ಮೆಣಸಿನಕಾಯಿ ಗಿಡಗಳ ನಡುವೆ ಬೆಳೆದಿದ್ದ 7 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ
ಬಳ್ಳಾರಿ, ನವೆಂಬರ್ 16: ಮೆಣಸಿನಕಾಯಿ- ಹತ್ತಿ ಬೆಳೆಯ ಮಧ್ಯೆ ಅಕ್ರಮವಾಗಿ ಬೆಳೆದಿದ್ದ ಅಂದಾಜು 7.20 ಲಕ್ಷ ರೂ.ಗಳ ಮೌಲ್ಯದ ಗಾಂಜಾ ಗಿಡಗಳನ್ನು ಸಂಡೂರಿನ ಅಬಕಾರಿ ನಿರೀಕ್ಷಕರು ವಶಪಡಿಸಿಕೊಂಡಿದ್ದಾರೆ.
ಜಿಲ್ಲೆಯ ಸಂಡೂರು ತಾಲೂಕಿನ ಎಂ.ಗುಂಡ್ಲಹಳ್ಳಿ- ಬಸಾಪುರ ಗ್ರಾಮಕ್ಕೆ ಹಾದುಹೋಗುವ ರಸ್ತೆ ಸಮೀಪದ ಜಮೀನಿನಲ್ಲಿ ಮೆಣಸಿನಕಾಯಿ- ಹತ್ತಿ ಬೆಳೆಯ ಮಧ್ಯೆ ಗಾಂಜಾ ಬೆಳೆಯನ್ನೂ ಬೆಳೆಯಲಾಗಿತ್ತು.
ಜಿಲ್ಲೆಯ ಹೊಸಪೇಟೆ ವಿಭಾಗದ ಅಬಕಾರಿ ಇಲಾಖೆ ಜಂಟಿ ಆಯುಕ್ತರ ಸೂಚನೆಯ ಮೇರೆಗೆ ಸಂಡೂರಿನ ಅಬಕಾರಿ ನಿರೀಕ್ಷಕಿಯಾದ ಸಿ.ಜ್ಯೋತಿನಾಯ್ಕ ಅವರ ನೇತೃತ್ವದ ತಂಡ ಖಚಿತ ಮಾಹಿತಿಯನ್ನಾಧರಿಸಿ ರೈತರಾದ ದೇವಣ್ಣ ಮತ್ತು ಬಾಲಯ್ಯ ಎಂಬುವವರ ಹೊಲಗಳಲ್ಲಿ ಬೆಳೆದಿದ್ದ ಅಕ್ರಮ ಗಾಂಜಾ ಬೆಳೆಯನ್ನು ಜಪ್ತಿಗೊಳಿಸಿದ್ದಾರೆ.

ಅಂದಾಜು 31 ಗಾಂಜಾ ಗಿಡಗಳನ್ನು ಬೆಳೆದಿದ್ದು ಒಟ್ಟು 49 ಕೆ.ಜಿ 240 ಗ್ರಾಂನಷ್ಟು ಗಾಂಜಾ ದಾಸ್ತಾನನ್ನು ಸೀಜ್ ಮಾಡಲಾಗಿದೆ. ಆ ಹೊಲಗಳ ಮೂಲ ಮಾಲೀಕರ ವಿರುದ್ಧ ಮೊಕದ್ದಮೆ ದಾಖಲಿಸಲಾಗಿದೆ. ಆರೋಪಿತರು ಪರಾರಿಯಾಗಿದ್ದು, ಅವರ ಪತ್ತೆ ಕಾರ್ಯವನ್ನು ನಡೆಸಲಾಗುತ್ತಿದೆ ಎಂದು ಅಬಕಾರಿ ನಿರೀಕ್ಷಕಿ ಜ್ಯೋತಿ ಸಿ.ನಾಯ್ಕ ತಿಳಿಸಿದ್ದಾರೆ.












Click it and Unblock the Notifications