ಪ್ರತಿನಿತ್ಯ ಹತ್ತಾರು ಮಕ್ಕಳಿಗೆ ಉಚಿತ ಶಿಕ್ಷಣ ಕೊಡ್ತಾರೆ ಈ ಹಳ್ಳಿಮೇಷ್ಟು
ಬಾಗಲಕೋಟೆ, ಅಕ್ಟೋಬರ್ 21: ಇಂದಿನ ದಿನಮಾನದಲ್ಲಿ ಶಿಕ್ಷಣ ವ್ಯಾಪಾರದ ರೂಪ ತಾಳಿದೆ. ಹಣದ ಮೇಲೆ ನಿಂತಿರುವ ಶಿಕ್ಷಣದ ವ್ಯವಸ್ಥೆಯ ನಡುವೆಯೇ ಇಲ್ಲೊಬ್ಬರು ಉಪನ್ಯಾಸಕ ತಾನು ಪಡೆದ ಶಿಕ್ಷಣ ವ್ಯರ್ಥವಾಗಬಾರದೆಂಬ ಉದ್ಧೇಶದಿಂದ ನಿತ್ಯ ಹಲವಾರು ಗ್ರಾಮಗಳಿಗೆ ತೆರಳಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಕೊಡುತ್ತಿದ್ದಾರೆ.
ನಿರಂತರ ಅಕ್ಷರ ದಾಸೋಹ ಮಾಡುತ್ತಿರುವ ಬಾಗಲಕೋಟೆಯ ಕುಳಗೇರಿ ಗ್ರಾಮದ ನಿವಾಸಿ ಶಂಕರ ತೆಗ್ಗಿ ಅಕ್ಷರ ದಾನಿ ಎನಿಸಿಕೊಂಡಿದ್ದಾರೆ. ಸ್ನಾತಕೋತ್ತರ ಪದವಿ ಪಡೆದ ಇವರಿಗೆ ಇಷ್ಟು ಕಲಿತರೂ ನನಗೆ ಯಾವುದೇ ಒಂದು ಸರ್ಕಾರಿ ಕೆಲಸ ಸಿಗಲಿಲ್ಲವಲ್ಲ ಎಂಬ ಕೊರಗು ಕಾಡುತ್ತಿದೆ.
ಬಾಗಲಕೋಟೆ: ಇನ್ನೆರಡು ದಿನಗಳಲ್ಲಿ ಕಬ್ಬು ಬೆಳೆಗೆ ಸರಕಾರದಿಂದ ಸೂಕ್ತ ಬೆಲೆ ನಿರ್ಧಾರ
ಸದ್ಯ ಇವರು ಖಾಸಗಿ ಸಂಸ್ಥೆಯಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರವೃತ್ತಿಯಲ್ಲಿ ಬೆಳಿಗ್ಗೆ ಹಾಗೂ ಸಾಯಂಕಾಲ ಗ್ರಾಮೀಣ ಭಾಗದ ವಿದ್ಯಾರ್ಥಿಗಳನ್ನು ಒಂದೆಡೆ ಸೇರಿಸಿ ಉಚಿತ ಶಿಕ್ಷಣ ನೀಡುತ್ತಿದ್ದಾರೆ.
ಗ್ರಾಮೀಣ ಮಕ್ಕಳ ನೋವುನ್ನು ನಾನು ಅರಿತಿದ್ದೇನೆ ಎಂದ ಶಂಕರ ತೆಗ್ಗಿ
ಶಿಕ್ಷಕ ಶಂಕರ ತೆಗ್ಗಿಯವರು ಅಕ್ಷರ ಯಾತ್ರೆ ಶೀರ್ಷಿಕೆಯಡಿ ಎಲ್ಲಾ ಗ್ರಾಮಗಳಿಗೆ ಹೋಗಿ ಅಲ್ಲಿನ ಪ್ರಮುಖರನ್ನು ಭೇಟಿ ಮಾಡಿ ಮನೆ-ಮನೆಗಳಿಗೆ ತೆರಳಿ ಮಕ್ಕಳನ್ನು ಒಗ್ಗೂಡಿಸಿ ಶಾಲೆ ಅಥವಾ ದೇವಸ್ಥಾನದ ಆವರಣದಲ್ಲಿ ಉಚಿತವಾಗಿ ಶಿಕ್ಷಣ ನೀಡುತ್ತಿದ್ದಾರೆ. ಗ್ರಾಮೀಣ ಭಾಗದ ಮಕ್ಕಳು ಸಹ ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ಈ ಒಂದು ಉಚಿತ ಶಿಕ್ಷಣ ಸೌಲಭ್ಯ ಪಡೆಯುತ್ತಿದ್ದಾರೆ.
"ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಶಿಕ್ಷಣದ ಕೊರತೆ ಇದೆ. ಹೆಚ್ಚಿನ ಶಿಕ್ಷಣ(ಟ್ಯೂಶನ್) ಪಡೆಯಲು ಪಟ್ಟಣ ಪ್ರದೇಶಕ್ಕೆ ಬರಬೇಕು. ನಾನು ಸಹ ಬಡ ಕುಟುಂಬದಲ್ಲಿ ಜನಿಸಿದವನು. ಹೀಗಾಗಿ ಗ್ರಾಮೀಣ ಮಕ್ಕಳ ನೋವನ್ನು ನಾನು ಅರಿತಿದ್ದೇನೆ. ನಾನು ಕಲಿತ ವಿದ್ಯೆ ವ್ಯರ್ಥವಾಗಬಾರದು ಎಂಬ ಉದ್ಧೇಶದಿಂದ ನಾನು ಸುಮಾರು ವರ್ಷಗಳಿಂದ ಅಕ್ಷರ ಯಾತ್ರೆ ಎಂಬ ಹೆಸರಲ್ಲಿ ನಿತ್ಯ ನಾಲ್ಕೈದು ಗ್ರಾಮಗಳಿಗೆ ತೆರಳಿ ಅಲ್ಲಿರುವ ಮಕ್ಕಳಿಗೆ ಉಚಿತ ಶಿಕ್ಷಣ ಕೊಡುವ ಕೆಲಸ ಮಾಡುತ್ತಿದ್ದೇನೆ," ಎಂದು ಶಂಕರ ತೆಗ್ಗಿ ಹೇಳಿದ್ದಾರೆ.ಮಕ್ಕಳು-ಪಾಲಕರು ಸಹ ಆಸಕ್ತಿ ತೋರುತ್ತಿದ್ದಾರೆ
ತಮ್ಮ ಈ ಶಿಕ್ಷಣ ಸೇವೆಯ ಬಗ್ಗೆ ಮಾತು ಮುಂದುವರಿಸಿದ ಅವರು, "ನಮ್ಮ ನಾಡಿಗಾಗಿ ಸಮಾಜಕ್ಕಾಗಿ ಸಾಕಷ್ಟು ಮಹನಿಯರು ದುಡಿದಿದ್ದಾರೆ, ಕೆಲವರು ತಮ್ಮ ಜೀವನವನ್ನೇ ತ್ಯಾಗ ಮಾಡಿದ್ದಾರೆ. ಇಂಥ ಮಹನಿಯರ ಮುಂದೆ ಈ ನನ್ನ ಕಾರ್ಯ ದೊಡ್ಡದಲ್ಲ. ಸಮಾಜಕ್ಕಾಗಿ ನಾನು ಏನನ್ನಾದರೂ ಮಾಡಬೇಕೆಂಬ ಹವ್ಯಾಸ ನನಗಿತ್ತು. ನನಗೆ ಯಾವುದೇ ಸರ್ಕಾರಿ ಕೆಲಸ ಸಿಗದಿದ್ದರೂ ಪರವಾಗಿಲ್ಲ ನಾನು ಗ್ರಾಮೀಣ ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕೃತಿ ಸಂಸ್ಕಾರ ಹೇಳಿಕೊಡುತ್ತಿದ್ದೆನೆ ಮಕ್ಕಳು-ಪಾಲಕರು ಸಹ ಆಸಕ್ತಿ ತೋರುತ್ತಿದ್ದಾರೆ ನನಗೆ ತುಂಬಾ ಖುಷಿ ತಂದಿದೆ" ಎಂದಿದ್ದಾರೆ.
