ಶ್ರಮಬಿಂದು ಸಾಗರಕ್ಕೆ ಸಿದ್ದು ನ್ಯಾಮಗೌಡ ಹೆಸರು: ರೈತರಿಗೆ ಸಂತಸ
ಬಾಗಲಕೋಟೆ, ಜುಲೈ.04: ಜಮಖಂಡಿಯಲ್ಲಿರುವ ಶ್ರಮಬಿಂದು ಸಾಗರಕ್ಕೆ ಸಿದ್ದು ನ್ಯಾಮಗೌಡ ಅವರ ಹೆಸರಿಡಲು ರಾಜ್ಯ ಸರ್ಕಾರ ಪ್ರಕಟಿಸಿದ ಬೆನ್ನಲ್ಲೇ ನ್ಯಾಮಗೌಡರ ಬೆಂಬಲಿಗರು, ಕುಟುಂಬದವರು ಹರ್ಷ ವ್ಯಕ್ತಪಡಿಸಿದ್ದಾರೆ.
ಗೋವಾದಿಂದ ಜಮಖಂಡಿಗೆ ಹೋಗುವ ಮಾರ್ಗದಲ್ಲಿ ಮೇ 28ರಂದು ಕಾರು ಅಪಘಾತದಲ್ಲಿ ತುಳಸಿಗೇರಿ ಸಮೀಪ ನ್ಯಾಮಗೌಡ ಅವರು ಸಾವನ್ನಪ್ಪಿದರು. ಜಮಖಂಡಿ ತಾಲೂಕಿನ ಜನರಿಗೆ ಹಾಗೂ ರೈತರಿಗೆ ಅನುಕೂಲವಾಗುವಂತೆ ನ್ಯಾಮಗೌಡರು ಚಿಕ್ಕಪಡಸಲಗಿಯಲ್ಲಿ ಬ್ಯಾರೇಜ್ ನಿರ್ಮಾಣ ಮಾಡಿದ್ದನ್ನು ಜನ ಇನ್ನು ಮರೆತಿಲ್ಲ.
ಕೃಷ್ಣಾ ತೀರದ ರೈತರನ್ನು 1980 ರ ದಶಕದಲ್ಲಿ ಒಗ್ಗೂಡಿಸಿಕೊಂಡು ಅವರಿಂದ ವಂತಿಗೆ ಸಂಗ್ರಹಿಸುವ ಜತೆಗೆ ನ್ಯಾಮಗೌಡರು ತಾವೇ ಮುಂದಾಳತ್ವ ತೆಗೆದುಕೊಂಡು ಬ್ಯಾರೇಜ್ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದ್ದರು.

ಈ ಕಾಮಗಾರಿಯಲ್ಲಿ ರೈತರು ತೊಡಗಿಕೊಂಡಾಗ ಸಿದ್ದು ನ್ಯಾಮಗೌಡರು ಸಹ ಬ್ಯಾರೇಜ್ ಕೆಲಸದಲ್ಲಿ ಭಾಗಿಯಾಗಿದ್ದನ್ನು ಸ್ಮರಿಸಬಹುದು.
ಅದಕ್ಕಾಗಿ ಈಗ ಶ್ರಮ ಬಿಂದು ಸಾಗರಕ್ಕೆ ಸಿದ್ದು ಬ್ಯಾರೇಜ್ ಎಂದು ಸರ್ಕಾರ ನಾಮಕರಣ ಮಾಡಲು ಮುಂದಾಗಿರುವುದು ಈ ಭಾಗದ ಜನರಿಗೆ ಸಂತಸವನ್ನುಂಟು ಮಾಡಿದೆ.
ಶ್ರಮಬಿಂದು ಸಾಗರಕ್ಕೆ ಸಿದ್ದು ಬ್ಯಾರೇಜ್ ಎಂದು ನಾಮಕರಣ ಮಾಡಲು ಸಚಿವ ಡಿ.ಕೆ.ಶಿವಕುಮಾರ್ ಸಹ ವಿಧಾನ ಸಭೆಯಲ್ಲಿ ಪ್ರಸ್ತಾಪಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

"ರಾಜ್ಯ ಸರ್ಕಾರ ಶ್ರಮ ಬಿಂದು ಸಾಗರವನ್ನು ಸಿದ್ದು ಬ್ಯಾರೇಜ್ ಎಂದು ಹೆಸರಿಡಲು ಮುಂದಾಗಿರುವುದು ಶ್ಲಾಘನೀಯ. ಈ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸುತ್ತೇವೆ" ಎಂದು ಜಮಖಂಡಿ ನಗರಸಭೆಯ ಆಡಳಿತ ಮಂಡಳಿ ಸದಸ್ಯರು ತಿಳಿಸಿದ್ದಾರೆ.












Click it and Unblock the Notifications