ತಾಯಿ ಬದುಕಿರುವಾಗಲೇ ಸಮಾಧಿಗೆ ಸ್ಥಳ ಹುಡುಕಿದ ಮಕ್ಕಳು
ಬಾಗಲಕೋಟೆ, ಡಿಸೆಂಬರ್ 12: ತಾಯಿ ಬದುಕಿರುವಾಗಲೇ ಆಕೆಯ ಸಮಾಧಿಗೆ ಜಾಗ ಹುಡುಕಿ, ಆ ಜಾಗಕ್ಕೆ ಪೂಜೆ ಮಾಡಿದ ಬಗ್ಗೆ ಸುದ್ದಿಯಾಗಿ, ಆ ವಿಚಾರ ಬಹಳ ಚರ್ಚೆಯಾಗುತ್ತಿದ್ದು, ಬಾಗಲಕೋಟೆಯಲ್ಲಿ ನಡೆದಿರುವ ಇಂಥ ಅಮಾನವೀಯ ನಡವಳಿಕೆಗೆ ಟೀಕೆ ಕೂಡ ವ್ಯಕ್ತವಾಗುತ್ತಿದೆ.
ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಉಪಿನಾಳ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, 106 ವರ್ಷದ ಪಾರ್ವತೆವ್ವ ಹಿರೇಮಠ ಎಂಬ ಹಿರಿಯ ಜೀವದ ಸಮಾಧಿಗಾಗಿ ಮಕ್ಕಳು ಸ್ಥಳ ಗೊತ್ತು ಮಾಡಿಟ್ಟಿದ್ದಾರೆ. ಆಕೆಗೆ ಕಳೆದ ಒಂದು- ಒಂದೂವರೆ ತಿಂಗಳಿಂದ ಅನಾರೋಗ್ಯ. ಅದು ಸ್ವಲ್ಪ ವಿಪರೀತ ಎನಿಸಿದ್ದರಿಂದ ಊರ ಹೊರಗಿನ ಜಮೀನಿನಲ್ಲಿ ಸಮಾಧಿಗೆ ಸ್ಥಳ ಹುಡುಕಿದ ಮಕ್ಕಳು, ಶಾಸ್ತ್ರೋಕ್ತವಾಗಿ ಪೂಜೆ ಸಹ ಮಾಡಿದ್ದಾರೆ.

ಪಾರ್ವತೆವ್ವನಿಗೆ ಮೂವರು ಗಂಡು ಮಕ್ಕಳು ಹಾಗೂ ಒಬ್ಬ ಹೆಣ್ಣುಮಗಳು ಗಂಡು ಮಕ್ಕಳ ಪೈಕಿ ಒಬ್ಬರು ಎಲ್ ಐಸಿಯಲ್ಲಿ ಮ್ಯಾನೇಜರ್, ಮತ್ತೊಬ್ಬರು ವೈದ್ಯ. ಇನ್ನೊಬ್ಬರು ಊರಿನಲ್ಲಿದ್ದು ಜಮೀನು ನೋಡಿಕೊಳ್ಳುತ್ತಾರೆ. ಚಿಕ್ಕವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡ ಈ ಮಕ್ಕಳನ್ನು ಆಕೆ ತುಂಬ ಶ್ರಮಪಟ್ಟು ಬೆಳೆಸಿದ್ದಾರೆ.

ಇಂಥ ತಾಯಿ ಬದುಕಿರುವಾಗಲೇ ಸಮಾಧಿಗೆ ಸ್ಥಳ ಹುಡುಕುವುದು, ಅದಕ್ಕೆ ಪೂಜೆ ಮಾಡುವುದು ಹೇಯ ಕೃತ್ಯ. ಯಾರಾದರೂ ತಾಯಿಯ ಆಯುಷ್ಯವನ್ನು ಕೋರುತ್ತಾರೆ ವಿನಾ ಸಾವನ್ನು ನಿರೀಕ್ಷಿಸುವುದಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಾರೆ.












Click it and Unblock the Notifications