ಭಾರತ್ ಜೋಡೋ ಯಾತ್ರೆ; ಬಳ್ಳಾರಿಯಲ್ಲಿ ಬೃಹತ್ ಬಹಿರಂಗ ಸಭೆ, ಸಿದ್ದತೆ ಹೇಗಿದೆ ?
ಬಳ್ಳಾರಿ, ಅಕ್ಟೋಬರ್, 14: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ನೇತೃತ್ವದಲ್ಲಿ ದೇಶದ ದಕ್ಷಿಣ ಭಾಗದ ಕನ್ಯಾಕುಮಾರಿಯಿ೦ದ ಉತ್ತರದ ಕಾಶ್ಮೀರದವರೆಗೆ ಭಾರತ್ ಜೋಡೋ ಯಾತ್ರೆ ಕೈಗೊಳ್ಳಲಾಗಿದೆ. ಈಗಾಗಲೇ ಯಾತ್ರೆ ಬಳ್ಳಾರಿ ಜಿಲ್ಲೆಯ ಗಡಿಯನ್ನು ತಲುಪಿದ್ದು, ನಾಳೆ (ಅಕ್ಟೋಬರ್ 15)ರಂದು ಬಳ್ಳಾರಿ ನಗರದ ಮುನ್ಸಿಪಾಲ್ ಕಾಲೇಜು ಮೈದಾನದಲ್ಲಿ ಬೃಹತ್ ಬಹಿರಂಗ ಸಭೆಗೆ ಭರ್ಜರಿ ಸಿದ್ಧತೆ ನಡೆಸಲಾಗಿದೆ.
ಬಹಿರಂಗ ಸಭೆಗೆ ಸಂಬಂಧಿಸಿದಂತೆ ಈಗಾಗಲೇ ಬಹುತೇಕ ಸಿದ್ಧತೆಗಳು ಪೂರ್ಣಗೊಂಡಿವೆ. ಮುನ್ಸಿಪಾಲ್ ಮೈದಾನದಲ್ಲಿ ಬೃಹತ್ ವೇದಿಕೆಯನ್ನು ನಿರ್ಮಿಸಲಾಗಿದೆ. ಶನಿವಾರ ನಡೆಯಲಿರುವ ಸಮಾವೇಶದಲ್ಲಿ 3 ರಿಂದ 5 ಲಕ್ಷ ಜನರು ಭಾಗಿ ಅಗುವ ನಿರೀಕ್ಷೆ ಇದೆ. ಬಳ್ಳಾರಿ ಜಿಲ್ಲೆಗೆ ರಾಹುಲ್ ಗಾಂಧಿ ಆಗಮನ ಹಿನ್ನೆಲೆಯಲ್ಲಿ 108 ಮಹಿಳೆಯರ ಪೂರ್ಣಕುಂಭ ಮತ್ತು ಮಂಗಳಮುಖಿಯರಿಂದ ಸ್ವಾಗತಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ಬಳ್ಳಾರಿ ಗ್ರಾಮೀಣ ಶಾಸಕ ನಾಗೇಂದ್ರ ತಿಳಿಸಿದ್ದಾರೆ.
ಬಹಿರಂಗ ಸಮಾವೇಶದಲ್ಲಿ ಭಾಗವಹಿಸುವ ಸಾರ್ವಜನಿಕರು, ಕಾಂಗ್ರೆಸ್ ಕಾರ್ಯಕರ್ತರು, ಪಾದಯಾತ್ರಿಗಳು ಹಾಗೂ ಮುಖಂಡರಿಗೆ ಶಾಸಕ ನಾಗೇಂದ್ರ ಊಟದ ವ್ಯವಸ್ಥೆಯನ್ನು ಮಾಡಲಿದ್ದಾರೆ. ವೈಯಕ್ತಿಕವಾಗಿ ಒಂದೂವರೆ ಲಕ್ಷ ಜನರಿಗೆ ಊಟದ ವ್ಯವಸ್ಥೆ ಮಾಡಿದ್ದಾರೆ. ಅಲ್ಲಂ ಭವನದ ಬಳಿ ಊಟವನ್ನು ತಯಾರು ಮಾಡುವ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದ್ದು, ಪ್ಲಾಸ್ಟಿಕ್ ಪೊಟ್ಟಣದಲ್ಲಿ ನಿಯಮಿತ ಆಹಾರವನ್ನು ಪ್ಯಾಕ್ ಮಾಡಲಾಗುತ್ತಿದೆ. ಆಹಾರ ಪೊಟ್ಟಣವು ಸಿಹಿ ಪದಾರ್ಥಗಳನ್ನು ಒಳಗೊಂಡಿದೆ ಎಂದು ನಾಗೇಂದ್ರ ಮಾಹಿತಿಯನ್ನು ನೀಡಿದ್ದಾರೆ.

