ಬೀಳಗಿ ಕ್ಷೇತ್ರ ಬಿಟ್ಟು ಬೇರೆಲ್ಲೂ ಸ್ಪರ್ಧಿಸಲ್ಲ: ಸಚಿವ ಮುರುಗೇಶ್ ನಿರಾಣಿ
ಬಾಗಲಕೋಟೆ, ಅಕ್ಟೋಬರ್ 16: ''ಬೀಳಗಿ ಕ್ಷೇತ್ರ ಬಿಟ್ಟು ನಾನು ಎಲ್ಲೂ ಹೋಗಲ್ಲ. ನೂರಕ್ಕೆ ನೂರು ಬೀಳಗಿಯಿಂದಲೇ ನಾನು ಸ್ಪರ್ಧೆ ಮಾಡುತ್ತೇನೆ. ಯಾವುದೇ ರೂಮರ್ಸ್ಗಳಿಗೆ ಕಿವಿಗೊಡಬೇಡಿ'' ಎಂದು ಬೃಹತ್ ಹಾಗೂ ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಅವರು ಸ್ಪಷ್ಟಪಡಿಸಿದರು.
ಜಿಲ್ಲೆಯಲ್ಲಿ ಸುದ್ದಿಗಾರರಿಗೆ ಕೆಲವು ವಿಚಾರಗಳ ಕುರಿತು ಮಾತನಾಡಿದ ಅವರು, ನನ್ನನ್ನು ಶಾಸಕನನ್ನಾಗಿ ಮಾಡಿದವರು ಈ ನನ್ನ ಬೀಳಗಿ ಕ್ಷೇತ್ರದ ಜನರು. ನಾನು ಮಂತ್ರಿ ಆಗಿದ್ದು ಬೀಳಗಿ ಕ್ಷೇತ್ರದ ಜನರ ಆಶೀರ್ವಾದದಿಂದಲೇ. ಹೀಗಾಗಿ ನಾನು ಕೊನೆಯವರೆಗೂ ಬೀಳಗಿಯಲ್ಲೆ ಇರುತ್ತೇನೆ, ಈ ಸಂಬಂಧ ಯಾವುದೇ ಸಂಶಯ ಬೇಡ ಎಂದು ಹೇಳುವ ಮೂಲಕ ಅವರು ನಿರಾಣಿ ಅವರು ಜಮಖಂಡಿ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂಬ ವದಂತಿಗಳಿಗೆ ತೆರೆ ಎಳೆದರು.
ಕುಟುಂಬದಿಂದ ಇತರರು ಸ್ಪರ್ಧಿಸಿದರೆ ನಾನು ನಿವೃತ್ತಿ
ನಿರಾಣಿಯವರ ಕುಟುಂಬದಿಂದ ಸಹೋದರ ಸಂಗಮೇಶ್ ನಿರಾಣಿ ಅವರು ಸ್ಪರ್ಧೆ ಮಾಡುತ್ತಾರೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನಮ್ಮ ಕುಟುಂಬದಲ್ಲಿ ಒಬ್ಬರೆ ಸ್ಪರ್ಧೆ ಮಾಡುತ್ತಾರೆ. ನೂರಕ್ಕೆ ನೂರರಷ್ಟು ಹೇಳುತ್ತೇನೆ ಕುಟುಂಬದಿಂದ ಒಬ್ಬರು ಮಾತ್ರ ಸ್ಪರ್ಧೆ ಮಾಡುವುದು ಖಚಿತ. ಒಂದು ವೇಳೆ ಮುಂದಿನ ಬಾರಿ ಚುನಾವಣೆಗಳಲ್ಲಿ ನಮ್ಮ ಕುಟುಂಬದಿಂದ ಬೇರೆ ಯಾರಾದರೂ ಸ್ಪರ್ಧಿಸಿದರೆ ನಾನು ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ ಎಂದು ಅವರು ತಿಳಿಸಿದರು.

