ಅನರ್ಹ ಶಾಸಕರ ಹಿತ ಮುಖ್ಯ ಅಲ್ಲ; ವಿಜಯನಗರ ಜಿಲ್ಲೆ ರಚನೆಗೆ ಜಿಲ್ಲಾ ಹೋರಾಟ ಸಮಿತಿ ವಿರೋಧ
ಬಳ್ಳಾರಿ, ಸೆಪ್ಟೆಂಬರ್ 21: ಗಣಿನಾಡು ಬಳ್ಳಾರಿ ಜಿಲ್ಲೆಯನ್ನು ವಿಭಾಗಿಸಿ ಹೊಸದಾಗಿ ವಿಜಯನಗರ ಜಿಲ್ಲೆ ರಚನೆಗೆ ಬಳ್ಳಾರಿ ಜಿಲ್ಲಾ ಹೋರಾಟ ಸಮಿತಿ ವಿರೋಧ ವ್ಯಕ್ತಪಡಿಸಿದೆ.
ಸಮಿತಿಯ ಮುಖಂಡರಾದ ಕುಡುತಿನಿ ಶ್ರೀನಿವಾಸ್, ಟಪಾಲ್ ಗಣೇಶ್, ಮೇಕಲ ಈಶ್ವರ ರೆಡ್ಡಿ. ದರೂರು ಪುರುಷೋತ್ತಮಗೌಡ, ಶಾಂತನಗೌಡ, ಸಿದ್ದರಾಮ ಕಲ್ಮಠ ಮೊದಲಾದವರು ನಗರದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿದರು. ಅಖಂಡ ಬಳ್ಳಾರಿ ಜಿಲ್ಲೆ ಹಾಗೇ ಉಳಿಯಬೇಕು. ಒಂದೊಮ್ಮೆ ವಿಭಜನೆ ಮಾಡಲೇಬೇಕೆಂದರೆ ಹೊಸಪೇಟೆಯನ್ನು ಬಿಟ್ಟು, ಕೂಡ್ಲಿಗಿ, ಹಡಗಲಿ, ಕೊಟ್ಟೂರು, ಹರಪನಹಳ್ಳಿ, ಕೂಡ್ಲಿಗಿ ಯಾವುದಾದರು ಒಂದು ಪಟ್ಟಣವನ್ನು ಕೇಂದ್ರವನ್ನಾಗಿಸಲಿ ಎಂದು ಒತ್ತಾಯಿಸಿದರು.
ಸಂಪಾದಕರಿಗೆ ಪತ್ರ: ವಿಜಯನಗರ ಜಿಲ್ಲೆ ಅಸ್ತಿತ್ವಕ್ಕೆ ಬಂದರೆ ಬರೀ ತೊಂದರೆ
"ಹೊಸ ಜಿಲ್ಲೆ ಬೇಕೆಂದು ಯಾರೂ ಕೇಳಿರಲಿಲ್ಲ. ಆದರೆ ಉಪ ಚುನಾವಣೆ ಬರುತ್ತಿರುವುದರಿಂದ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಅನರ್ಹ ಶಾಸಕ ಆನಂದ್ ಸಿಂಗ್ ಅವರು ವಿಜಯನಗರ ಜಿಲ್ಲೆ ರಚನೆಗೆ ಮುಂದಾಗಿದ್ದಾರೆ. ಅದಕ್ಕಾಗಿ ನಮ್ಮ ವಿರೋಧವಿದೆ. ಮುಖ್ಯಮಂತ್ರಿ ಸ್ಥಾನ ಉಳಿಸಿಕೊಳ್ಳಲು ಯಡಿಯೂರಪ್ಪ ಆನಂದ್ ಸಿಂಗ್ ಮಾತಿಗೆ ಬೆಲೆ ಕೊಡುತ್ತಿದ್ದಾರೆ. ನೂತನ ತಾಲೂಕುಗಳಿಗೆ ಇನ್ನೂ ಸೌಲಭ್ಯಗಳು ಸಿಕ್ಕಿಲ್ಲ. ಇನ್ನು ಹೊಸ ಜಿಲ್ಲೆ ರಚನೆಯಾದರೆ ಅಭಿವೃದ್ಧಿ ಸಾಧ್ಯವೇ" ಎಂದು ಪ್ರಶ್ನಿಸಿದರು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದರಾಮಕಲ್ಮಠ ಅವರು, ಜಿಲ್ಲೆಯ ಎಲ್ಲಾ 11 ತಾಲೂಕುಗಳ ಜನಾಭಿಪ್ರಾಯ ಪಡೆದು ಈ ಕಾರ್ಯ ನಡೆಯಬೇಕು. ಜಿಲ್ಲೆಯ ಸಂಘ ಸಂಸ್ಥೆಗಳ, ಸಾಹಿತಿಗಳ, ಕಲಾವಿದರ, ಕಾರ್ಮಿಕ ಒಕ್ಕೂಟಗಳ, ರೈತ ಸಂಘಟನೆಯವರ, ಕನ್ನಡ ಪರ ಸಂಘಟನೆಗಳ ಸಲಹೆ ಪಡೆಯದೆ ದಿಢೀರ್ ನಿರ್ಧಾರ ಮಾಡಬಾರದು ಎಂದರು. ಅಖಂಡ ಜಿಲ್ಲೆಗಾಗಿ ಸೆ. 22 ರಂದು ದುರ್ಗಮ್ಮ ದೇವಸ್ಥಾನದಿಂದ ಪ್ರತಿಭಟನೆ ಮಾಡಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು. ಸೆ. 24ರಂದು ಉಪವಾಸ ಸತ್ಯಾಗ್ರಹ, ಸೆ.26ರಂದು ಕಪ್ಪು ಪಟ್ಟಿ ಪ್ರದರ್ಶನ, ನಂತರ ಪಂಜಿನ ಮೆರವಣಿಗೆ... ಹೀಗೆ ನಿರಂತರ ಹೋರಾಟ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಹೊಸ ಜಿಲ್ಲೆ ರಚನೆಗೆ ಯಡಿಯೂರಪ್ಪ ಆಸಕ್ತಿ, ಅಧಿಕೃತ ಆದೇಶ ಬಾಕಿ
ವಿಜಯನಗರ ಜಿಲ್ಲೆ ರಚನೆಗೆ ಬೆಂಬಲಿಸಿ ವಿಧಾನಪರಿಷತ್ ಸದಸ್ಯರಾದ ಅಲ್ಲಂ ವೀರಭದ್ರಪ್ಪ, ಕೆ.ಸಿ.ಕೊಂಡಯ್ಯ ಅವರು ಮನವಿ ಸಲ್ಲಿಸಿರುವುದಕ್ಕೆ ಬೆಂಬಲ ನೀಡಿರುವುದು ಸರಿಯಲ್ಲ, ನಿಮ್ಮ ನಿರ್ಧಾರ ಬದಲಿಸಿಕೊಳ್ಳಿ ಎಂದು ಮೇಕಲ ಈಶ್ವರರೆಡ್ಡಿ ಪ್ರತಿಕ್ರಿಯಿಸಿದರು.