ಹಲಕುಂದಿ ಮಠದಲ್ಲಿಯೇ ವಾಸ್ತವ್ಯ
ಇಂದು ಸಂಜೆ ಬಳ್ಳಾರಿ ಜಿಲ್ಲೆಯ ಹಲಕುಂದಿ ಭಾಗದಿಂದ ಪ್ರವೇಶ ಪಡೆಯಲಿರುವ ಯಾತ್ರೆಯು, ಹಲಕುಂದಿ ಮಠದಲ್ಲಿಯೇ ಇಂದು (ಅಕ್ಟೋಬರ್ 14) ವಾಸ್ತವ್ಯ ಹೂಡಲಿದೆ. ಅಕ್ಟೋಬರ್ 15ರಂದು ಬೆಳಗ್ಗೆ 6:30ಕ್ಕೆ ಹಲಕುಂದಿಯಿಂದ ಪಾದಯಾತ್ರೆ ಆರಂಭವಾಗಿ ಬಳ್ಳಾರಿಗೆ ಆಗಮಿಸಲಿದೆ. ಬೆಳಗ್ಗೆ 11 ಗಂಟೆಗೆ ಕಮ್ಮಾಭವನದಲ್ಲಿ ಉಪಾಹಾರದ ವ್ಯವಸ್ಥೆ ಮಾಡಲಾಗಿದೆ. ಮಧ್ಯಾಹ್ನ 1:30ಕ್ಕೆ ಬಳ್ಳಾರಿ ಮುನ್ಸಿಪಾಲ್ ಕಾಲೇಜ್ ಮೈದಾನದಲ್ಲಿ ಸಮಾವೇಶಕ್ಕೆ ತೆರಳಲಿದ್ದಾರೆ. 3 ಗಂಟೆಯ ವೇಳೆಗೆ ಸಮಾವೇಶ ಪೂರ್ಣಗೊಳ್ಳಲಿದೆ. ನಂತ ಸಂಗನಕಲ್ ಗ್ರಾಮಕ್ಕೆ ತೆರಳಿ ಅಲ್ಲಿಯೇ ರಾತ್ರಿ ವಾಸ್ತವ್ಯ ಹೂಡಲಿದ್ದಾರೆ.

ಸಮಾವೇಶ ಉದ್ಘಾಟಿಸಲಿರುವ ರಾಹುಲ್
ಶನಿವಾರ ಮಧ್ಯಾಹ್ನ 1 ಗಂಟೆಗೆ ರಾಹುಲ್ ಸಮಾವೇಶವನ್ನು ಉದ್ಘಾಟಿಸಲಿದ್ದಾರೆ. ಕಾಂಗ್ರೆಸ್ ಸಮಾವೇಶಕ್ಕೆ ಮೂರು ವೇದಿಕೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಮಧ್ಯದ ವೇದಿಕೆಯಲ್ಲಿ ರಾಹುಲ್ ಗಾಂಧಿ ಮತ್ತು 60 ಜನ ಪ್ರಮುಖ ಮುಖಂಡರು ಕುಳಿತುಕೊಳ್ಳಲು, ಎರಡು ಬದಿಯ ವೇದಿಕೆಯಲ್ಲಿ ರಾಜ್ಯದ ನಾಯಕರು ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ.

ಪಕ್ಷದ ಮುಖಂಡರಿಗಿರುವ ಆಸನಗಳು?
ಒಂದೊಂದು ಬದಿಯಲ್ಲಿ 150 ಮುಖಂಡರು ಕುಳಿತುಕೊಳ್ಳಬಹುದಾಗಿದೆ. ವೇದಿಕೆಯ ಮೇಲೆ ಸುಮಾರು 360 ಮುಖಂಡರಿಗೆ, ಸುಮಾರು 80 ಸಾವಿರ ಜನರಿಗೆ ಆಸನದ ವ್ಯವಸ್ಥೆ ಮಾಡಲಾಗಿದೆ. ವೇದಿಕೆಯ ಮುಂದಕ್ಕೆ ಪಕ್ಷದ ಪದಾಧಿಕಾರಿಗಳು, ಇನ್ನಿತರ ಮುಖಂಡರು ಕುಳಿತುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಸಮಾವೇಶದಲ್ಲಿ ಕಾಂಗ್ರೆಸ್ ಸಂಸದ ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್, ಛತ್ತೀಸ್ಗಡ ಸಿಎಂ ಭೂಪೇಶ್ ಬಘೇಲ್ ಸೇರಿ ಪ್ರಮುಖರು ಭಾಗಿ ಆಗಲಿದ್ದಾರೆ.

ರಾಹುಲ್ ಗಾಂಧಿಗೆ ಝಡ್ ಪ್ಲಸ್ ಸೆಕ್ಯೂರಿಟಿ
ಈಗಾಗಲೇ ನಗರದೆಲ್ಲೆಡೆ ಪೊಲೀಸ್ ಬಿಗಿ ಭದ್ರತೆಯನ್ನು ಏರ್ಪಡಿಸಲಾಗಿದೆ. ಒಟ್ಟು 2,055 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಅದರಲ್ಲಿ 3 ಎಎಸ್ಪಿ, 10 ಡಿವೈಎಸ್ಪಿ, 37 ಸಿಪಿಐ, 103 ಪಿಎಸ್ಐ ಸೇರಿದಂತೆ 351 ಅಧಿಕಾರಿಗಳು, 1,704 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಅಲ್ಲದೆ 5 ಕೆಎಸ್ಆರ್ಪಿ ಮತ್ತು 10 ಡಿಎಆರ್ ತಂಡವನ್ನು ನಿಯೋಜಿಸಲಾಗಿದೆ. ರಾಹುಲ್ ಗಾಂಧಿಗೆ ಝಡ್ ಪ್ಲಸ್ ಸೆಕ್ಯೂರಿಟಿ ಇರುವುದರಿಂದ ಪಾದಯಾತ್ರೆ ಹೊರಡುವ ಸ್ಥಳ, ವಾಸ್ತವ್ಯ ಇರುವ ಪ್ರದೇಶ ಮತ್ತು ಸಮಾವೇಶದ ಸ್ಥಳದಲ್ಲಿ ನಿಗಾ ವಹಿಸಲಾಗಿದೆ. ಹಾಗೂ ಡ್ರೋನ್ ಕ್ಯಾಮೆರಾ ಬಳಕೆಯನ್ನು ನಿಷೇಧಿಸಿ ಪೊಲೀಸ್ ಇಲಾಖೆ ಆದೇಶ ಹೊರಡಿಸಿದೆ.












Click it and Unblock the Notifications