ಬಳ್ಳಾರಿ-ಸವದತ್ತಿಗೆ ನೂತನ ಬಸ್ ಸೇವೆ ಆರಂಭ
ಬಳ್ಳಾರಿ, ಫೆಬ್ರವರಿ 06; ಬಳ್ಳಾರಿಯಲ್ಲಿರುವ ಸವದತ್ತಿ ಯಲ್ಲಮ್ಮನ ಕ್ಷೇತ್ರದ ಭಕ್ತಾದಿಗಳ ಬಹುದಿನಗಳ ಬೇಡಿಕೆಗೆ ಸಾರಿಗೆ ಇಲಾಖೆ ಸ್ಪಂದಿಸಿದೆ. ಬಳ್ಳಾರಿಯಿಂದ ಸವದತ್ತಿಗೆ ನೂತನ ಬಸ್ ಸೇವೆ ಭಾನುವಾರದಿಂದ ಆರಂಭವಾಗಿದೆ.
ಸಾರಿಗೆ, ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಬಿ. ಶ್ರೀರಾಮುಲು ನೂತನ ಬಸ್ಗೆ ಹಸಿರು ನಿಶಾನೆ ತೋರಿಸಿದರು. ಬಳ್ಳಾರಿಯಿಂದ ಬೆಳಗ್ಗೆ 8ಕ್ಕೆ ಹೊರಡಲಿರುವ ಬಸ್ ಸವದತ್ತಿಗೆ ಮಧ್ಯಾಹ್ನ 2ಕ್ಕೆ ತಲುಪಲಿದೆ.
ಸವದತ್ತಿಯಿಂದ ಮಧ್ಯಾಹ್ನ 2.30ಕ್ಕೆ ಬಳ್ಳಾರಿಗೆ ಈ ಬಸ್ ಹೊರಡಲಿದೆ. ಈ ಬಸ್ಗಳ ಪ್ರಯಾಣ ದರ 263 ರೂ.ಗಳ ದರ ಇದೆ. ಬಳ್ಳಾರಿಯಿಂದ ಹೊಸಪೇಟೆ, ಕೊಪ್ಪಳ, ಗದಗ, ನವಲಗುಂದ, ಯಲ್ಲಮ್ಮನ ಗುಡ್ಡದ ಮಾರ್ಗವಾಗಿ ಸವದತ್ತಿಗೆ ತೆರಳಲಿದೆ.

ಬಸ್ ಸಂಚಾರಕ್ಕೆ ಚಾಲನೆ ನೀಡಿದ ನಂತರ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಶ್ರೀರಾಮುಲು, "ಬಳ್ಳಾರಿಯಿಂದ ತಿರುಪತಿ, ಶ್ರೀಶೈಲ, ಧರ್ಮಸ್ಥಳ, ಮಂತ್ರಾಲಯ ಸೇರಿದಂತೆ ವಿವಿಧ ಧಾರ್ಮಿಕ ಕ್ಷೇತ್ರಗಳಿಗೆ ಬಸ್ ಸೇವೆ ಆರಂಭಿಸಲಾಗಿದೆ" ಎಂದರು.
"ಈ ಬಾರಿಯ ಬಜೆಟ್ನಲ್ಲಿ ಸಾರಿಗೆ ಇಲಾಖೆಯನ್ನು ಮುಂದಿನ ದಿನಗಳಲ್ಲಿ ಲಾಭದಯಕವನ್ನಾಗಿ ತೆಗೆದುಕೊಂಡು ಹೋಗುವ ನಿಟ್ಟಿನಲ್ಲಿ ಸಾರಿಗೆ ಇಲಾಖೆ ನೇಮಿಸಲಾದ ಶ್ರೀನಿವಾಸ್ಮೂರ್ತಿ ನೇತೃತ್ವದ ಉನ್ನತ ಸಮಿತಿ ವರದಿ ನೀಡಿದ್ದು, ಆ ವರದಿಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವುದರ ಮೂಲಕ ಇಲಾಖೆಯನ್ನು ಲಾಭದಾಯಕವನ್ನಾಗಿ ಮಾಡಲು ನಮ್ಮ ಸರ್ಕಾರ ಬದ್ಧವಾಗಿದೆ" ಎಂದು ಹೇಳಿದರು.
