ಬಳ್ಳಾರಿ ಚುನಾವಣಾ ಚಿತ್ರಣ; ಶ್ರೀರಾಮುಲು v/s ತುಕಾರಾಮ್
ಬಳ್ಳಾರಿ, ಏಪ್ರಿಲ್ 29: ಬಳ್ಳಾರಿ ಮೀಸಲು ಲೋಕಸಭಾ ಕ್ಷೇತ್ರದ ಚುನಾವಣೆಯ ಕಾವು ಏರಿದೆ. ಮೇ 7ರಂದು ನಡೆಯುವ ಚುನಾವಣಾ ಕಣದಲ್ಲಿ 10 ಅಭ್ಯರ್ಥಿಗಳು ಇದ್ದಾರೆ. ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹೊಸಪೇಟೆಯಲ್ಲಿ ಬೃಹತ್ ಸಮಾವೇಶ ಉದ್ದೇಶಿಸಿ ಮಾತನಾಡುವ ಮೂಲಕ ಪ್ರಚಾರವನ್ನು ಸಹ ನಡೆಸಿದ್ದಾರೆ.
ಬಳ್ಳಾರಿ ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಈ. ತುಕಾರಾಮ್, ಬಿಜೆಪಿ ಅಭ್ಯರ್ಥಿ ಬಿ. ಶ್ರೀರಾಮುಲು ನಡುವೆ ನೇರ ಪೈಪೋಟಿ ಇದೆ. 2023ರ ವಿಧಾನಸಭೆ ಚುನಾವಣೆಯಲ್ಲಿ ಸೋಲು ಕಂಡಿದ್ದ ಶ್ರೀ ರಾಮುಲು ಲೋಕಸಭೆ ಚುನಾವಣೆ ಟಿಕೆಟ್ ಪಡೆದಿದ್ದಾರೆ.

2019ರ ಚುನಾವಣೆಯಲ್ಲಿ ಬಿಜೆಪಿಯ ವೈ. ದೇವೇಂದ್ರಪ್ಪ 616,388 ಮತಗಳನ್ನು ಪಡೆದು ಜಯಗಳಿಸಿದ್ದರು. ಈ ಬಾರಿ ಹಾಲಿ ಸಂಸದರಿಗೆ ಟಿಕೆಟ್ ಕೈತಪ್ಪಿದ್ದು, ಶ್ರೀರಾಮುಲು ಅಭ್ಯರ್ಥಿ. ಕಳೆದ ಬಾರಿ ಕಾಂಗ್ರೆಸ್ನ ವಿ. ಎಸ್. ಉಗ್ರಪ್ಪ 560,681 ಮತಗಳನ್ನು ಪಡೆದು ಸೋಲು ಕಂಡಿದ್ದರು. ಈ ಬಾರಿ ಪಕ್ಷ ಅಭ್ಯರ್ಥಿ ಬದಲಾವಣೆ ಮಾಡಿದೆ.
ಬಳ್ಳಾರಿಯ ಕಣ ಹೇಗಿದೆ?; ಬಳ್ಳಾರಿ ಲೋಕಸಭೆ ಕದನದಲ್ಲಿ ಸತತ ಗೆಲುವು ಕಂಡಿದ್ದ ಕಾಂಗ್ರೆಸ್ 2004ರಲ್ಲಿ ಬಿಜೆಪಿ ಎದುರು ಸೋಲು ಕಂಡಿತು. 2018ರ ಉಪ ಚುನಾವಣೆಯಲ್ಲಿ ಕಾಂಗ್ರೆಸ್ನ ವಿ. ಎಸ್. ಉಗ್ರಪ್ಪ ಗೆದ್ದು 6 ತಿಂಗಳ ಅವಧಿಗೆ ಮಾತ್ರ ಸಂಸದರಾಗಿದ್ದರು.
ಕಾಂಗ್ರೆಸ್ ಈ ಬಾರಿ ಗೆಲ್ಲಬೇಕು ಎಂದು ಸಂಡೂರು ಕ್ಷೇತ್ರದ ಶಾಸಕ ಈ. ತುಕಾರಾಮ್ ಕಣಕ್ಕಿಳಿಸಿದೆ. ಸಚಿವರಾದ ಜಮೀರ್ ಅಹಮದ್ ಖಾನ್, ಬಿ. ನಾಗೇಂದ್ರ, ಸಂತೋಷ್ ಲಾಡ್ ಮತ್ತು ಕ್ಷೇತ್ರದ ವ್ಯಾಪ್ತಿಯಲ್ಲಿರುವ 6 ಕಾಂಗ್ರೆಸ್ ಶಾಸಕರು ಅಭ್ಯರ್ಥಿಗಳ ಗೆಲುವಿಗಾಗಿ ಪ್ರಯತ್ನ ನಡೆಸಿದ್ದಾರೆ.
