ಬಳ್ಳಾರಿ; ವಿಮ್ಸ್ನ 40 ಕೋಟಿಯ ಶಸ್ತ್ರಚಿಕಿತ್ಸಾ ಸಂಕೀರ್ಣ ಉದ್ಘಾಟನೆ
ಬಳ್ಳಾರಿ, ಮಾರ್ಚ್ 06: ಬಳ್ಳಾರಿಯ ವಿಜಯನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ವಿಮ್ಸ್) ನೂತನ ಕಟ್ಟಡ ಮತ್ತು 40 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಶಸ್ತ್ರ ಚಿಕಿತ್ಸಾ ಸಂಕೀಣ ಲೋಕಾರ್ಪಣೆಯಾಗಿದೆ.
ಭಾನುವಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಕೆ. ಸುಧಾಕರ್ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂಕೀರ್ಣ ಉದ್ಘಾಟಿಸಿದರು. ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಬಿ. ಶ್ರೀರಾಮುಲು ಮುಂತಾದವರು ಉಪಸ್ಥಿತರಿದ್ದರು.
ಈ ಸಂಕೀರ್ಣ ಬಳ್ಳಾರಿ ವಿಮ್ಸ್ನ ಹಲವಾರು ವರ್ಷಗಳ ಕನಸಾಗಿತ್ತು. 2010ರಲ್ಲಿ ನೂತನ ಶಸ್ತ್ರ ಚಿಕಿತ್ಸಾ ಸಂಕೀರ್ಣದ ಅವಶ್ಯಕತೆಯ ಬಗ್ಗೆ ಹಾಗೂ ಹಳೆಯ ಶಸ್ತ್ರ ಚಿಕಿತ್ಸಾ ಕೊಠಡಿಗಳು ಶಿಥಿಲಗೊಂಡಿರುವ ಬಗ್ಗೆ ತಜ್ಞರ ತಂಡ ಅಭಿಪ್ರಾಯವನ್ನು ವ್ಯಕ್ತಪಡಿಸಿತ್ತು.

2018ರಲ್ಲಿ ನೂತನ ಕಟ್ಟಡ ಕಾಮಗಾರಿಯು ಪ್ರಾರಂಭಗೊಂಡಿತ್ತು. ಈಗ ಕಾಮಗಾರಿ ಪೂರ್ಣಗೊಂಡು ಉದ್ಘಾಟನೆಗೊಂಡಿದೆ. ಈ ಶಸ್ತ್ರ ಚಿಕಿತ್ಸಾ ಸಂಕೀರ್ಣಕ್ಕೆ ಸುಮಾರು 40 ಕೋಟಿ ರೂ. ವೆಚ್ಚ ಮಾಡಲಾಗಿದೆ.
ಉತ್ತರ ಕರ್ನಾಟಕದ ಬಳ್ಳಾರಿ, ವಿಜಯನಗರ, ಕೊಪ್ಪಳ, ರಾಯಚೂರು ಹಾಗು ಯಾದಗಿರಿ ಜಿಲ್ಲೆಗಳಿಂದ ಹಾಗೂ ಗಡಿ ಭಾಗದ ಆಂಧ್ರ ಪ್ರದೇಶದ ರಾಯದುರ್ಗ, ಕಲ್ಯಾಣದುರ್ಗ, ಗುಂತಕಲ್ಲು, ಉರವಕೊಂಡ, ಅನಂತಪುರ ಹಾಗು ಕರ್ನೂಲು ಜಿಲ್ಲೆಯಿಂದ ಹಲವಾರು ರೋಗಿಗಳು ವಿಮ್ಸ್ಗೆ ಚಿಕಿತ್ಸೆಗಾಗಿ ಆಗಮಿಸುತ್ತಾರೆ.