"1 ಲಕ್ಷ ಗಾರ್ಮೆಂಟ್ಸ್ ಕಾರ್ಮಿಕರಿಗೆ ಉಚಿತವಾಗಿ ಬಸ್ ಪಾಸ್ ನೀಡಬೇಕು ಎನ್ನುವ ತೀರ್ಮಾನವನ್ನು ನಮ್ಮ ಮುಖ್ಯಮಂತ್ರಿಗಳು ಕೈಗೊಂಡಿದ್ದು, ಅದನ್ನು ಅನುಷ್ಠಾನಗೊಳಿಸಲಾಗುವುದು. ಕಟ್ಟಡ ಕಾರ್ಮಿಕರಿಗೂ ಉಚಿತ ಬಸ್ ನೀಡುವ ನಿಟ್ಟಿನಲ್ಲಿ ಕೆಲ ಜಿಲ್ಲೆಗಳಲ್ಲಿ ಫೈಲಟ್ ಕಾರ್ಯಕ್ರಮವನ್ನಾಗಿ ಮಾಡಲಾಗುವುದು. ನಂತರ ಅಲ್ಲಿ ಯಶಸ್ವಿಯಾಗಿರುವುದನ್ನು ನೋಡಿಕೊಂಡು ರಾಜ್ಯದ ಎಲ್ಲ ಜಿಲ್ಲೆಗಳಿಗೆ ವಿಸ್ತರಿಸಲಾಗುವುದು" ಎಂದರು.
"ಕಲ್ಯಾಣ ಕರ್ನಾಟಕ, ಮುಂಬೈ ಕರ್ನಾಟಕ ಪ್ರದೇಶಗಳಲ್ಲಿ ತುಂಬಾ ಹಳೆಯ ಬಸ್ಸುಗಳು ಓಡಾಡುತ್ತಿವೆ. ನಮ್ಮ ಇಲಾಖೆಯಲ್ಲಿ ಸುಮಾರು 40 ಸಾವಿರ ಹಳೆಯ ಬಸ್ಗಳಿವೆ. ಡಿಸೇಲ್ಗಳಿಂದ ಬಹಳಷ್ಟು ನಷ್ಟವನ್ನು ಇಲಾಖೆ ಅನುಭವಿಸುತ್ತಿದೆ. ಮುಂದಿನ ದಿನಗಳಲ್ಲಿ ಎಲ್ಲ ಬಸ್ಗಳನ್ನು ಸಿಎನ್ಜಿ ಬಸ್ಗಳನ್ನಾಗಿ ಮಾಡಲಾಗುವುದು" ಎಂದು ಸಚಿವರು ಮಾಹಿತಿ ನೀಡಿದರು.
"ಸರಕಾರ ಹಂತಹಂತವಾಗಿ ಎಲೆಕ್ಟ್ರಿಕ್ ಬಸ್ಗಳನ್ನು ಖರೀದಿ ಮಾಡಲು ಉದ್ದೇಶಿಸಿದೆ. ಹಂತಹಂತವಾಗಿ ಉತ್ತರ ಕರ್ನಾಟಕಕ್ಕೆ ಒಳ್ಳೆಯ ಬಸ್ಗಳನ್ನು ನೀಡುವ ಕೆಲಸವನ್ನು ಇಲಾಖೆ ಮಾಡಲಿದೆ" ಎಂದು ಸಚಿವರು ಹೇಳಿದರು.
ಬಸ್ಗೆ ಚಾಲನೆ ನೀಡುವ ಸಂದರ್ಭದಲ್ಲಿ ಬಳ್ಳಾರಿ ನಗರ ಶಾಸಕ ಜಿ. ಸೋಮಶೇಖರ ರೆಡ್ಡಿ, ಬಳ್ಳಾರಿ ಗ್ರಾಮೀಣ ಶಾಸಕ ನಾಗೇಂದ್ರ, ಬುಡಾ ಅಧ್ಯಕ್ಷ ಪಾಲನ್ನ, ಎಪಿಎಂಸಿ ಅಧ್ಯಕ್ಷ ಉಮೇಶ, ಮಾಜಿ ಸಂಸದರಾದ ಜೆ. ಶಾಂತಾ ಮುಂತಾದವರು ಉಪಸ್ಥಿತರಿದ್ದರು.












Click it and Unblock the Notifications