ಬಳ್ಳಾರಿ ಪಾಲಿಕೆ ಸದಸ್ಯನ ಕೊಲೆಗೆ ಯತ್ನ, ಒಬ್ಬನ ಬಂಧನ
ಬಳ್ಳಾರಿ, ಜನವರಿ 12: ಇಲ್ಲಿನ ಮಹಾನಗರ ಪಾಲಿಕೆಯ ಸದಸ್ಯ ಸೀತಾರಾಮ್ ಹತ್ಯೆಗೆ ಯತ್ನ ಮಾಡಲಾಗಿದ್ದು, ಸೀತಾರಾಮ್ ಅಪಾಯದಿಂದ ಪಾರಾಗಿದ್ದಾರೆ.
ಗುರುವಾರ ರಾತ್ರಿ 8 ಗಂಟೆ ಸುಮಾರಿಗೆ ಸೀತಾರಾಮ್ ಅವರ ಮನೆಯ ಬಳಿಯೇ ಅವರ ಮೇಲೆ ಖಾರದಪುಡಿ ಎರಚಿ ಲಾಂಗು, ಮಚ್ಚಿನಿಂದ ಹಲ್ಲೆಗೆ ಯತ್ನಿಸಿದ್ದಾರೆ ಆ ಸಮಯದಲ್ಲಿ ಸೀತಾರಾಮ್ ಬೆಂಬಲಿಗರು ಮತ್ತು ಸ್ಥಳೀಯರು ಸಹಾಯಕ್ಕೆ ಧಾವಿಸಿದ ಕಾರಣ ದಾಳಿಕೋರರು ಸ್ಥಳದಿಂದ ಕಾಲುಕಿತ್ತಿದ್ದಾರೆ.
ಆಂಧ್ರ ಪ್ರದೇಶದ ತಾಡಪತ್ರಿ ಮೂಲದ 8 ಮಂದಿ ಸೀತಾರಾಮ್ ಹತ್ಯೆಗೆ ಮುಂದಿಗಾಗಿದ್ದರು, ಆರೋಪಿಗಳ ಪೈಕಿ ಒಬ್ಬನನ್ನು ಸ್ಥಳೀಯರು ಹಿಡಿದು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಕೃತ್ಯಕ್ಕೆ ಬಳಕೆಯಾದ ಲಾಂಗ್, ಮಚ್ಚುಗಳನ್ನು ಜಪ್ತಿ ಮಾಡಲಾಗಿದೆ ಎಂದು ಎಪಿಎಂಸಿ ಠಾಣೆ ಪೊಲೀಸರು ತಿಳಿಸಿದ್ದಾರೆ.
ರೌಡಿ ಶೀಟರ್ ಆಗಿರುವ ಸೀತಾರಾಮ್ ಅವರ ಕೊಲೆಗೆ ಈ ಹಿಂದೆಯೂ ಯತ್ನ ನಡೆದಿತ್ತು ಅವರ ಮನೆ ಹತ್ತಿರವೇ ನಾಡ ಬಾಂಬ್ ದಾಳಿ ಮಾಡಲಾಗಿತ್ತು. ಆಗಲೂ ಅವರು ಪ್ರಾಣಾಪಾಯದಿಂದ ಪಾರಾಗಿದ್ದರು. ಸೀತಾರಾಮ್ ಅವರ ಹೆಸರು ಹಲವು ಕ್ರಿಮಿನಲ್ ಪ್ರಕರಣಗಳಲ್ಲಿ ಇವೆ ಹೀಗಾಗಿ ಹತ್ಯೆ ಯತ್ನ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.