ಈ ಹೊಸ ಶಸ್ತ್ರ ಚಿಕಿತ್ಸಾ ಕಟ್ಟಡವು 11 ಅತ್ಯಾಧುನಿಕ ಸೌಲಭವುಳ್ಳ ಸಂಪೂರ್ಣ ಹವಾನಿಯಂತ್ರಿತ ಶಸ್ತ್ರಚಿಕಿತ್ಸಾ ಕೊಠಡಿಗಳು, ಸುಮಾರು 80 ಹಾಸಿಗೆಗಳ ತೀವ್ರ ನಿಗಾ ಘಟಕ, ಪ್ರಿ ಅಪರೇಟಿವ್, ಪೋಸ್ಟ್ ಅಪರೇಟಿವ್ ವಾರ್ಡ್ಗಳು, ಸೆಮಿನಾರ್ ರೂಮ್ಗಳು, ಸಿಬ್ಬಂದಿ ಕೊಠಡಿಗಳು, ಪೇಯಿನ್ ಕ್ಲಿನಿಕ್ ಮತ್ತು ಪ್ರಿ ಅನಸ್ತೇಟಿಕ್ ಚೆಕ್ಅಪ್ ಸೌಲಭ್ಯಗಳನ್ನು ಒಳಗೊಂಡಿದೆ.
ಶಸ್ತ್ರ ಚಿಕಿತ್ಸೆಗೆ ಅವಶ್ಯವಿರುವ ಉಪಕರಣಗಳನ್ನು 5 ಕೋಟಿ ರೂ. ವೆಚ್ಚದಲ್ಲಿ ಈಗಾಗಲೇ ಟೆಂಡರ್ ಮೂಲಕ ಖರೀದಿಸಲಾಗುತ್ತಿದೆ. ಈ ಘಟಕದ ಮೂಲಕ ವಿಜಯನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಆರೋಗ್ಯ ಸೇವೆ ನೀಡಲು ಮತ್ತೊಂದು ಹೆಜ್ಜೆ ಇಟ್ಟಂತಾಗಿದೆ.
ಹೃದಯರೋಗ ವಿಭಾಗ ಆರಂಭ; ಬಳ್ಳಾರಿಯ ವಿಜಯನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಆಸ್ಪತ್ರೆಯಲ್ಲಿ ಹೃದಯರೋಗ ವಿಭಾಗ ಭಾನುವಾರದಿಂದ ಆರಂಭವಾಗಿದೆ. ಉತ್ತರ ಕರ್ನಾಟಕದ ವಿಶೇಷವಾಗಿ ಬಳ್ಳಾರಿ, ವಿಜಯನಗರ, ರಾಯಚೂರು, ಕೊಪ್ಪಳ ಹಾಗು ಯಾದಗಿರಿ ಜಿಲ್ಲೆಗಳು ಹಾಗೂ ನೆರೆಯ ಆಂಧ್ರಪ್ರದೇಶದ ಗುಂತಕಲ್ಲು, ರಾಯದುರ್ಗ, ಕಲ್ಯಾಣದುರ್ಗ ಹಾಗೂ ಉರವಕೊಂಡ ಜನರ ಅನುಕೂಲಕ್ಕಾಗಿ ವಿಮ್ಸ್ ಆಸ್ಪತ್ರೆಯಲ್ಲಿ ಹೃದಯ ರೋಗ ವಿಭಾಗವನ್ನು ಪ್ರಾರಂಭಿಸಲಾಗುತ್ತಿದೆ.
ಈ ವಿಭಾಗದಲ್ಲಿ ಸುವಿಶೇಷ ತರಬೇತಿ ಹೊಂದಿದ 4 ಹೃದಯ ರೋಗ ತಜ್ಞರು ಲಭ್ಯವಿದ್ದಾರೆ. ಸದ್ಯ ನಾನ್ ಇನ್ವ್ಯಾಸಿವ್ ಕಾರ್ಡಿಯಾಲಜಿ ಸೌಲಭ್ಯಗಳಾದ ಇಸಿಜಿ,ಇಸಿಎಚ್ಒ ಹಾಗೂ ಟಿಎಂಟಿಗಳನ್ನು ಒದಗಿಸಲಾಗುತ್ತದೆ.
10 ಹಾಸಿಗೆಗಳ ಮತ್ತು ತೀವ್ರ ಹೃದಯ ರೋಗ ನಿಗಾ ಘಟಕ ಐಸಿಸಿಯು ಅನ್ನು ಪ್ರಾರಂಭಿಸಲಾಗಿದೆ. ಲಭ್ಯವಿರುವ ಸೇವೆಗಳನ್ನು ರೋಗಿಗಳು ಉಪಯೋಗಿಸಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
ಶ್ರೀರಾಮುಲು ಫೇಸ್ ಬುಕ್ ಪೋಸ್ಟ್; ಭಾನುವಾರ ನನ್ನ ಉಸ್ತುವಾರಿ ಜಿಲ್ಲೆಯಾದ ಬಳ್ಳಾರಿಯ ವಿಜಯನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ವಿಮ್ಸ್)ಯ ಆವರಣದಲ್ಲಿನ ನೂತನ ಶಸ್ತ್ರಚಿಕಿತ್ಸಾ ಸಂಕೀರ್ಣದ ನೂತನ ಕಟ್ಟಡವನ್ನು ಉದ್ಘಾಟಿಸಿ, ಈ ಭಾಗದ ಜನರ ಹಲವು ವರ್ಷಗಳ ಕನಸನ್ನು ನನಸಾಗಲಿಸಲಾಯಿತು ಎಂದು ಸಚಿವ ಬಿ. ಶ್ರೀರಾಮುಲು ಪೋಸ್ಟ್ ಹಾಕಿದ್ದಾರೆ.
ಈ ಸಂದರ್ಭದಲ್ಲಿ ಬಳ್ಳಾರಿ ನಗರ ಶಾಸಕ ಜಿ. ಸೋಮಶೇಖರ್ ರೆಡ್ಡಿ, ಬಳ್ಳಾರಿ ಗ್ರಾಮಾಂತರ ಶಾಸಕ
ಬಿ.ನಾಗೇಂದ್ರ , ಸಂಸದ ಡಾ. ಸೈಯದ್ ನಾಸೀರ್ ಹುಸೇನ್, ವಿಧಾನಪರಿಷತ್ ಸದಸ್ಯರಾದ ವೈ. ಎಂ. ಸತೀಶ್, ಬುಡಾ ಅಧ್ಯಕ್ಷರಾದ ಪಿ.ಪಾಲಣ್ಣ, ಜಿಲ್ಲಾಧಿಕಾರಿ ಪವನ್ಕುಮಾರ್ ಮಾಲಪಾಟಿ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.











Click it and Unblock the Notifications