ಬಳ್ಳಾರಿ : ಜಿಂದಾಲ್ ನಿಂದ ಮಕ್ಕಳಿಗೆ ಪೌಷ್ಠಿಕ 'ಪಾಚಿ'
ಬಳ್ಳಾರಿ, ಜೂ.2: ಪಾಚಿ ನೀರಿನಲ್ಲಿ ಸಿಗುವ ಹಸಿರು ಮತ್ತು ನೀಲಿ ಆಹಾರ. ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಪಾಚಿಯನ್ನು ಪೌಷ್ಠಿಕ ಆಹಾರವಾಗಿ ಬಳಕೆಯಾಗುತ್ತಿದೆ. ಭಾರತದ ಅನೇಕ ರಾಜ್ಯಗಳಲ್ಲಿಯೂ ಪಾಚಿ (ಸ್ಪಿರುಲಿನ) ಪೌಷ್ಠಿಕ ಆಹಾರವಾಗಿ ಬಳಕೆಯಾಗುತ್ತಿದೆ. ಪಾಚಿ ಪೌಷ್ಠಿಕ ಆಹಾರವಾಗಿ ಅಂಗನವಾಡಿ ಮಕ್ಕಳು, ಗರ್ಭಿಣಿಯರಿಗೆ ನೀಡಲು ಜಿಂದಾಲ್ ಸಂಸ್ಥೆ ಆಸಕ್ತಿವಹಿಸಿಕೊಂಡಿದೆ.
ಭೂಮಿಯ ಮೇಲೆ ಮೊಟ್ಟಮೊದಲು ಜೀವತಾಳಿದ ಜಲಸಸ್ಯ ಪಾಚಿ. ನೀರಿನಲ್ಲಿ ಯಥೇಚ್ಛವಾಗಿ ನೈಸರ್ಗಿಕವಾಗಿ ಬೆಳೆಯುವ ಪಾಚಿ (ಅಲ್ಜೈ)ಯನ್ನು ಆಹಾರವಾಗಿ ಗಗನಯಾತ್ರಿಗಳು ಬಳಸುತ್ತಾರೆ.
ಪಾಶ್ಚಿಮಾತ್ಯ ರಾಷ್ಟ್ರಗಳಾದ ಅಮೆರಿಕ, ಚೈನ, ಥೈಲ್ಯಾಂಡ್, ಜಪಾನ್, ಆಫ್ರಿಕಾದ ಬುಡಕಟ್ಟು ಜನಾಂಗದವರು ಸೇರಿ ಇನ್ನಿತರೆ ರಾಷ್ಟ್ರಗಳಲ್ಲಿ ಸ್ಪಿರುಲಿನ ವಿಟಮಿನ್ ಔಷಧಗಳಿಗೆ ಪರ್ಯಾಯವಾಗಿ ಪೌಷ್ಠಿಕ ಆಹಾರವಾಗಿ ನಿತ್ಯ ಬಳಕೆಯಾಗುತ್ತಿದೆ.
ಸ್ಪಿರುಲಿನ ಸೇವನೆಯಿಂದ ವಿಟಮಿನ್ ಎ, ಬಿ12, ಕಬ್ಬಿಣಾಂಶ, ಕ್ಯಾಲ್ಸಿಯಂ, ಮ್ಯಾಗ್ನೀಷಿಯಂ, ಪಾಸ್ಪರಸ್ ಸೇರಿ ವಿವಿಧ ಉತ್ತಮ ಪ್ರಮಾಣದ ಲವಣಗಳನ್ನು ಹೊಂದಿದೆ. ಕಬ್ಬಿಣಾಂಶದ ಕೊರತೆ, ಅಮೀನಿಯಾ, ರೋಗನಿರೋಧಕ ಶಕ್ತಿಯ ಕೊರತೆ, ಎಚ್ಐವಿ, ಕ್ಯಾನ್ಸರ್, ಅಧಿಕ ಕೊಬ್ಬು, ರಕ್ತದೊತ್ತಡ, ಹಿಮೋಗ್ಲೊಬಿನ್ ಕೊರತೆ ಸೇರಿ ವಿವಿಧ ಸಮಸ್ಯೆಗಳಿಗೆ ಔಷಧಿಯಾಗಿದೆ.

