ಶಿವಮೊಗ್ಗದಲ್ಲಿ ಬಿಜೆಪಿಗೆ ಜಯ, ಸರ್ಕಾರ ಉಳಿಯೋಲ್ಲ : ಯಡಿಯೂರಪ್ಪ
Recommended Video

ಬಾಗಲಕೋಟೆ, ಅಕ್ಟೋಬರ್ 29 : 'ಶಿವಮೊಗ್ಗ ಲೋಕಸಭಾ ಉಪ ಚುನಾವಣೆಯಲ್ಲಿ ಗೆದ್ದರೆ ಸರ್ಕಾರ ಉಳಿಯುತ್ತೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ. ಆದರೆ, ಶಿವಮೊಗ್ಗದಲ್ಲಿ ನಾವು ಗೆಲ್ಲುತ್ತೇವೆ. ಅಲ್ಲಿಗೆ ಮೈತ್ರಿ ಸರ್ಕಾರ ಉಳಿಯುವುದಿಲ್ಲ' ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಜಮಖಂಡಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗಾಗಿ ಸೋಮವಾರ ಯಡಿಯೂರಪ್ಪ ಪ್ರಚಾರ ನಡೆಸುತ್ತಿದ್ದಾರೆ. ಜಮಖಂಡಿಗೆ ಭೇಟಿ ನೀಡುವ ಮುನ್ನ ಬಾಗಲಕೋಟೆಯಲ್ಲಿ ಅವರು ಪತ್ರಿಕಾಗೋಷ್ಠಿ ನಡೆಸಿದರು, ಮೈತ್ರಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
'ಎಚ್.ಡಿ.ಕುಮಾರಸ್ವಾಮಿ ಅವರು ವಾಲ್ಮೀಕಿ ಜಯಂತಿಗೆ ಹೋಗಲಿಲ್ಲ. ಎಚ್.ಡಿ.ದೇವೇಗೌಡರು ಪ್ರಶಸ್ತಿ ಪಡೆಯಲು ಹೋಗಲಿಲ್ಲ. ಇವರು ವಾಲ್ಮೀಕಿ ಸಮಯದಾಯಕ್ಕೆ ಅವಮಾನ ಮಾಡಿದ್ದಾರೆ' ಎಂದು ಯಡಿಯೂರಪ್ಪ ದೂರಿದರು.
ನವೆಂಬರ್ 3ರಂದು ಜಮಖಂಡಿ ಕ್ಷೇತ್ರದ ಉಪ ಚುನಾವಣೆ ನಡೆಯಲಿದೆ. ಬಿಜೆಪಿಯಿಂದ ಶ್ರೀಕಾಂತ್ ಕುಲಕರ್ಣಿ, ಕಾಂಗ್ರೆಸ್ನಿಂದ ಆನಂದ್ ನ್ಯಾಮಗೌಡ ಅವರು ಕಣದಲ್ಲಿದ್ದಾರೆ. ನವೆಂಬರ್ 6ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ....

ಖರ್ಗೆ ವಿರುದ್ಧ ವಾಗ್ದಾಳಿ
ಮಲ್ಲಿಕಾರ್ಜುನ ಖರ್ಗೆ ಹೇಳಿಕೆಗೆ ಪತ್ರಿಕ್ರಿಯೆ ನೀಡಿದ ಬಿ.ಎಸ್.ಯಡಿಯೂರಪ್ಪ ಅವರು, 'ಕೇಂದ್ರ ಸರ್ಕಾರ ಬೆಳೆಗಳಿಗೆ ಬೆಂಬಲ ಬೆಲೆ ನೀಡುತ್ತಿದೆ. ಕೃಷಿ ಇಲಾಖೆ ಹಾಳಾಗಿದೆ ಎನ್ನುವ ಖರ್ಗೆ ಅವರು ಮೊದಲು ರಾಜ್ಯದಲ್ಲಿ ಕೇಂದ್ರಗಳನ್ನು ತೆರೆದು ಬೆಳೆ ಖರೀದಿ ಮಾಡಲಿ' ಎಂದು ತಿರುಗೇಟು ನೀಡಿದರು.
'ಕಾಂಗ್ರೆಸ್ ಪಕ್ಷ ಎರಡು ಚುನಾವಣೆಯಲ್ಲಿ ಅಂಬೇಡ್ಕರ್ ಅವರನ್ನು ಸೋಲಿಸಿತ್ತು. ರಾಜ್ಘಾಟ್ನಲ್ಲಿ ಅಂತ್ಯಸಂಸ್ಕಾರಕ್ಕೆ ಆರು ಅಡಿ ಜಾಗ ಕೊಡದೇ ಅವಮಾನ ಮಾಡಿದರು. ಆದ್ದರಿಂದ, ಅಂಬೇಡ್ಕರ್ ಬಗ್ಗೆ ಮಾತನಾಡಲು ಅವರಿಗೆ ನೈತಿಕ ಹಕ್ಕಿಲ್ಲ' ಎಂದು ಯಡಿಯೂರಪ್ಪ ಹೇಳಿದರು.

