ಬಳ್ಳಾರಿ; 22 ಗ್ರಾಮಕ್ಕೆ ಶಾಶ್ವತ ಕುಡಿಯುವ ನೀರಿನ ಯೋಜನೆ
ಬಳ್ಳಾರಿ, ನವೆಂಬರ್ 26: ಬಳ್ಳಾರಿ ಜಿಲ್ಲೆಯ ವಿಜಯನಗರ ಕ್ಷೇತ್ರದ ಪಾಪಿನಾಯನಕನಹಳ್ಳಿ ಹಾಗೂ ಸುತ್ತಮುತ್ತಲಿನ 22 ಗ್ರಾಮಗಳಿಗೆ ಶಾಶ್ವತ ಕುಡಿಯುವ ನೀರು ಪೂರೈಕೆ ಮಾಡುವ ಯೋಜನೆ ಸಿದ್ಧವಾಗಿದೆ. 243. 35 ಕೋಟಿ ರೂ.ಗಳ ಯೋಜನೆ ಇದಾಗಿದೆ.
ಗುರುವಾರ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ವಿಡಿಯೋ ಕಾನ್ಪರೆನ್ಸ್ ಮೂಲಕ ಯೋಜನೆಗೆ ಶಂಕು ಸ್ಥಾಪನೆ ಮಾಡಿದರು. ಜಲಸಂಪನ್ಮೂಲ ಇಲಾಖೆ, ಕರ್ನಾಟಕ ನೀರಾವರಿ ನಿಗಮದ ನಿಯಮಿತದ ವತಿಯಿಂದ ಈ ಯೋಜನೆ ಕೈಗೊಳ್ಳಲಾಗಿದೆ.
ಪಾಪಿನಾಯನಕನಹಳ್ಳಿ ಹಾಗೂ ಸುತ್ತಮುತ್ತಲಿನ 22 ಗ್ರಾಮಗಳಿಗೆ ಶಾಶ್ವತ ಕುಡಿಯುವ ನೀರು ಪೂರೈಸುವ ಮತ್ತು 22ಕೆರೆಗಳನ್ನು ತುಂಬಿಸುವ ಬೃಹತ್ ನೀರಾವರಿ ಯೋಜನೆ ಇದಾಗಿದೆ. ಇದರಿಂದಾಗಿ ಈ ಭಾಗದ ಜನರ ಬದುಕು ಬದಲಾಗಲಿದೆ.

ಹೊಸಪೇಟೆ ತಾಲೂಕಿನ ಪಾಪಿನಾಯಕನಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳು ತುಂಗಭದ್ರಾ ಬಲದಂಡೆ ಮೇಲ್ಮಟ್ಟದ ಕಾಲುವೆಯ ಮೇಲ್ಬಾಗದಲ್ಲಿ ಬರುತ್ತಿದ್ದು, ಸದರಿ ಗ್ರಾಮಗಳು ಗಣಿ ಬಾಧಿತ ಹಾಗೂ ಅತಿ ಹಿಂದುಳಿದ ಗ್ರಾಮಗಳಾಗಿವೆ.
ಈ ಗ್ರಾಮಗಳಿಗೆ ತುಂಗಭದ್ರಾ ನದಿಯಿಂದ ನೀರನ್ನು ಎತ್ತಿ ಕೆರೆಗಳನ್ನು ತುಂಬಿಸುವುದು ಮತ್ತು ಇಂಪೌಂಡಿಂಗ್ ಕೆರೆಗಳನ್ನು ನಿರ್ಮಿಸಿ ನೀರನ್ನು ಸಂಗ್ರಹಿಸಲು ಈ ಯೋಜನೆ ಅಡಿ ತೀರ್ಮಾನಿಸಲಾಗಿದ್ದು, ಶಂಕು ಸ್ಥಾಪನೆ ಮಾಡಲಾಗಿದೆ.
ಈ ಯೋಜನೆಯ ಅಡಿಯಲ್ಲಿ 10 ಗ್ರಾಮಗಳ ವ್ಯಾಪ್ತಿಯಲ್ಲಿ ಬರುವ 22 ಕೆರೆಗಳಿಗೆ ಮತ್ತು ಹೊಸ 4 ಇಂಪೌಂಡಿಗ್ ರಿಸರ್ವಯರ್ಗಳನ್ನು ನಿರ್ಮಿಸಿ ತುಂಗಭದ್ರಾ ನದಿಯಿಂದ ನಿಂಬಾಪುರ, ಗ್ರಾಮದ ಹತ್ತಿರ ಜಾಕ್ವೆಲ್ ನಿರ್ಮಿಸಿ ರೈಸಿಂಗ್ ಮೇನ್ ಮತ್ತು ವಿತರಣಾ ಪೈಪ್ ಲೈನ್ ಮುಖಾಂತರ 0.304 ಟಿಎಂಸಿ ಅಡಿ ನೀರನ್ನು ತುಂಬಿಸಲು ಯೋಜಿಸಲಾಗಿದೆ.
ಯೋಜನೆಯಿಂದ ಹೊಸಪೇಟೆ ತಾಲೂಕಿನ 10 ಗ್ರಾಮಗಳ 22 ಕೆರೆಗಳನ್ನು ತುಂಬಿಸುವುದರಿಂದ ಅಂತರ್ಜಲಮಟ್ಟ ಹೆಚ್ಚಾಗಿ ಕೊಳವೆ ಬಾವಿಗಳು ಪುನಶ್ವೇತನಗೊಳ್ಳುತ್ತವೆ ಮತ್ತು ಗ್ರಾಮಗಳ ಜನಜಾನುವಾರುಗಳಿಗೆ ಶಾಶ್ವತ ಕುಡಿಯುವ ನೀರನ್ನು ಒದಗಿಸಲು ಅನುಕೂಲವಾಗುತ್ತದೆ.
ಈ ಯೋಜನೆಗಾಗಿ ಸರ್ಕಾರ 243.35 ಕೋಟಿಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಿದ್ದು, ಪ್ರಸ್ತುತ ಟೆಂಡರ್ ಮೂಲಕ ಕಾಮಗಾರಿಯನ್ನು ಹೊಸಪೇಟೆಯ ಪ್ರಥಮ ದರ್ಜೆಯ ಗುತ್ತಿಗೆದಾರ ದೊಡ್ಡ ಹನುಮಂತಪ್ಪ ಮತ್ತು ಮೇ.ಸುಧಾಕರ ಇನ್ಫ್ರಾಟೆಕ್, ಪ್ರೈ.ಲೀ ಹೊಸಪೇಟೆ ಜಂಟಿ ಸಹಭಾಗಿತ್ವದೊಂದಿಗೆ ನಿರ್ವಹಿಸಲು ವಹಿಸಲಾಗಿದೆ.












Click it and Unblock the Notifications