳಾರಿ ಜಿಲ್ಲೆಯನ್ನು ತಲುಪಲಿದೆ. ಯಾತ್ರೆಯ ಹಿನ್ನಲೆ ಬಳ್ಳಾರಿಯಲ್ಲಿ ಬೃಹತ್ ಸಮಾವೇಶ ಆಯೋಜನೆ ಮಾಡಲಾಗಿದೆ. ಇದರಿಂದಾಗಿ ಪೊಲೀಸರು ಸಂಚಾರಿ ಮಾರ್ಗವನ್ನು ಬದಲಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ.
ಬಳ್ಳಾರಿ ಜಿಲ್ಲೆಯಲ್ಲಿ ಅಕ್ಟೋಬರ್ 14 ಮತ್ತು 15ರಂದು ಭಾರತ್ ಜೋಡೋ ಪಾದಯಾತ್ರೆ ನಡೆಯಲಿದೆ. ಕಾಂಗ್ರೆಸ್ ನಾಯಕರು ವಾಸ್ತವ್ಯ ಹೂಡಲಿದ್ದಾರೆ. ಬಹಿರಂಗ ಸಭೆಯನ್ನು ಸಹ ಆಯೋಜನೆ ಮಾಡಲಾಗಿದೆ. ಈ ಹಿನ್ನಲೆಯಲ್ಲಿ ಬಿಗಿಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.
ಭಾರತ್ ಜೋಡೋ ಯಾತ್ರೆ ಹಿನ್ನಲೆ ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಸಾರ್ವಜನಿಕರ ವಾಹನಗಳ ಪಾರ್ಕಿಂಗ್ ಹಾಗೂ ಸಂಚಾರಕ್ಕಾಗಿ ಪರ್ಯಾಯ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ತಿಳಿಸಿದ್ದಾರೆ.

ಸಭೆಗೆ ಬರುವ ಸಾರ್ವಜನಿಕರು ನಿಗದಿಪಡಿಸಿದ ಸ್ಥಳಗಳಲ್ಲಿ ವಾಹನಗಳನ್ನು ಪಾರ್ಕಿಂಗ್ ಮಾಡಿ ಕಾರ್ಯಕ್ರಮದ ಸ್ಥಳಕ್ಕೆ ನಡೆದುಕೊಂಡು ಬರಬೇಕಾಗಿರುತ್ತದೆ ಎಂದು ಪೊಲೀಸರು ಸೂಚಿಸಿದ್ದಾರೆ.
ಸಂಚಾರ ಮಾರ್ಗ ಬದಲಾವಣೆ ವಿವರ
* ಅ.14ರಂದು ಸಂಜೆ 4ರಿಂದ ರಾತ್ರಿ 8ರವರೆಗೆ ಹೊಸಪೇಟೆ ಬೈಪಾಸ್ ಹಾಗೂ ಬಳ್ಳಾರಿ ಮುಖಾಂತರ ಬೆಂಗಳೂರು ಕಡೆಗೆ ಸಂಚರಿಸುವ ವಾಹನಗಳು ಅನಂತಪುರ ರಸ್ತೆಯ ಬೈಪಾಸ್ ಮುಖಾಂತರ ಸಂಚರಿಸಬೇಕು.
* ಅ.15ರಂದು ಮುನಿಸಿಪಲ್ ಕಾಲೇಜ್ನಲ್ಲಿ ನಡೆಯುವ ಬಹಿರಂಗ ಸಭೆಯ ಹಿನ್ನೆಲೆಯಲ್ಲಿ ಮೋತಿ ಸರ್ಕಲ್, ರಾಯಲ್ ಸರ್ಕಲ್, ಯು. ಬಿ. ಸರ್ಕಲ್, ದುರ್ಗಮ್ಮ ಗುಡಿ ಸರ್ಕಲ್, ಕೆ.ಇ.ಬಿ ಸರ್ಕಲ್, ಕೂಲ್ಕಾರ್ನರ್ ಸರ್ಕಲ್, ಅನಂತಪುರ ರಸ್ತೆ ಗೇಸ್ಟ್ ಹೌಸ್ ಸರ್ಕಲ್, ರಾಘವೇಂದ್ರ ಟಾಕೀಸ್ ಸರ್ಕಲ್ನಿಂದ ಮುನಿಸಿಪಲ್ ಕಾಲೇಜ್ಗೆ ಬರುವ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ.

