ಮುಂಗಾರು ಪೂರ್ವ ಮಳೆ ಅವಾಂತರ: ಬಳ್ಳಾರಿಯಲ್ಲಿ ಸಿಡಿಲು ಬಡಿದು ಮೂವರು ಸಾವು
ಬಳ್ಳಾರಿ, ಜೂನ್ 1: ಬಳ್ಳಾರಿ ಜಿಲ್ಲೆಯಲ್ಲಿ ವರುಣ ಆರ್ಭಟ ಜೋರಾಗಿದ್ದು, ಜಿಲ್ಲೆಯ ಸಿರುಗುಪ್ಪ ತಾಲೂಕಿನ ಉತ್ತನೂರು ಗ್ರಾಮದ ಮೂವರು ವ್ಯಕ್ತಿಗಳು ಸಿಡಿಲು ಬಡಿದು ಮೃತರಾಗಿದ್ದಾರೆ ಎಂದು ವರದಿಯಾಗಿದೆ.
ಸಿರುಗುಪ್ಪ ತಾಲೂಕಿನ ಉತ್ತನೂರು ಗ್ರಾಮದ ಒಂದನೇ ವಿಭಾಗದ ನಿವಾಸಿ ಶೇಖರಗೌಡ (32) ಹಾಗೂ ಬಸವನಗೌಡ (38) ಮೃತ ದುರ್ದೈವಿಗಳು ಎಂದು ತಿಳಿದು ಬಂದಿದೆ. ಮೃತರು ಸಂಬಂಧಿಕರ ಮದುವೆ ಕಾರ್ಯ ನಿಮಿತ್ತ ಸೀಮಾಂಧ್ರದ ಹೊಳಗುಂದ ಮಂಡಲ ವ್ಯಾಪ್ತಿಯ ವಿರೂಪಾಪುರ ಗ್ರಾಮದ ಬಳಿ ಇರುವ ಬೊಗಟೇಶ್ವರ ದೇವಸ್ಥಾನಕ್ಕೆ ಗುರುವಾರ ಬೆಳಿಗ್ಗೆ ಗ್ರಾಮದಿಂದ ತೆರಳಿದ್ದರು. ಈ ವೇಳೆ ಸಿಡಿಲು ಬಡಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಮದುವೆಯ ನಂತರ ಮರದ ಬಳಿ ನಿಂತು ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ಸಿಡಿಲು ಬಡಿದು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಮತ್ತು ಇವರ ಜೊತೆಗಿದ್ದ ಬೇರೆ ಗ್ರಾಮಗಳ ನಾಲ್ಕು ಜನರೂ ಗಂಭೀರವಾಗಿ ಗಾಯಗೊಂಡಿದ್ದಾರೆ. ಒಟ್ಟು ಮೂವರು ಮೃತಪಟ್ಟಿದ್ದು, ಮತ್ತೋರ್ವ ಮೃತನ ಹೆಸರು, ಮಾಹಿತಿ ತಿಳಿದು ಬಂದಿಲ್ಲ.
ಸಿಡಿಲು ಬಡಿದು ಮೃತಪಟ್ಟ ಶೇಖರ ಗೌಡ ಎಂಬಾತ ಪತ್ನಿ ಹಾಗೂ ಒಂದು ಗಂಡು ಮತ್ತು ಹೆಣ್ಣು ಮಗುವನ್ನು ಅಗಲಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.ಗ್ರಾಮದಲ್ಲಿ ಘಟನೆಯ ವಿಷಯ ತಿಳಿಯುತ್ತಿದ್ದಂತೆ ಮನೆಯಲ್ಲಿ ಶೋಕ ಮಡುಗಟ್ಟಿದೆ. ಮೃತ ದೇಹವನ್ನು ಗ್ರಾಮಕ್ಕೆ ತರಲಾಗುತ್ತಿದೆ ಎಂದು ತಿಳಿದುಬಂದಿದ್ದು, ಗಾಯಾಳುಗಳಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.
ಮುಂಗಾರು ಪೂರ್ವ ಮಳೆಯ ಅಬ್ಬರ
ಮುಂಗಾರು ಪೂರ್ವ ಮಳೆಯ ಅಬ್ಬರ ದಿನದಿಂದ ದಿನಕ್ಕೆ ಜೋರಾಗುತ್ತಿದ್ದು, ಗುಡುಗು ಸಿಡಿಲು ಹಾಗೂ ಬಿರುಗಾಳಿ ಸಹಿತ ಮಳೆಯಾಗುತ್ತಿರುವುದರಿಂದ ನೂರಾರು ಅವಾಂತರಗಳು ಸಂಭವಿಸುತ್ತಿದೆ. ಹಾವೇರಿ ಜಿಲ್ಲೆಯಲ್ಲಿ ಒಂದೆಡೆ ಸಿಡಿಲಿಗೆ ಇಬ್ಬರು ಗಾಯಗೊಂಡರೆ, ಮತ್ತೊಂದೆಡೆ 25 ಕುರಿಗಳು ಸಾವನ್ನಪ್ಪಿವೆ. ಇನ್ನು ಕಳೆದ ಎರಡು ದಿನಗಳ ಹಿಂದೆ ಬೆಳಗಾವಿ ಜಿಲ್ಲೆಯಲ್ಲಿ ಸಿಡಿಲು ಬಡಿದು ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ವರದಿಯಾಗಿತ್ತು.












Click it and Unblock the Notifications