2023ರ ವಿಧಾನಸಭೆ ಚುನಾವಣೆಯ ಸಮಯದಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಸ್ಥಾಪನೆ ಮಾಡಿ ಗಂಗಾವತಿಯಲ್ಲಿ ಗೆದ್ದ ಜನಾರ್ದನ ರೆಡ್ಡಿ ಬಿಜೆಪಿಗೆ ಬಂದಿದ್ದಾರೆ. ಜನಾರ್ದನ ರೆಡ್ಡಿ ಆಪ್ತ ಸ್ನೇಹಿತ ಬಿ. ಶ್ರೀರಾಮುಲು ಈ ಬಾರಿ ಲೋಕಸಭೆ ಚುನಾವಣೆ ಗೆಲ್ಲಲು ಇದು ಸಹಕಾರಿಯಾಗಲಿದೆ ಎಂದು ಅಂದಾಜಿಸಲಾಗಿದೆ.
ಬಿ. ಶ್ರೀರಾಮುಲು ಅವರಿಗೆ ಲೋಕಸಭೆ ಚುನಾವಣೆ ಹೊಸದಲ್ಲ. 2014 ರಲ್ಲಿ ಅವರು ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಬಳಿಕ 2018ರಲ್ಲಿ ವಿಧಾನಸಭೆ ಚುನಾವಣಾ ಕಣಕ್ಕಿಳಿದರು. ಮೋದಿ ಅಲೆ, ಜನಾರ್ದನ ರೆಡ್ಡಿ ಪ್ರಭಾವ ಇರುವ ಕಾರಣ ಶ್ರೀರಾಮುಲು ಗೆಲುವು ಸುಲಭವಾಗಲಿದೆ ಎಂದು ಅಂದಾಜಿಸಲಾಗಿದೆ.
ಬಳ್ಳಾರಿ ಕ್ಷೇತ್ರದ 18.65 ಲಕ್ಷ ಮತದಾರರಲ್ಲಿ 9.5 ಲಕ್ಷ ಮಹಿಳಾ ಮತದಾರರು ಇದ್ದಾರೆ. ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳು, ಕಾಂಗ್ರೆಸ್ ಪರವಾಗಿ ಮಹಿಳೆಯರು ಮತದಾನ ಮಾಡುತ್ತಾರೆ ಎಂಬ ಭರವಸೆ, 6 ಶಾಸಕರು ಇರುವುದು ಈ. ತುಕಾರಾಮ್ ಗೆಲುವಿಗೆ ಸಹಕಾರಿ ಎಂಬುದು ಲೆಕ್ಕಾಚಾರ.
ಭಾನುವಾರ ಹೊಸಪೇಟೆಯಲ್ಲಿ ನಡೆದ ಪ್ರಧಾನಿ ನರೇಂದ್ರ ಮೋದಿ ಸಮಾವೇಶ ಹೊಸಪೇಟೆ, ಬಳ್ಳಾರಿ ನಗರ, ಬಳ್ಳಾರಿ ಗ್ರಾಮಾಂತರ, ಕಂಪ್ಲಿ, ಹೂವಿನಹಡಗಲಿ ಕ್ಷೇತ್ರದ ಮೇಲೆ ಪ್ರಭಾವ ಬೀರಲಿದೆ. ಇದರಿಂದಾಗಿ ಬಿಜೆಪಿ ಅಭ್ಯರ್ಥಿಗೆ ಸಹಾಯವಾಲಿದೆ ಎಂದು ಅಂದಾಜಿಸಲಾಗುತ್ತಿದೆ.
ಬಳ್ಳಾರಿಗೂ ಕಾಂಗ್ರೆಸ್ ಪಕ್ಷಕ್ಕೂ ನಂಟಿದೆ. ಪಕ್ಷದ ನಾಯಕಿ ಸೋನಿಯಾ ಗಾಂಧಿ 1999ರ ಚುನಾವಣೆಯಲ್ಲಿ ಬಳ್ಳಾರಿಯಲ್ಲಿ ಕಣಕ್ಕಿಳಿದು ಗೆಲವು ಕಂಡಿದ್ದರು. ಬಿಜೆಪಿಯ ಸುಷ್ಮಾ ಸ್ವರಾಜ್ ಮತ್ತು ಕಾಂಗ್ರೆಸ್ನ ಸೋನಿಯಾ ಗಾಂಧಿ ಸ್ಪರ್ಧೆಯಿಂದ ಬಳ್ಳಾರಿ ದೇಶದ ಗಮನ ಸೆಳೆದಿತ್ತು.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಳ್ಳಾರಿಗೆ ಆಗಮಿಸಿ ಚುನಾವಣಾ ಪ್ರಚಾರ ನಡೆಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹೊಸಪೇಟೆ ಸಮಾವೇಶದ ಮೂಲಕ ಪ್ರಚಾರ ನಡೆಸಿದ್ದಾರೆ. ಮೇ 7ರಂದು ನಡೆಯಲಿರುವ ಚುನಾವಣಾ ಫಲಿತಾಂಶ ಜೂನ್ 4ರಂದು ಪ್ರಕಟವಾಗಲಿದೆ.












Click it and Unblock the Notifications