ಕಳೆದ ಚುನಾವಣೆಯಲ್ಲಿ ನಿರಾಣಿ ಸಹೋದರ ಸಂಗಮೇಶ್ ನಿರಾಣಿ ಜಮಖಂಡಿಯಲ್ಲಿ ಬಂಡಾಯ ಅಭ್ಯರ್ಥಿ ಆಗಿದ್ದರು. ಈ ಸಲ ತೇರದಾಳ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಾರೆ ಎಂಬ ಮಾತಿದೆ ಎಂದು ಸುದ್ದಿಗಾರರು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಸಚಿವರು, ನಮ್ಮ ಕುಟುಂಬದಲ್ಲಿ ಎಂದೂ ಮತ್ತೊಬ್ಬ ಚುನಾವಣೆಗೆ ಸ್ಪರ್ಧೆಗೆ ಸಿದ್ಧವಾಗುತ್ತಾರೋ ಅಂದು ನಾನು ರಾಜಕೀಯದಿಂದ ದೂರ ಉಳಿಯುತ್ತೇನೆ ಹೊರತು ನಾನು ರಾಜಕೀಯದಲ್ಲಿ ಪುನಃ ಸ್ಪರ್ಧೆಗೆ ಇಳಿಯಲ್ಲ ಎಂದರು.
ಪ್ರತಿ ಪಕ್ಷದವರ ಪಾದಯಾತ್ರೆಗಳು ಸಾಮಾನ್ಯ
ಕಾಂಗ್ರೆಸ್ ನವರು ಹಿಂದೆ ಕೂಡ ಹಲವು ಪಾದಯಾತ್ರೆಗಳ್ನು ಮಾಡಿದ್ದಾರೆ. ಈಗಲೂ ಕೈ ನಾಯಕರು ಪಾದಯಾತ್ರೆ ನಡೆಸುತ್ತಿದ್ದಾರೆ. ರಾಜಕೀಯ ಪಕ್ಷಗಳು ವಿಪಕ್ಷ ಸ್ಥಾನದಲ್ಲಿದ್ದಾಗ ಇಂತಹ ಪಾದಯಾತ್ರೆಗಳನ್ನು ಕೈಗೊಳ್ಳುವುದು ಸರ್ವೇ ಸಾಮಾನ್ಯ ಎಂದು ಅವರು ಹೇಳಿದರು.
ಈ ಹಿಂದೆ ಕೃಷ್ಣೆಯ ಕಣ್ಣೀರು ಅಂತಾ ಕಾಂಗ್ರೆಸ್ನವರು ಯಾತ್ರೆ ಮಾಡಿದ್ರು. ಅದರ ಕುರಿತು ಪುಸ್ತಕ ಕೂಡಾ ಬರೆದಿದ್ದರು. ಆದರೆ ಅಧಿಕಾರಕ್ಕೆ ಬಂದಾಗ ಕೃಷ್ಣೆಗೆ ಎಷ್ಟು ದುಡ್ಡು ಕೊಟ್ಟರು?. ಅಹಿಂದ-ಅಹಿಂದ ಅಂತಾ ದೊಡ್ಡ ದೊಡ್ಡ ಮಾತುಗಳನ್ನು ಆಡುತ್ತಾರೆ. ಅವುಗಳಿಗೆ ಎಷ್ಟು ಮೀಸಲಾತಿ ಕೊಟ್ಟಿದ್ದಾರೆ. ಶೇ.3ರಿಂದ ಶೇ.7 ರಷ್ಟು, ಶೇ.15ರಿಂದ ಶೇ.17ರಷ್ಟು ಏಕೆ ವಿಸ್ತರಣೆ ಮಾಡಲಿಲ್ಲ?. ಹೋರಾಟ ಮಾಡುವವರಿಗೆ ಈ ಅಂಶಗಳ ಬಗ್ಗೆ ನೆನಪಿರಬೇಕಲ್ಲವೇ? ಎಂದು ನಿರಾಣಿ ಅವರು ಪ್ರಶ್ನಿಸಿದರು.

ಹಿಂದುಳಿದವರನ್ನು ಕಾಂಗ್ರೆಸ್ಗಿಂತ ಹೆಚ್ಚಾಗಿ ಪ್ರೋತ್ಸಾಹಿಸಿದ್ದ ಬಿಜೆಪಿ ಸರ್ಕಾರ. ಇನ್ನೂ ಹಿಂದುಳಿದವರು ಅತೀ ಹೆಚ್ಚು ಆಯ್ಕೆಯಾಗಿ ಬರುವವರು ಬಿಜೆಪಿಯಿಂದಲೇ. ನೀವು ಬೇಕಾದರೆ ಅಂಕಿ ಸಂಖ್ಯೆಗಳು ಪರಿಶೀಲಿಸಿಕೊಳ್ಳಿ. ಎಸ್ಸಿ, ಎಸ್ಟಿ, ಹಿಂದುಳಿದವರು ಹೆಚ್ಚು ಇರುವುದು ನಮ್ಮ ಬಿಜೆಪಿ ಪಕ್ಷದಲ್ಲೇ ಎಂದು ಹೇಳುವ ಮೂಲಕ ಸಚಿವ ನಿರಾಣಿ ಅವರು ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದರು.












Click it and Unblock the Notifications