ಬಳ್ಳಾರಿ; ಡಿಕೆಶಿಗೆ ಸೇಬಿನ ಹಾರ, ಸೇಬಿಗಾಗಿ ಮುಗಿಬಿದ್ದ ಜನರು
ಬಳ್ಳಾರಿ, ಸೆಪ್ಟೆಂಬರ್, 11: ಕಾಂಗ್ರೆಸ್ ಪಕ್ಷದಿಂದ ಭಾರತ್ ಜೋಡೊ ಯಾತ್ರೆಯನ್ನು ಕೈಗೊಳ್ಳಲಾಗಿದೆ. ಈ ಹಿನ್ನೆಲೆ ಬಳ್ಳಾರಿಯಲ್ಲಿ ಪೂರ್ವಭಾವಿ ಸಭೆ ಹಾಗೂ ಸ್ಥಳ ಪರಿಶೀಲನೆಗೆ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ನಗರಕ್ಕೆ ಆಗಮಿಸಿದ್ದಾರೆ. ಅದ್ಧೂರಿಯಾಗಿ ಅವರನ್ನು ಸ್ವಾಗತಿಸಿದ್ದು, ಸೇಬು ಹಣ್ಣಿನ ಹಾರವನ್ನು ಸಿದ್ಧಪಡಿಸಲಾಗಿತ್ತು.
ನಗರದ ಸುಧಾ ಕ್ರಾಸ್ನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ಗೆ ಬೃಹತ್ ಸೇಬಿನ ಹಾರ ಹಾಕಿ ಸ್ವಾಗತಿಸಲಾಯಿತು. ಅಭಿಮಾನಿಗಳು ಕ್ರೇನ್ ಬಳಸಿ ಸೇಬಿನ ಹಾರ ಹಾಕಿದ್ದು, ಅವರನ್ನು ಭರ್ಜರಿಯಾಗಿ ಸ್ವಾಗತಿಸಿದರು.
200 ಕೆಜಿಗೂ ಹೆಚ್ಚು ಭಾರದ ಸೇಬಿನ ಹಾರವನ್ನು ಹಾಕಿದ ನಂತರ, ಜನರು ಹಣ್ಣಿಗಾಗಿ ನೂಕಾಟ ಶುರು ಮಾಡಿದ್ದಾರೆ. ಹಾರದಲ್ಲಿರುವ ಹಣ್ಣನ್ನು ಕಿತ್ತುಕೊಳ್ಳಲು ತಳ್ಳಾಟ, ನೂಕಾಟವೇ ನಡೆಯಿತು.

ಇನ್ನು ರಸ್ತೆಯಲ್ಲಿ ಬಿದ್ದಿದ್ದ ಹಣ್ಣುಗಳನ್ನು ಬಿಡದೇ ಜನರು ಆಯ್ದುಕೊಂಡರು. ಇದರಿಂದಾಗಿ ಸುಧಾ ಕ್ರಾಸ್ನಲ್ಲಿ ಟ್ರಾಫಿಕ್ ಜಾಮ್ ಉಂಟಾಯಿತು. ವಾಹನ ಸವಾರರು ಪರದಾಡಿದರು. ಪೊಲೀಸರು ಟ್ರಾಫಿಕ್ ಜಾಮ್ ತೆರವುಗೊಳಿಸಲು ಹರಸಾಹಸ ಪಟ್ಟರು.
ಕೇರಳ ಪ್ರವೇಶಿಸಿದ "ಭಾರತ್ ಜೋಡೋ" ಯಾತ್ರೆ; ಇನ್ನು ಕಾಂಗ್ರೆಸ್ ಪಕ್ಷದ 'ಭಾರತ್ ಜೋಡೋ' ಯಾತ್ರೆಯು ಪಕ್ಷದ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತದೆ. ಇಂದು ದೇವರ ನಾಡು ಕೇರಳವನ್ನು ಯಾತ್ರೆ ಪ್ರವೇಶಿಸಿದೆ. ಕೇರಳದ ತಿರುವನಂತಪುರಂ ಜಿಲ್ಲೆಯ ಪರಸ್ಸಾಲಾದಿಂದ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ನಾಯಕರು ಯಾತ್ರೆಯ 5ನೇ ದಿನವನ್ನು ಆರಂಭಿಸಿದರು.
ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮತ್ತು ಸಂಸದ ಕೆ. ಸುಧಾಕರನ್, ರಾಜ್ಯ ವಿಧಾನಸಭೆಯ ವಿರೋಧ ಪಕ್ಷದ ನಾಯಕ ವಿ. ಡಿ. ಸತೀಶನ್ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ತಾರಿಕ್ ಅನ್ವರ್ ಮತ್ತು ಇತರ ಹಿರಿಯ ಕಾಂಗ್ರೆಸ್ ನಾಯಕರು ಸ್ವಾಗತಿಸಿದ ನಂತರ ರಾಹುಲ್ ಗಾಂಧಿ ಅವರು ಯಾತ್ರೆಯನ್ನು ಪ್ರಾರಂಭಿಸಿದರು.