1974ರಲ್ಲಿ ನಡೆದ ವಿಶ್ವ ಆಹಾರ ಮೇಳದಲ್ಲಿ 'ಭವಿಷ್ಯದ ಉತ್ತಮ ಆಹಾರ'ವಾಗಿ ಸ್ಪಿರುಲಿನ ಗುರುತಿಸಿಕೊಂಡಿದೆ. ಬಾಲ್ಯದಿಂದ, ವೃದ್ಧಾಪ್ಯದವರೆಗಿನ ಎಲ್ಲರೂ ಸೇವಿಸಬಹುದಾಗಿದೆ. ಸ್ಪಿರುಲಿನ ಉತ್ಪಾದಕರ ವಿಶ್ವದ ಪಟ್ಟಿಯಲ್ಲಿ ಭಾರತ ಪ್ರಸ್ತುತ ಮೊದಲ 10ರ ಪಟ್ಟಿಯಲ್ಲಿದೆ. ಅಮೆರಿಕ ಪ್ರಥಮ ಸ್ಥಾನದಲ್ಲಿದೆ.
ಕರ್ನಾಟಕದಲ್ಲಿ ಅಪೌಷ್ಟಿಕತೆಯನ್ನು ನಿವಾರಿಸಲು ಬಯೋಟೆಕ್ ಇಂಜಿನಿಯರ್ ಆರ್.ವಿ. ಮಹೇಶ್ ನೇತೃತ್ವದಲ್ಲಿ ಸ್ಪಿರುಲಿನ ಫೌಂಡೇಷನ್' ಸೇವಾಮನೋಭಾವದಿಂದ ಪ್ರಾರಂಭವಾಗಿದೆ.
ಫೌಂಡೇಷನ್ ರಾಯಚೂರುನ ದೇವದುರ್ಗ ತಾಲೂಕಿನ, ತುಮಕೂರಿನ ಗುಲೂರು ಪ್ರಾಥಮಿಕ ಆರೋಗ್ಯ ಕೇಂದ್ರ, ಬೆಂಗಳೂರಿನ ರಾಜಾಜಿನಗರದ ಆಶ್ರಯ ಟ್ರಸ್ಟ್ ನಲ್ಲಿ 60 ವೃದ್ಧ ಮಹಿಳೆಯರಿಗೆ, ಬಿಜಾಪುರದ 25 ಅನಾಥ ಮಕ್ಕಳಿಗೆ, ತುಮಕೂರಿನ ಬಾಪೂಜಿ ಆಶ್ರಮದ 60 ಅಪೌಷ್ಟಿಕ ಮಕ್ಕಳಿಗೆ ರೋಟರಿ ನೆರವಿನಿಂದ, ಸಿದ್ಧಗಂಗಾ ಮಠದ 1000 ವಿದ್ಯಾರ್ಥಿಗಳಿಗೆ, ಹಾಸನದ 25 ಮಕ್ಕಳಿಗೆ, ದೊಡ್ಡಜಾಲಹಳ್ಳಿಯ 500 ಮಕ್ಕಳು - ಗೃಹಿಣಿಯರಿಗೆ, ಉತ್ತರಖಾಂಡದಲ್ಲಿ ಸಂಭವಿಸಿದ ಪ್ರವಾಹದಲ್ಲಿ ಅನಾರೋಗ್ಯಕ್ಕೆ ತುತ್ತಾದವರಿಗೂ 'ಸ್ಪಿರುಲಿನ' ನೀಡಿ ಉತ್ತಮವಾದ ಫಲಿತಾಂಶ ಪಡೆದಿದೆ.
1990ರಲ್ಲಿ ಚೆನ್ನೈನ 5000 ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿ ಊಟದ ಜೊತೆ ಆರು ತಿಂಗಳಕಾಲ, 2009, 2010ರಲ್ಲಿ ಮೈಸೂರಿನ ಬಿಳಿಗಿರಿರಂಗನ ಬೆಟ್ಟದ ವ್ಯಾಪ್ತಿಯ ಬುಡಕಟ್ಟು ಜನರಿಗೆ 'ಸ್ಪಿರುಲಿನ' ನೀಡಲಾಯಿತು.

'ಸ್ಪಿರುಲಿನ' ಸೇವಿಸಿದವರಲ್ಲಿಯ ಅಂಧತ್ವ, ಚರ್ಮ, ಬೊಜ್ಜು, ಪೌಷ್ಟಿಕಾಂಶ - ರಕ್ತಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಸುಧಾರಿಸಿ ಆರೋಗ್ಯವಂತರನ್ನಾಗಿಸಿದೆ.
