ಸಿದ್ದು ಉಬ್ಲೋ ವಾಚ್ ಬಗ್ಗೆ ಎಗಾದಿಗಾ ಕ್ಲಾಸ್ ತಗೊಂಡ ಅನಂತಕುಮಾರ್
ಬಾಗಲಕೋಟೆ, ಮೇ 2 : ಅರವತ್ತು ಲಕ್ಷ ರುಪಾಯಿ ಬೆಲೆ ಬಾಳುವ ಉಬ್ಲೋ ವಾಚ್ ತಮ್ಮ ಬಳಿ ಹೇಗೆ ಬಂತು ಎಂಬುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಬಹಿರಂಗಪಡಿಸಬೇಕು ಎಂದು ಕೇಂದ್ರ ಸಚಿವ ಅನಂತಕುಮಾರ್ ಆಗ್ರಹಪಡಿಸಿದರು. ಇಲ್ಲಿ ಬಿಜೆಪಿ ಅಭ್ಯರ್ಥಿ ಡಾ.ವೀರಣ್ಣ ಚರಂತಿಮಠ ಪರವಾಗಿ ಪ್ರಚಾರ ನಡೆಸಲು ಬಂದಿದ್ದ ಸಂದರ್ಭದಲ್ಲಿ ಅವರು ಮಾತನಾಡಿದರು.
ನಾಮಪತ್ರ ಸಲ್ಲಿಕೆ ವೇಳೆ ಸಿದ್ದರಾಮಯ್ಯ ಉಬ್ಲೋ ವಾಚ್ ಬಗ್ಗೆ ವಿವರ ನೀಡಿದ್ದಾರಾ ಎಂಬುದನ್ನು ರಾಜ್ಯದ ಜನರಿಗೆ ತಿಳಿಸಲಿ. ನಾಮಪತ್ರದ ಅಫಿಡವಿಟ್ ನಲ್ಲಿ ಉಬ್ಲೋ ವಾಚ್ ಬಗ್ಗೆ ಉಲ್ಲೇಖ ಇದೆಯೋ ಇಲ್ಲವೋ ಎಂಬುದನ್ನು ಬಹಿರಂಗ ಪಡಿಸಲಿ ಎಂದು ಸವಾಲು ಹಾಕಿದರು.
ಸಿದ್ದರಾಮಯ್ಯ ಕಾಂಗ್ರೆಸ್ನ ಆಮದು ರಾಜಕಾರಣಿ: ಅನಂತ ಕುಮಾರ್
ಪ್ರಮಾಣ ಪತ್ರದಲ್ಲಿ ವಾಚ್ ಬಗ್ಗೆ ಪ್ರಸ್ತಾಪಿಸಿಲ್ಲ ಅಂದರೆ ಅವರ ನಾಮಪತ್ರ ಪ್ರಶ್ನಾರ್ಥಕ ಚಿಹ್ನೆಯಾಗುತ್ತದೆ. ಸಿದ್ದರಾಮಯ್ಯ ತಮಗೆ ತಾವೇ ಸಮಾಜವಾದಿ ಎಂದು ಬಿರುದು ಕೊಟ್ಟುಕೊಂಡು ಓಡಾಡ್ತಿದ್ದಾರೆ. ಸಿದ್ದರಾಮಯ್ಯ ಅವರಿಗೆ ವಾಚ್ ಯಾರು ಕೊಟ್ಟಿದ್ದಾರೆ, ಎಲ್ಲಿ ಕೊಟ್ಟಿದ್ದಾರೆ, ಏಕೆ ಕೊಟ್ಟಿದ್ದಾರೆ ಎಂಬುದನ್ನು ಇದುವರೆಗೂ ಎಲ್ಲಿಯೂ ತಿಳಿಸಿಲ್ಲ. ಸಿ.ಎಂ.ಇಬ್ರಾಹಿಂ ಅವರ ರೋಲೆಕ್ಸ್ ವಾಚ್ ತರಹ ಅತ್ಯಂತ ನಿಗೂಢವಾದ ವಾಚ್ ಅದು ಎಂದು ಲೇವಡಿ ಮಾಡಿದರು.
