ಬಳ್ಳಾರಿಯಲ್ಲಿ 80, ಉಡುಪಿಯಲ್ಲಿ 40 ಕೊರೊನಾ ವೈರಸ್ ಸೋಂಕು ಪತ್ತೆ
ಬಳ್ಳಾರಿ, ಜೂನ್ 28: ಗಣಿಜಿಲ್ಲೆ ಬಳ್ಳಾರಿಯಲ್ಲಿ ಭಾನುವಾರ ಹೊಸದಾಗಿ 80 ಕೊರೊನಾ ವೈರಸ್ ಪಾಸಿಟಿವ್ ಕೇಸ್ ಗಳು ಪತ್ತೆಯಾಗಿದ್ದು, ಇದರಿಂದ ಸೋಂಕಿತರ ಸಂಖ್ಯೆ 725 ಕ್ಕೆ ಏರಿಕೆಯಾಗಿದೆ.
ಬಳ್ಳಾರಿ ಜಿಲ್ಲೆಯಲ್ಲಿ ಇಂದು ಒಂದೇ ದಿನ 80 ಮಂದಿಗೆ ಮಹಾಮಾರಿ ಕೊರೊನಾ ವೈರಸ್ ಸೋಂಕಿರುವುದು ದೃಢಪಟ್ಟಿದೆ. ಆ ಪೈಕಿ 40 ಸೋಂಕಿತರು ಜಿಂದಾಲ್ ಕಾರ್ಖಾನೆ ನೌಕರರ ಪ್ರಾಥಮಿಕ ಹಾಗೂ ಸೆಕೆಂಡರಿ ಸಂಪರ್ಕ ಹೊಂದಿರುವವರು ಎಂದು ಗುರುತಿಸಲಾಗಿದೆ.
ಬಳ್ಳಾರಿ ಜಿಲ್ಲೆಯಲ್ಲಿ ಒಂದೇ ದಿನ ಕೊರೊನಾ ಸೋಂಕಿಗೆ ನಾಲ್ವರು ಬಲಿ
ಹೀಗಾಗಿ ಕೇವಲ ಜಿಂದಾಲ್ ಕಾರ್ಖಾನೆ ಒಂದರಲ್ಲೇ ಈವರೆಗೆ ಅಂದಾಜು 403 ನೌಕರರಿಗೆ ಕೊರೊನಾ ವೈರಸ್ ಸೋಂಕು ಪತ್ತೆಯಾಗಿದೆ.
ಇದರಿಂದ ಜಿಲ್ಲೆಯಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 725 ಆಗಿದ್ದು, 313 ಮಂದಿ ಗುಣಮುಖರಾಗಿದ್ದಾರೆ. 14
ಮಂದಿ ಸಾವನ್ನಪ್ಪಿದ್ದು, ಇನ್ನೂ 403 ಸಕ್ರೀಯ ಪ್ರಕರಣಗಳಿವೆ.
ಉಡುಪಿಯಲ್ಲಿ ಇಂದು 40 ಹೊಸ ಕೇಸ್: ಸಮುದಾಯಕ್ಕೆ ಹರಡುವ ಭೀತಿ?
ಉಡುಪಿ ಜಿಲ್ಲೆಯಲ್ಲಿ ಇಂದು 40 ಮಂದಿಗೆ ಕೊರೊನಾ ವೈರಸ್ ಪಾಸಿಟಿವ್ ಬಂದಿದ್ದು, ಜಿಲ್ಲೆಯಲ್ಲಿ ಆತಂಕ ಮನೆ ಮಾಡಿದೆ. ಈ ಪೈಕಿ ಆರು ಮಂದಿ ಆರೋಗ್ಯ ಸಿಬ್ಬಂದಿಯೂ ಸೇರಿದ್ದಾರೆ. ಮತ್ತೋರ್ವ ಎಸ್ಎಸ್ಎಲ್ಸಿ ವಿದ್ಯಾರ್ಥಿನಿಗೂ ಸೋಂಕು ತಗುಲಿದೆ.
ಬಳ್ಳಾರಿ, ಉಡುಪಿಯಲ್ಲಿ SSLC ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು
ಹೆಬ್ರಿಯ ಸಮುದಾಯ ಆರೋಗ್ಯ ಕೇಂದ್ರದ ವೈದ್ಯ ಮತ್ತು ಇತರ ಸಿಬ್ಬಂದಿಗೂ ಸೋಂಕು ತಗುಲಿದ್ದು, ಆರೋಗ್ಯ ಕೇಂದ್ರವನ್ನು ಈಗಾಗಲೇ ಸೀಲ್ ಡೌನ್ ಮಾಡಲಾಗಿದೆ.
ಮಂಗಳೂರಿಗೆ ತೆರಳಿ ಟ್ರಾವೆಲ್ ಇತಿಹಾಸ ಬಚ್ಚಿಟ್ಟಿದ್ದ ಸಹೋದರರಿಂದ ನಾಲ್ವರಿಗೆ ಸೋಂಕು ತಗುಲಿದ್ದರೆ, ಕೇರಳ ಪ್ರವಾಸ ಮಾಡಿ ಬಂದಿದ್ದ ವ್ಯಕ್ತಿಯಿಂದ ಹತ್ತು ಮಂದಿಗೆ ಸೋಂಕು ತಗುಲಿದೆ. ಹೀಗಾಗಿ ಉಡುಪಿಯಲ್ಲಿ ಸಮುದಾಯಕ್ಕೂ ಸೋಂಕು ಹರಡುವ ಭೀತಿ ಮನೆ ಮಾಡಿದೆ.
ಮಹಾರಾಷ್ಟ್ರ, ಬೆಂಗಳೂರು, ಬಾಗಲಕೋಟೆಯಿಂದ ಬಂದವರಲ್ಲಿ ಸೋಂಕು ಕಾಣಿಸಿಕೊಂಡಿದೆ ಎಂದು ಡಿಎಚ್ಒ ಡಾ.ಸುಧೀರ್ ಚಂದ್ರ ಸೂಡ ಮಾಹಿತಿ ನೀಡಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಈಗ 1179 ಕ್ಕೆ ಏರಿಕೆಯಾಗಿದೆ. ಇಂದು 4 ಮಂದಿ ಗುಣಮುಖರಾಗಿ ಬಿಡುಗಡೆ ಆಗಿದ್ದು, ಈವರೆಗೆ ಜಿಲ್ಲೆಯಲ್ಲಿ 1051 ಮಂದಿ ಗುಣಮುಖರಾಗಿದ್ದಾರೆ.