ಪಕ್ಷದ ಮಾಜಿ ಮುಖ್ಯಸ್ಥರನ್ನು ಸ್ವಾಗತಿಸಿದ ಪಕ್ಷದ ಇತರ ಹಿರಿಯ ನಾಯಕರಲ್ಲಿ ಕಾಂಗ್ರೆಸ್ ಸಂಸದರಾದ ಕೆ. ಸಿ. ವೇಣುಗೋಪಾಲ್ ಮತ್ತು ಶಶಿ ತರೂರ್ ಹಾಗೂ ಕೇರಳದ ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಸೇರಿದ್ದರು.
ರಾಹುಲ್ ಗಾಂಧಿ ಅವರನ್ನು ಸ್ವಾಗತಿಸಲು ಅಪಾರ ಸಂಖ್ಯೆಯಲ್ಲಿ ಬೆಂಬಲಿಗರು ಜಮಾಯಿಸಿದ್ದರು. ಇಂದಿನ ಯಾತ್ರೆಯು ಕೇರಳದ ನೆಯ್ಯಟ್ಟಿಂಕರದಲ್ಲಿರುವ ಡಾ. ಜಿ. ಆರ್. ಪಬ್ಲಿಕ್ ಸ್ಕೂಲ್ನಲ್ಲಿ ತಂಗುತ್ತದೆ. ತಮಿಳುನಾಡು ಗಡಿ ಸಮೀಪದಲ್ಲಿರುವ ಪರಸ್ಸಾಲದಿಂದ ಕೇರಳ ಪ್ರವೇಶಿಸಿದ ನಂತರ ರಾಹುಲ್ ಗಾಂಧಿ 19 ದಿನಗಳ ಅವಧಿಯಲ್ಲಿ ಮಲಪ್ಪುರಂನ ನಿಲಂಬೂರ್ಗೆ ತಲುಪುವ ಮೂಲಕ 450 ಕಿಲೋ ಮೀಟರ್ ಪ್ರಯಾಣ ಪೂರೈಸಲಿದ್ದಾರೆ.
ಸೆಪ್ಟೆಂಬರ್ 10ರಂದು ಜಾರ್ಜ್ ಪೊನ್ನಯ್ಯ ಎಂಬ ಪಾದ್ರಿ ರಾಹುಲ್ ಗಾಂಧಿಗೆ ಶಕ್ತಿಗಿಂತ ಭಿನ್ನವಾಗಿ ಯೇಸು ನಿಜವಾದ ದೇವರು ಎಂದು ಹೇಳುವ ವಿಡಿಯೋ ಹೊರಬಂದಿತ್ತು. ತದನಂತರ ಯಾತ್ರೆಯು ವಿವಾದವನ್ನು ಹುಟ್ಟುಹಾಕಿತು.
ರಾಹುಲ್ ಗಾಂಧಿ ವಿರುದ್ಧ ಟ್ವೀಟ್ ಸಮರ; ರಾಹುಲ್ ಗಾಂಧಿ ಮತ್ತು ಪಾದ್ರಿ ಜಾರ್ಜ್ ಪೊನ್ನಯ್ಯ ಅವರ ಟೆಟೆ-ಎ-ಟೆಟೆಯ ವೀಡಿಯೊವನ್ನು ಟ್ವಿಟರ್ನಲ್ಲಿ ಹಂಚಿಕೊಂಡ ಬಿಜೆಪಿ ವಕ್ತಾರ ಶೆಹಜಾದ್ ಪೂನಾವಾಲಾ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
"ಭಾರತ್ ಟೊಡೊ ಐಕಾನ್ಗಳೊಂದಿಗೆ ಭಾರತ್ ಜೋಡೋ", ಎಂದು ಪೂನಾವಾಲಾ ಟ್ವಿಟರ್ನಲ್ಲಿ ಹಂಚಿಕೊಂಡಿದ್ದರು. ರಾಹುಲ್ ಗಾಂಧಿ ಅವರು "ಭಾರತ್ ಜೋಡೋ" ಯಾತ್ರೆಯನ್ನು ಸೆಪ್ಟೆಂಬರ್ 7ರಂದು ಕನ್ಯಾಕುಮಾರಿಯಿಂದ ಪ್ರಾರಂಭಿಸಿದ್ದರು. ಯಾತ್ರೆಯು ಕಾಶ್ಮೀರದಲ್ಲಿ ಮುಕ್ತಾಯಗೊಳ್ಳಲಿದೆ. ಈ ಯಾತ್ರೆಯೂ 3,500 ಕಿಲೋ ಮೀಟರ್ ದೂರವನ್ನು ಕ್ರಮಿಸುತ್ತದೆ. 12 ರಾಜ್ಯಗಳನ್ನು ಹಾದು ಹೋಗುತ್ತಿದ್ದು, ಸರಿಸುಮಾರು 150 ದಿನಗಳ ಕಾಲಾವಕಾಶ ತೆಗೆದುಕೊಳ್ಳಲಿದೆ.












Click it and Unblock the Notifications