ದರ್ಗಾದಲ್ಲಿ ಕೇಸರಿ ಬಟ್ಟೆ ಹಿಡಿದು ಲೋಕಸಭಾ ಚುನಾವಣೆ ಭವಿಷ್ಯ ನುಡಿದ ಲಾಲಸಾಬ್ ಅಜ್ಜ!
ಮುಸ್ಲಿಮರ ಪ್ರಮುಖ ಹಬ್ಬಗಳಲ್ಲಿ ಮೊಹರಂ ಕೂಡ ಒಂದು. ಜುಲೈ 19ರಿಂದಲೇ ಇದರ ಆಚರಣೆ ಪ್ರಾರಂಭವಾಗಿತ್ತು, ಜುಲೈ 29ರಂದು ಮುಕ್ತಾಯವಾಗಿದೆ. ಮೊಹರಂ ವೇಳೆ ದರ್ಗಾದ ಮುಖಂಡರು ನುಡಿದಿರುವ ಭವಿಷ್ಯ ಸದ್ಯ ಭಾರಿ ವೈರಲ್ ಆಗಿದ್ದು, ಕುತೂಹಲ ಮೂಡಿಸಿದೆ.
ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಹೆಬ್ಬಳ್ಳಿ ಗ್ರಾಮದ ಲಾಲಸಾಬವಲಿ ದರ್ಗಾದಲ್ಲಿ ಲಾಲಸಾಬ್ ಅಜ್ಜ ಮೊಹರಂ ಸಂದರ್ಭದ್ಲಿ ಭವಿಷ್ಯ ನುಡಿಯುತ್ತಾರೆ. ಅದೇ ರೀತಿ ಈ ಬಾರಿ ಕೂಡ ಭವಿಷ್ಯ ನುಡಿದಿದ್ದು, ಅವರ ಭವಿಷ್ಯ ಕೇಳಿದ ಜನ ಆತಂಕಗೊಂಡಿದ್ದಾರೆ. ಅದರಲ್ಲೂ ಈ ಬಾರಿ ಅವರು ಭವಿಷ್ಯ ನುಡಿಯುವಾಗ ಕೇಸರಿ ಬಟ್ಟೆಯನ್ನು ಹಿಡಿದಿದ್ದರು ಎನ್ನುವುದು ವಿಶೇಷ.

ಶನಿವಾರ ಸಂಜೆ ಅವರು ದರ್ಗಾದಲ್ಲಿ ಭವಿಷ್ಯ ನುಡಿದಿದ್ದರೆ, ಅವರ ಭವಿಷ್ಯ ಕೇಳಲು ಇಡೀ ಗ್ರಾಮದ ಜನತೆ ಅಲ್ಲಿ ನೆರೆದಿತ್ತು. ದೇಶದಲ್ಲಿ ಮುಂದೆ ಆಗುವ ಘಟನೆಗಳು ಹಾಗೂ ರಾಜಕೀಯದ ಬಗ್ಗೆ ಲಾಲಸಾಬ್ ಅಜ್ಜ ಭವಿಷ್ಯ ನುಡಿದಿದ್ದಾರೆ.
ಕೋಮು ಸಂಘರ್ಷ ಹೆಚ್ಚಾಗುತ್ತದೆ
ಲಾಲ್ ಸಾಬ್ ಅಜ್ಜ ಕೇಸರಿ ಬಟ್ಟೆ ಹಿಡಿದು ಭವಿಷ್ಯ ಹೇಳಿದ್ದಾರೆ. ಕೇಸರಿ ಬಟ್ಟೆ ಹಿಡಿದು ಇದರ ಸಲುವಾಗಿ ಬಹಳ ಬಡಿದಾಡುತ್ತಾರೆ, ಇದಕ್ಕಾಗಿ ಬಹಳ ಹೆಣಗಳು ಬೀಳುತ್ತವೆ. ಆದರೆ ಬರೆದು ಇಟ್ಟುಕೊಳ್ಳಿ ಖುರ್ಚಿ ಮಾತ್ರ ಗಟ್ಟಿ ಅದ ಪಾ ಎಂದು ಕೇಸರಿ ಬಟ್ಟೆಯನ್ನು ನೆರೆದಿದ್ದ ಜನರಿಗೆ ತೋರಿಸಿದ್ದಾರೆ.
ಲಾಲಸಾಬ್ ಅಜ್ಜ ಹೇಳಿರುವ ಭವಿಷ್ಯದ ಅರ್ಥ, ದೇಶದಲ್ಲಿ ಕೋಮು ಗಲಭೆಗಳು ಹೆಚ್ಚಾಗಲಿದ್ದು, ಇದರಿಂದ ಸಾವು-ನೋವು ಸಂಭವಿಸಲಿವೆ. ಆದರೂ ದೇಶದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಹೇಳಿರುವುದಾಗಿ ಜನ ವಿಶ್ಲೇಷಣೆ ಮಾಡಿದ್ದಾರೆ.
2024ರಲ್ಲಿ ಲೋಕಸಭಾ ಚುನಾವಣೆ ನಡೆಯಲಿದ್ದು ಇದಕ್ಕೂ ಮುಂದೆ ದೇಶದಲ್ಲಿ ಹಲವು ಕೋಮು ಸಂಘರ್ಷಗಳು ನಡೆಬಹುದು ಎಂದು ಭವಿಷ್ಯದ ಅರ್ಥ ಎನ್ನಲಾಗಿದೆ. ವಿಪಕ್ಷಗಳು ಒಟ್ಟಾಗಿ ಬಿಜೆಪಿ ನೇತೃತ್ವದ ಎನ್ಡಿಎ ಒಕ್ಕೂಟ ಸೋಲಿಸಬೇಕು ಎಂದು ಪಣತೊಟ್ಟಿವೆ, ಆದರೂ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎನ್ನುವ ಅರ್ಥವದಲ್ಲಿ ಭವಿಷ್ಯ ನುಡಿದಿದ್ದಾರೆ ಎನ್ನಲಾಗಿದೆ.
ಚುನಾವಣೆ ಹತ್ತಿರವಾದಂತೆ ಹಲವರು ತಮ್ಮದೇ ಆದ ರೀತಿಯಲ್ಲಿ ಭವಿಷ್ಯಗಳನ್ನು ನುಡಿಯುವುದು ಸಹಜ. ಗೊರವಯ್ಯ ಕಾರ್ಣಿಕ ಸೇರಿದಂತೆ ಹಲವು ಭವಿಷ್ಯಗಳನ್ನು ನಂಬುವ, ಆರಾಧಿಸುವ ಲಕ್ಷಾಂತರ ಜನ ಇದ್ದಾರೆ. ಮುಂದಿನ ಚುನಾವಣೆಯಲ್ಲಿ ಲಾಲಾಸಾಬ್ ಅಜ್ಜ ಹೇಳಿರುವ ಭವಿಷ್ಯ ನಿಜ ಆಗುತ್ತಾ ಎನ್ನುವುದಕ್ಕೆ ಕಾಲವೇ ಉತ್ತರ ನೀಡಲಿದೆ.











Click it and Unblock the Notifications