ಬಳ್ಳಾರಿ ಜಿಲ್ಲೆಯ ಮಕ್ಕಳು - ಮಹಿಳೆಯರಲ್ಲಿ ಅಪೌಷ್ಟಿಕಾಂಶ ನಿವಾರಣೆ ಮಾಡಲು 'ಸ್ಪಿರುಲಿನ ಫೌಂಡೇಷನ್' ಮತ್ತು ಜಿಂದಾಲ್ ನ ಸಹಭಾಗಿತ್ವದಲ್ಲಿ ಅಂಗನವಾಡಿ ಮೂಲಕ ಮಕ್ಕಳು, ಮಹಿಳೆಯರಿಗೆ ಸ್ಪಿರುಲಿನ ಹಂಚಿಕೆ ಮಾಡಲು 3 ಕೋಟಿ ರೂಪಾಯಿ ವೆಚ್ಚದ ಯೋಜನೆ ಸಿದ್ಧವಾಗಿದ್ದು, ಜೂನ್ 5 ರ ಗುರುವಾರ ಜಿಲ್ಲೆಯಲ್ಲಿ ಚಾಲನೆ ಪಡೆಯುವ ಸಾಧ್ಯತೆಗಳಿವೆ.
'ಸ್ಪಿರುಲಿನ' ಸೇವನೆ ಮಾಡಿದ ಪ್ರತಿಯೊಬ್ಬರ ಸಮಗ್ರ ಮಾಹಿತಿಯನ್ನು ದಾಖಲಿಸಲು 'ಸ್ಪಿರುಲಿನ ಫೌಂಡೇಷನ್' ನಿರ್ಧರಿಸಿ ಪ್ರತ್ಯೇಕ ಸಾಫ್ಟ್ ವೇರ್ ರೂಪಿಸಿದೆ. ಅಮೆರಿಕದ 2 ಯೂನಿವರ್ಸಿಟಿಗಳು, ಜೈಪುರದ ಸಂಶೋಧನಾ ತಂಡ ಜಿಲ್ಲೆಯಲ್ಲಿ ಸಂಶೋಧನೆ ನಡೆಸಲಿವೆ. ಐಎಎಸ್ ಅಧಿಕಾರಿ ಸಿ.ಎಸ್. ಕೇದಾರ್ 8 ತಿಂಗಳಿಂದ ಹಗಲಿರುಳು ಶ್ರಮಿಸಿ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತರುತ್ತಿದ್ದಾರೆ.
ಪುಟ್ಬಾಲ್ ಆಟಗಾರ ಮೆರೆಡೋನ, ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ, ನೇತಾರೆ ಹಿಲರಿ ಕ್ಲಿಂಟನ್ 'ಸ್ಪಿರುಲಿನ' ಸೇವನೆಗೆ ಪ್ರೋತ್ಸಾಹಿಸುವ ರಾಯಭಾರಿಗಳು.
'ಸ್ಪಿರುಲಿನ ಫೌಂಡೇಷನ್'ನ ರೂವಾರಿ ಆರ್.ವಿ. ಮಹೇಶ್ ತುಮಕೂರಿನವರು. ಸೈಯದ್ ಮುಜಾಹಿತ್ ಇವರ ಕನಸಿಗೆ ಜೊತೆಯಾಗಿದ್ದಾರೆ. ಇಬ್ಬರೂ ಬಯೋಟೆಕ್ ಇಂಜಿನಿರಿಂಗ್ ಪದವೀಧರರು.
ಆಸಕ್ತರು ಆರ್.ವಿ. ಮಹೇಶ್, ಅಧ್ಯಕ್ಷರು, 'ಸ್ಪಿರುಲಿನ ಫೌಂಡೇಷನ್', 2ನೇ ಮೇನ್, 4ನೇ ಕ್ರಾಸ್, ಶ್ರೀನಗರ, ಕ್ಯಾತ್ಸಂದ್ರ. ತುಮಕೂರು. ಪಿನ್ - 572104. ಮೊಬೈಲ್ : 8904456566ಗೆ ಸಂಪರ್ಕಿಸಿ. ಇಮೇಲ್ - [email protected]












Click it and Unblock the Notifications