* ಅ.15ರಂದು ಸಿರುಗುಪ್ಪ ಕಡೆಯಿಂದ ಬೆಂಗಳೂರು ಕಡೆಗೆ ಸಂಚರಿಸುವ ವಾಹನಗಳು ಎಸ್. ಪಿ ಸರ್ಕಲ್, ಇನ್ಫ್ಯಾಂಟರಿ ರಸ್ತೆ, ಸುಧಾ ಕ್ರಾಸ್, ಹೊಸಪೇಟೆ ಬೈಪಾಸ್ ರಸ್ತೆ ಮುಖಾಂತರ ಸಂಚರಿಸುವುದು ಹಾಗೂ ಹೊಸಪೇಟೆ, ಅನಂತಪುರ ಹಾಗೂ ಬೆಂಗಳೂರು ಕಡೆಗೆ ಸಂಚರಿಸುವ ವಾಹನಗಳು ನಗರದ ಹೊರವಲಯದಲ್ಲಿರುವ ಅನಂತಪುರ-ಹೊಸಪೇಟೆ ರಿಂಗ್ ರಸ್ತೆಯ ಮುಖಾಂತರ ಸಂಚರಿಸುವುದು.
ಪಾರ್ಕಿಂಗ್ ಸ್ಥಳಗಳಗಳು; ಸಿರುಗುಪ್ಪ ಕಡೆಯಿಂದ ಬರುವ ಸಾರ್ವಜನಿಕರಿಗೆ ಸಿರುಗುಪ್ಪ ರಸ್ತೆಯ ಬ್ರಿಲಿಯಂಟ್ ಪಬ್ಲಿಕ್ ಸ್ಕೂಲ್ ಹತ್ತಿರ ಇರುವ ಒಪನ್ ಲೇಔಟ್ನಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿರುತ್ತದೆ. ಕಂಪ್ಲಿ, ಕೊಳಗಲ್ಲು ಕಡೆಯಿಂದ ಬರುವ ಸಾರ್ವಜನಿಕರಿಗೆ ಎನ್. ಸಿ. ಸಿ. ಗ್ರೌಂಡ್, ಅರ್. ವೈ. ಎಂ. ಇ. ಸಿ ಕಾಲೇಜ್ ಗ್ರೌಂಡ್ನಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿರುತ್ತದೆ. ಹೊಸಪೇಟೆ ಕಡೆಯಿಂದ ಬರುವ ಸಾರ್ವಜನಿಕರಿಗೆ ಬಿ. ಐ. ಟಿ. ಎಂ. ಕಾಲೇಜ್ ಹತ್ತಿರ ಇರುವ ಒಪನ್ ಲೇಔಟ್, ಈದ್ಗಾ ಗೇಟ್ ಒಳಗೆ ಮತ್ತು ಐಟಿಐ ಕಾಲೇಜ್ನಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿರುತ್ತದೆ.
ಬೆಂಗಳೂರು ಕಡೆಯಿಂದ ಬರುವ ಸಾರ್ವಜನಿಕರಿಗೆ ಹಲಕುಂದಿ ಮಠ, ಮುಂಡರಗಿ ಇಂಡಸ್ಟ್ರಿಯಲ್ ಏರಿಯಾ ಹತ್ತಿರ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿರುತ್ತದೆ. ಅನಂತಪುರ ಕಡೆಯಿಂದ ಬರುವ ಸಾರ್ವಜನಿಕರಿಗೆ ಅನಂತಪುರ ಬೈಪಾಸ್ ರಸ್ತೆಯ ಹತ್ತಿರ ಇರುವ ಖಾಲಿ ಸ್ಥಳ ಹಾಗೂ ಎಂ.ಜಿ ಹತ್ತಿರ ಇರುವ ಸೂರ್ಯನಾರಾಯಣರೆಡ್ಡಿ ರವರ ಖಾಲಿ ಜಾಗದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿರುತ್ತದೆ.
ಮೋಕಾ ಕಡೆಯಿಂದ ಬರುವ ಸಾರ್ವಜನಿಕರಿಗೆ ಮೋಕ ರಸ್ತೆಯಲ್ಲಿರುವ ವಿಸ್ಡಮ್ ಲ್ಯಾಂಡ್ ಶಾಲೆಯ ಅವರಣದಲ್ಲಿ ಹಾಗೂ ಖಾಸಗಿ ಲೇಔಟ್ನ ಖಾಲಿ ಜಾಗದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿರುತ್ತದೆ. ಕಪ್ಪಗಲ್ ಕಡೆಯಿಂದ ಬರುವ ಸಾರ್ವಜನಿಕರಿಗೆ ಕಪ್ಪಗಲ್ ರಸ್ತೆಯಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮ ಶಾಲೆಯ ಅವರಣದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿರುತ್ತದೆ. ತಾಳೂರು ರಸ್ತೆಯ ಕಡೆಯಿಂದ ಸಾರ್ವಜನಿಕರಿಗೆ ತಾಳೂರು ರಸ್ತೆಯ ಊರ ಹೊರ ವಲಯದಲ್ಲಿರುವ ಪೆಟ್ರೋಲ್ ಬಂಕ್ ಹತ್ತಿರ ಇರುವ ಖಾಸಗಿ ಲೇಔಟ್ ಖಾಲಿ ಜಾಗದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.
ಬಹಿರಂಗ ಸಭೆಗೆ ಬರುವ ಅಧಿಕೃತ ಪಾಸ್ ಹೊಂದಿದ ವಿಐಪಿ ವಾಹನಗಳಿಗೆ ಬುಡಾ ಒಳಗಡೆ, ಐ.ಬಿ.ಗೇಸ್ಟ್ ಹೌಸ್, ದುರುಗಮ್ಮ ದೇವಸ್ಥಾನದ ಖಾಲಿ ಜಾಗ ಹಾಗೂ ಕೇಂದ್ರ ಕಾರಾಗೃಹದ ಪಕ್ಕದಲ್ಲಿರುವ ಖಾಲಿ ಜಾಗದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿರುತ್ತದೆ.












Click it and Unblock the Notifications