ಈಶ್ವರ ಖಂಡ್ರೆಗೆ ತಿರುಗೇಟು
ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಅವರ, 'ನಾವು ಮನಸ್ಸು ಮಾಡಿದರೆ ಬಿಜೆಪಿ ಶಾಸಕರ ಸಂಖ್ಯೆ 104 ರಿಂದ 80ಕ್ಕೆ ಇಳಿಯಲಿದೆ' ಎಂಬ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಯಡಿಯೂರಪ್ಪ, 'ಅವರು ಖಂಡಿತ ಮಾಡಲಿ. ಖಂಡ್ರೆ ಅವರಂತಹ ಪವರ್ ಪುಲ್ ನಾಯಕ ಕಾಂಗ್ರೆಸ್ ಪಕ್ಷದಲ್ಲಿದ್ದಾರೆ. ಇದು ಅವರ ಬೇಜವಬ್ದಾರಿ ಹೇಳಿಕೆ ಇಂತಹವರಿಂದ ಕಾಂಗ್ರೆಸ್ ಬೆಳೆಯುತ್ತದೆಯೇ?' ಎಂದು ಪ್ರಶ್ನಿಸಿದರು.

ದೇವೇಗೌಡರ ಮನೆಗೆ ಏಕೆ ಹೋಗಲಿ?
'ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಕೆಲವು ದಿನಗಳಿಂದ ಜವಾಬ್ದಾರಿಯಿಂದ ಮಾತನಾಡುವುದನ್ನು ನಿಲ್ಲಿಸಿದ್ದಾರೆ' ಎಂದು ಹೇಳಿದ ಯಡಿಯೂರಪ್ಪ ಅವರು, 'ನಾನೇಕೆ ದೇವೇಗೌಡರ ಮನೆಗೆ ಹೋಗಲಿ. ನನಗೇನು ಸಂಬಂಧ?. ಅಪ್ಪ-ಮಕ್ಕಳ ಜೊತೆ ಈ ಜ್ಮನದಲ್ಲಿ ಸಂಬಂಧ ಸಾಧ್ಯವಿಲ್ಲ' ಎಂದು ಹೇಳಿದರು.

ಉತ್ತರ ಕರ್ನಾಟಕದ ವಿರೋಧಿ
'ಶಿವಮೊಗ್ಗ ಗೆದ್ದರೆ ಸರ್ಕಾರ ಉಳಿಯುತ್ತದೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ. ಆದರೆ, ಶಿವಮೊಗ್ಗದಲ್ಲಿ ನಾವು ಗೆಲ್ಲುತ್ತೇವೆ, ಅಲ್ಲಿಗೆ ಸರ್ಕಾರ ಉಳಿಯೋಲ್ಲ. ಎಚ್.ಡಿ.ಕುಮಾರಸ್ವಾಮಿ ಅವರು ಉತ್ತರ ಕರ್ನಾಟಕದ ವಿರೋಧಿ' ಎಂದು ಯಡಿಯೂರಪ್ಪ ಆರೋಪಿಸಿದರು.












Click it and Unblock the Notifications