ಬಾಗಲಕೋಟೆ: ಎಚ್. ವೈ. ಮೇಟಿ ಪ್ರಕರಣ; ಸಂತ್ರಸ್ತೆಯ ಹತ್ಯೆ ಯತ್ನ
ಬಾಗಲಕೋಟೆ, ಆಗಸ್ಟ್ 11 : ಮಾಜಿ ಸಚಿವ ಎಚ್. ವೈ. ಮೇಟಿ ಲೈಂಗಿಕ ಹಗರಣದಲ್ಲಿ ಹೆಸರು ಕೇಳಿ ಬಂದಿದ್ದ ಸಂತ್ರಸ್ತೆಯನ್ನು ಹತ್ಯೆ ಮಾಡಲು ಯತ್ನಿಸಲಾಗಿದೆ. ಪ್ರಾಣಾಪಾಯದಿಂದ ಅವರು ಪಾರಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬಾಗಲಕೋಟೆ ಜಿಲ್ಲೆಯ ನವನಗರದಲ್ಲಿರುವ ವಿಜಯಲಕ್ಷ್ಮೀ ನಿವಾಸದಲ್ಲಿ ಶನಿವಾರ ರಾತ್ರಿ ಹತ್ಯೆ ಯತ್ನ ನಡೆದಿದೆ. ಈ ಸಂದರ್ಭದಲ್ಲಿ ಅವರ ಸಂಬಂಧಿಕರೊಬ್ಬರು ಮಾತ್ರ ಮನೆಯಲ್ಲಿದ್ದರು. ಗಾಯಗೊಂಡ ವಿಜಯಲಕ್ಷ್ಮೀ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ವಿಜಯಲಕ್ಷ್ಮೀ ಮನೆಗೆ ನುಗ್ಗಿದ ಇಬ್ಬರು ಚಾಕುವಿನಿಂದ ಹಲ್ಲೆ ಮಾಡಿದ್ದಾರೆ. ವಿಜಯಲಕ್ಷ್ಮೀ ಅವರ ಕೈ, ಮುಖಕ್ಕೆ ಗಾಯಗಳಾಗಿವೆ ಎಂದು ತಿಳಿದುಬಂದಿದೆ. "ಮಾಜಿ ಸಚಿವ ಎಚ್. ವೈ. ಮೇಟಿ ಅವರೇ ಈ ಕೃತ್ಯವನ್ನು ಮಾಡಿಸಿದ್ದಾರೆ" ಎಂದು ವಿಜಯಲಕ್ಷ್ಮೀ ಆರೋಪಿಸಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿರುವ ವಿಜಯಲಕ್ಷ್ಮೀ "ಕಳೆದ ತಿಂಗಳು ಪಲ್ಸರ್ ಬೈಕ್ನಲ್ಲಿ ಬಂದಿದ್ದ ಇಬ್ಬರು ನನ್ನನ್ನು ಕೊಲೆ ಮಾಡಲು ಯತ್ನಿಸಿದ್ದರು. ಆಗ ನಾನು ತಪ್ಪಿಸಿಕೊಂಡಿದೆ. ವಿಜಯಪುರದ ರೇಷ್ಮಾ ರೀತಯಲ್ಲಿಯೇ ನನ್ನ ಕೊಲೆಯಾಗುತ್ತದೆ. ನನಗೆ ರಕ್ಷಣೆ ಕೊಡಿ ಎಂದು ಪೊಲೀಸರಿಗೆ ಮನವಿ ಮಾಡಿದ್ದೇನೆ" ಎಂದು ಹೇಳಿದರು.
ಬಾಗಲಕೋಟೆಯ ಜಿಲ್ಲಾ ಆಯುರ್ವೇದ ಆಸ್ಪತ್ರೆಯ ಉದ್ಯೋಗಿ ವಿಜಯಲಕ್ಷ್ಮೀ 2017ರಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದರು. ನಿದ್ರೆ ಮಾತ್ರೆ ಸೇವಿಸಿ ಅಸ್ವಸ್ಥಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಈ ಪ್ರಕರಣದಲ್ಲಿ ಮಾಜಿ ಸಚಿವ ಎಚ್. ವೈ. ಮೇಟಿಗೆ ಸಿಐಡಿ ಕ್ಲೀನ್ ಚಿಟ್ ನೀಡಿತ್ತು. ಎಚ್. ವೈ. ಮೇಟಿ ರಾಸಲೀಲೆ ಪ್ರಕರಣದಲ್ಲಿ ಭಾಗಿಯಾದ ಆರೋಪ ಕೇಳಿಬಂದ ಬಳಿಕ ಸಂತ್ರಸ್ತೆ ದಿಢೀರ್ ನಾಪತ್ತೆಯಾಗಿದ್ದರು.












Click it and Unblock the Notifications