ಜನತಾ ಕರ್ಫ್ಯೂ ದಿನ ಟಿಕ್ಟಾಕ್ ಮಾಡಲು ಹೋಗಿ ಯುವಕ ಸಾವು
ಬಳ್ಳಾರಿ, ಮಾರ್ಚ್ 23: ಜನತಾ ಕರ್ಫ್ಯೂ ದಿನ ಟಿಕ್ಟಾಕ್ ಮಾಡಲು ಹೋಗಿ ಯುವಕ ಮೃತಪಟ್ಟಿರುವ ಘಟನೆ ಬಳ್ಳಾರಿಯಲ್ಲಿ ಭಾನುವಾರ ನಡೆದಿದೆ.
ಕೂಡ್ಲಿಗಿ ತಾಲೂಕಿನ ರಾಮದುರ್ಗ ಕೆರೆಯಲ್ಲಿ ಭಾನುವಾರ ಸಂಜೆ ಈ ದುರ್ಘಟನೆ ನಡೆದಿದೆ. ಚೋರನೂರು ಗ್ರಾಮದ ನಿವಾಸಿ ಚೇತು ಮೃತ ಯುವಕ. ಜನತಾ ಕರ್ಫ್ಯೂ ದಿನವೇ ಕೆರೆಯಲ್ಲಿ ಟಿಕ್ಟಾಕ್ ಮಾಡಲು ಹೋಗಿ ನೀರಿನಲ್ಲಿ ಮುಳುಗಿ ಸಾವಿಗೀಡಾಗಿದ್ದಾನೆ.
ಕೊರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಭಾನುವಾರ ದೇಶಾದ್ಯಂತ ಜನತಾ ಕರ್ಫ್ಯೂಗೆ ಕರೆ ನೀಡಿದ್ದರು. ಅಂದು ಯಾರೂ ಕೂಡ ಮನೆಯಿಂದ ಹೊರಬಂದಿರಲಿಲ್ಲ. ಆದರೆ ಈ ಯುವಕ ಟಿಕ್ ಟಾಕ್ ಮಾಡಲು ಹೋಗಿ ಪ್ರಾಣ ಕಳೆದುಕೊಂಡಿದ್ದಾರೆ.

ಮೃತ ಯುವಕ ಬಟ್ಟೆ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ, ಅಂದು ರಜೆ ಇದ್ದಿದ್ದರಿಂದ ಸ್ನೇಹಿತರ ಜೊತೆ ಈಜಲು ಕೆರೆಗೆ ಹೋಗಿದ್ದ. ಸ್ನೇಹಿತರೊಂದಿಗೆ ಕೆರೆಯ ತೂಬಿನಿಂದ ಡ್ಯಾನ್ಸ್ ಮಾಡುತ್ತಾ ನೀರಿಗೆ ಹಾರಿದ್ದ.
ಆದರೆ ನೀರಿಗೆ ಹಾರಿದ ಮೂವರಲ್ಲಿ ಇಬ್ಬರು ಮಾತ್ರ ಹೊರಬಂದಿದ್ದು, ಚೇತು ಸಾವನ್ನಪ್ಪಿದ್ದಾನೆ. ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು ಪರಿಶೀಲನೆ ನಡೆಸಿದ್ದಾರೆ.












Click it and Unblock the Notifications