ಬಳ್ಳಾರಿಯಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಡಾ. ಶ್ರೀನಿವಾಸ್
ಬಳ್ಳಾರಿ, ಅಕ್ಟೋಬರ್ 15: ಬಳ್ಳಾರಿ ಲೋಕಸಭೆ ಉಪ ಚುನಾವಣೆಯಲ್ಲಿ ಬಿಜೆಪಿ ಬಂಡಾಯ ಎದುರಿಸುತ್ತಿದೆ. ಟಿಕೆಟ್ ಆಕಾಂಕ್ಷಿಯಾಗಿದ್ದ ಡಾ. ಶ್ರೀನಿವಾಸ್ ಅವರು ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ಘೋಷಿಸಿದ್ದಾರೆ.
ಬಳ್ಳಾರಿ ಸಂಸದ ಬಿ ಶ್ರೀರಾಮುಲು ಅವರು ಮೊಳಕಾಲ್ಮೂರು ಕ್ಷೇತ್ರದಿಂದ ವಿಧಾನಸಭೆಗೆ ಸ್ಪರ್ಧಿಸಿ ಆಯ್ಕೆಯಾದ ಹಿನ್ನಲೆಯಲ್ಲಿ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಹೀಗಾಗಿ, ಇಲ್ಲಿ ಉಪ ಚುನಾವಣೆ ನಡೆಯುತ್ತಿದೆ.
ಶ್ರೀರಾಮುಲು ಅವರ ಸೋದರಿ, ಮಾಜಿ ಸಂಸದೆ ಜೆ. ಶಾಂತಾ ಅವರಿಗೆ ಟಿಕೆಟ್ ನೀಡಿರುವುದನ್ನು ವಿರೋಧಿಸಿ ಟಿಕೆಟ್ಆಕಾಂಕ್ಷಿ ಮಾನಸಿಕ ತಜ್ಞ ಡಾ.ಶ್ರೀನಿವಾಸ್ ಅವರು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ ಹಾಗೂ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ.

'ಕಳೆದ ಐದಾರು ವರ್ಷಗಳಿಂದ ನಾನು ಬಿಜೆಪಿಯಲ್ಲಿ ಸಕ್ರಿಯನಾಗಿದ್ದೇನೆ. ಮೂರ್ನಾಲ್ಕು ಬಾರಿ ನನಗೆ ಬೇರೆ, ಬೇರೆ ಚುನಾವಣೆಯಲ್ಲಿ ಟಿಕೆಟ್ ಕೈ ತಪ್ಪಿದೆ. ಇದರಿಂದ ಬೇಸತ್ತು ನಾನು ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಸ್ವತಂತ್ರ ಅಭ್ಯರ್ಥಿಯಾಗಿ ಲೋಕಸಭೆ ಉಪಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿದ್ದೇನೆ" ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
'ನಿಷ್ಠಾವಂತನಾದ ನನಗೆ ಶಿಸ್ತಿನ ಪಕ್ಷದಲ್ಲಿ ಟಿಕೆಟ್ ದೊರಕಿಲ್ಲ. ಪ್ರಾಮಾಣಿಕ ಕಾರ್ಯಕರ್ತರನ್ನು ಗುರುತಿಸುವ ಕೆಲಸವನ್ನು ಬಿಜೆಪಿ ಮಾಡಬೇಕಿತ್ತು. ಬಳ್ಳಾರಿ ಬಿಜೆಪಿಯಲ್ಲಿ ಕುಟುಂಬ ರಾಜಕಾರಣ ಹೆಚ್ಚಾಗುತ್ತಿದೆ' ಎಂದರು.
"ಬಳ್ಳಾರಿ ಜಿಲ್ಲೆಯಾದ್ಯಾಂತ ನಾನು ವೈದ್ಯಕೀಯ ಸೇವೆ ನೀಡಿದ್ದೇನೆ. ಜಿಲ್ಲೆಯಲ್ಲಿ ನನಗೆ ಒಡನಾಟವಿದೆ. ನಾನು ಗೆಲ್ಲುವ ಅವಕಾಶವಿದೆ, ಒಂದಿಷ್ಟು ತಿಂಗಳಲ್ಲ ಒಂದೇ ಒಂದು ದಿನ ಸಿಕ್ಕರೂ ನಾನು ಜನರ ಸೇವೆ ಮಾಡುತ್ತೇನೆ," ಎಂದರು.












Click it and Unblock the Notifications