ಶಂಕರ ತೆಗ್ಗಿ ಶಿಕ್ಷಕನ ಕಾರ್ಯ ಶ್ಲಾಘನೀಯ
ಈ ಹಳ್ಳಿ ಮೇಷ್ಟ್ರ ಉಚಿತ ಸೇವೆ ಬಗ್ಗೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಗ್ರಾಮಸ್ಥ ಬೀರಪ್ಪ ದ್ಯಾವನಗೌಡ್ರ ದುಬೈ ಈ ಬಗ್ಗೆ ಮಾತನಾಡಿದ್ದಾರೆ. "ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುತ್ತಿರುವ ಶಂಕರ ತೆಗ್ಗಿ ಶಿಕ್ಷಕನ ಕಾರ್ಯ ಶ್ಲಾಘನೀಯ. ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಇವರ ಶಿಕ್ಷಣದ ಸೇವೆಯನ್ನು ಗ್ರಾಮೀಣ ಮಕ್ಕಳು ಸದುಪಯೋಗ ಪಡಿಸಿಕೊಳ್ಳಬೇಕು. ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ಇಂಥ ವ್ಯಕ್ತಿಗಳನ್ನು ಗುರುತಿಸಿ ಪ್ರೋತ್ಸಾಹಿಸಬೇಕು ಇದರಿಂದ ಕಟ್ಟ ಕಡೆಯ ವಿದ್ಯಾರ್ಥಿಗಳಿಗೂ ಉತ್ತಮ ಶಿಕ್ಷಣ ದೊರೆಯುತ್ತದೆ," ಎಂದರು
ಉಚಿತ ಶಿಕ್ಷಣ ನೀಡುತ್ತಾರೆ ಎಂದರೆ ನಮ್ಮ ಪುಣ್ಯ
ಶಂಕರ ತೆಗ್ಗಿ ಅವರಿಂದ ಪ್ರತಿನಿತ್ಯ ಹತ್ತಾರು ವಿದ್ಯಾರ್ಥಿಗಳು ಉಚಿತ ಶಿಕ್ಷಣ ಪಡೆಯುತ್ತಿದ್ದಾರೆ. ತಮ್ಮ ಮೆಚ್ಚಿನ ಶಿಕ್ಷಕರ ಬಗ್ಗೆ ತಳಕವಾಡ ಗ್ರಾಮದ ವಿದ್ಯಾರ್ಥಿನಿ ಚೈತ್ರಾ ಮೂಗನೂರಮಠ ಮಾತನಾಡಿದ್ದಾರೆ. "ನಾನು ಪಿಯುಸಿ ಓದುತ್ತಿದ್ದೆನೆ ಹೆಚ್ಚಿನ ಶಿಕ್ಷಣ(ಟ್ಯೂಷನ್) ಪಡೆಯಲು ನಾವೆಲ್ಲ ಶಿಕ್ಷಣ ಪಟ್ಟಣಕ್ಕೆ ಹೋಗಬೇಕು. ಅದರಲ್ಲೂ ಹೆಚ್ಚಿನ ಕ್ಲಾಸಿಗೆ ಕೂಡ್ರಲು ಹಣ ಕೊಡಬೇಕು. ಆದರೆ ಒಬ್ಬ ಉಪನ್ಯಾಸಕರು ನಮ್ಮ ಮನೆಯ ಬಾಗಿಲಿಗೆ ಬಂದು ಅದರಲ್ಲೂ ಉಚಿತ ಶಿಕ್ಷಣ ನೀಡುತ್ತಾರೆ ಎಂದರೆ ನಮ್ಮ ಪುಣ್ಯ. ನಮಗೆ ಎಲ್ಲಿಲ್ಲದ ಸಂತಸವಾಗಿದೆ. ಶಂಕರ ಶಿಕ್ಷಕರಿಗೆ ನಾವು ಚಿರಋಣಿ. ಸದ್ಯ ನಮ್ಮ ಗ್ರಾಮದಲ್ಲಿ ನೂರಾರು ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳುತ್ತಿದ್ದೇವೆ," ಎಂದರು.