ಅಮಿತ್ ಶಾ-ಕುಮಾರಸ್ವಾಮಿ ಭೇಟಿ ಸಾಬೀತುಪಡಿಸಲಿ
ಬಿಜೆಪಿ ರಾಷ್ಟ್ರಾಧ್ಯಕ್ಷರಾದ ಅಮಿತ್ ಶಾ ಹಾಗೂ ಎಚ್.ಡಿ.ಕುಮಾರಸ್ವಾಮಿ ಒಂದೇ ಖಾಸಗಿ ವಿಮಾನದಲ್ಲಿ ಓಡಾಡ್ತಿದ್ದಾರೆ, ಮಾತುಕತೆ ನಡೆಸಿದ್ದಾರೆ ಎಂದು ಸಿದ್ದರಾಮಯ್ಯ ಸುಳ್ಳು ಹೇಳಿಕೊಂಡು ಓಡಾಡ್ತಿದ್ದಾರೆ. ಅದರ ಬಗ್ಗೆ ಸಾಕ್ಷಿ ಇದೆ ಎಂದು ಹೇಳ್ತಿದ್ದಾರೆ. ಹಾಗೆ ಪುರಾವೆ ಇದ್ದಿದ್ದೇ ಆದರೆ ಇಪ್ಪತ್ನಾಲ್ಕು ಗಂಟೆಯೊಳಗಾಗಿ ಮಾದ್ಯಮಗಳ ಮೂಲಕ ಬಹಿರಂಗ ಪಡಿಸಲಿ ಎಂದು ಸವಾಲೆಸೆದರು. ಒಂದು ವೇಳೆ ಆರೋಪವನ್ನು ಸಾಬೀತು ಮಾಡಲು ಆಗದಿದ್ದರೆ ಚಾಮುಂಡೇಶ್ವರಿ, ಬಾದಾಮಿ ವಿಧಾನಸಭಾ ಕ್ಷೇತ್ರದ ಚುನಾವಣಾ ಕಣದಿಂದ ನಿವೃತ್ತಿ ಹೊಂದಬೇಕು. ನೈತಿಕತೆ ಇದ್ದರೆ ಅಮಿತ್ ಶಾಗೆ ಕ್ಷಮೆ ಕೇಳಿ, ಚುನಾವಣಾ ಕಣದಿಂದಲೇ ನಿವೃತ್ತಿ ಹೊಂದಬೇಕು ಎಂದು ಅನಂತಕುಮಾರ್ ಹೇಳಿದರು.
ಬಿಬಿಎಂಪಿ ಒಪ್ಪಂದದಿಂದ ಕಾಂಗ್ರೆಸ್ ಹೊರಬರಲಿ
ಬಿಜೆಪಿ ಹಾಗೂ ಜೆಡಿಎಸ್ ಮಧ್ಯೆ ಯಾವುದೇ ಒಳ ಒಪ್ಪಂದ ಇಲ್ಲ. ಹಾಗೆ ನೋಡಿದರೆ ಕಾಂಗ್ರೆಸ್ ಮತ್ತು ಜೆಡಿಎಸ್ ಮಧ್ಯೆ ಒಳ ಹಾಗೂ ಹೊರ ಒಪ್ಪಂದ ಇದೆ. ನೈತಿಕತೆ ಇದ್ದರೆ ಬಿಬಿಎಂಪಿಯಲ್ಲಿ ಮಾಡಿಕೊಂಡಿರುವ ಒಪ್ಪಂದದಿಂದ ಕಾಂಗ್ರೆಸ್ ಹೊರಬರಬೇಕು ಎಂದು ಸವಾಲು ಹಾಕಿದರು.
ಸಿದ್ದರಾಮಯ್ಯ ಸಮಾಜವಾದಿ ಅಲ್ಲ ಪಲಾಯನವಾದಿ : ಅನಂತ್ ವ್ಯಂಗ್ಯ
ಬಾಗಲಕೋಟೆ ಪಾಲಿನ ದುಃಸ್ವಪ್ನ ಮೇಟಿ
ಶಾಸಕ ಎಚ್. ವೈ ಮೇಟಿ ಕರ್ನಾಟಕ ಹಾಗೂ ಬಾಗಲಕೋಟೆ ಪಾಲಿಗೆ ದುಸ್ವಪ್ನ. ಮೇಟಿಯ ದುಃಸ್ವಪ್ನ ಬಾಗಲಕೋಟೆ ಜನರಿಗೆ ಬೇಕಾಗಿಲ್ಲ. ಆ ಅಪಮಾನ ಹೊತ್ತು ತಿರುಗುವುದಕ್ಕೆ ಜನ ತಯಾರಿಲ್ಲ. ಹೀಗಾಗಿ ಸಜ್ಜನ ರಾಜಕಾರಣಿ ವೀರಣ್ಣ ಚರಂತಿಮಠ ಅವರನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.
ಮೇಟಿ, ಸಿದ್ದರಾಮಯ್ಯ ಕರೆಂಟ್ ಕಟ್ ಮಾಡ್ತಾರೆ ರಾಜ್ಯದ ಜನ
ಮೇಟಿ ಗ್ರಾಮಕ್ಕೆ ಪ್ರಚಾರಕ್ಕೆ ಹೋದಾಗ ಪವರ್ ಕಟ್ ವಿಚಾರ ಕುರಿತು ಮಾತನಾಡಿದ ಅನಂತಕುಮಾರ್, ಉದ್ದೇಶಪೂರ್ವಕವಾಗಿ ವಿದ್ಯುತ್ ಕಟ್ ಮಾಡೋದು, ಹುಯಿಲೆಬ್ಬಿಸೋದು ಸರಿಯಲ್ಲ. ನಾನು ಎಚ್ಚರಿಕೆ ಕೊಡುತ್ತೇನೆ: ಮೇ ಹನ್ನೆರಡರಂದು ಮತದಾನ, ಹದಿನೈದರದು ಫಲಿತಾಂಶ. ಅಂದು ರಾಜ್ಯದ ಜನ ಮೇಟಿ ಹಾಗೂ ಸಿದ್ದರಾಮಯ್ಯ ಅವರ ಕರೆಂಟ್ ಕಟ್ ಮಾಡ್ತಾರೆ ಎಂದರು.