ಬಳ್ಳಾರಿ to ಬೆಂಗಳೂರು ಪಾದಯಾತ್ರೆಗೆ ಗಣ್ಯರಿಂದ ಚಾಲನೆ
ಬಳ್ಳಾರಿ, ಮಾರ್ಚ್. 23 - ಬಳ್ಳಾರಿಯ ಆರ್ಟಿಐ ಕಾರ್ಯಕರ್ತ, ಅಣ್ಣಾ ಫೌಂಡೇಶನ್ನ ಸಂಚಾಲಕ ರಾಜಶೇಖರ ಮುಲಾಲಿ ಹಮ್ಮಿಕೊಂಡಿರುವ ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣಕ್ಕಾಗಿ, ಭ್ರಷ್ಟಾಚಾರ ಮುಕ್ತ ಚುನಾವಣೆಗಾಗಿ' ಬಳ್ಳಾರಿಯಿಂದ ಬೆಂಗಳೂರು ವರೆಗಿನ ಪಾದಯಾತ್ರೆ ಶುಕ್ರವಾರ ಬೆಳಗ್ಗೆ ಪ್ರಾರಂಭವಾಗಿದ್ದು, ಇಂದು 20 ರಿಂದ 25 ಕಿಮೀ ಕ್ರಮಿಸುವ ಗುರಿಯನ್ನು ಹೊಂದಿದೆ.
ಶುಕ್ರವಾರ ಬೆಳಗ್ಗೆ ಬಳ್ಳಾರಿಯ ಎಚ್ಆರ್ಜಿ (ಮೋತಿ) ವೃತ್ತದಲ್ಲಿ ಸಭೆ ಸೇರಿದ್ದ ರಾಜಶೇಖರ ಮುಲಾಲಿ ನೇತೃತ್ವದ ತಂಡದ ಸದಸ್ಯರು, ರಾಷ್ಟ್ರಗೀತೆ ಹಾಡಿ, ರಾಷ್ಟ್ರಧ್ವಜಕ್ಕೆ ವಂದನೆ ಸಲ್ಲಿಸಿ, ಬಸವಣ್ಣನವರ ಪುತ್ಥಳಿಗೆ ಹೂಮಾಲೆ ಸಲ್ಲಿಸಿದರು.
ರಾಜಶೇಖರ ಮುಲಾಲಿ ನೇತೃತ್ವದ ಪಾದಯಾತ್ರೆಯ ಸದಸ್ಯರಿಗೆ ಸ್ವೀಪ್ನ ಮುಖ್ಯಸ್ಥ, ಐಎಎಸ್ ಅಧಿಕಾರಿ ಡಾ. ಕೆ.ವಿ. ರಾಜೇಂದ್ರ ಅವರು ಪ್ರಮಾಣವಚನ ಬೋಧಿಸಿ, ತಂಡಕ್ಕೆ ಶುಭ ಹಾರೈಸಿ ಬೀಳ್ಕೊಟ್ಟು, ಮಾರ್ಗದುದ್ದಕ್ಕೂ ತಂಡವು ಸುರಕ್ಷಿತವಾಗಿ ಸಂಚರಿಸಲಿ ಎಂದು ಹಾರೈಸಿದರು.

ನಿವೃತ್ತ ಪ್ರಾಧ್ಯಾಪಕ ವಸ್ತ್ರದ್, ಕಮ್ಮರಚೇಡು ಕಲ್ಯಾಣ ಶ್ರೀಗಳು, ನಂದಿಪುರ ಮಹೇಶ್ವರ ಶ್ರೀಗಳು, ರೈತ ಮುಖಂಡ ದರೂರು ಪುರಷೋತ್ತಮಗೌಡ ಸೇರಿದಂತೆ ಅನೇಕ ಗಣ್ಯರು, ಪಾದಯಾತ್ರೆಗೆ ಶುಭ ಹಾರೈಸಿ, ಪಾದಯಾತ್ರೆಯೊಂದಿಗೆ ತಾವೂ ಕೆಲ ಹೊತ್ತು ಹೆಜ್ಜೆ ಹಾಕಿದರು.
ಪಾದಯಾತ್ರೆಯನ್ನು ಫೇಸ್ಬುಕ್, ಯೂಟ್ಯೂಬ್ಗಳಲ್ಲಿ ಸಾರ್ವಜನಿಕರು ಲೈವ್ ಆಗಿ ವೀಕ್ಷಿಸಬಹುದಾಗಿದೆ. ಅಲ್ಲದೇ, ಆಸಕ್ತರು 99860 62008 ಅಥವಾ 94480 00960ಗೆ ಸಂಪರ್ಕಿಸಬಹುದಾಗಿದೆ.












Click it and Unblock the Notifications