ಇನ್ನೂ ಭೀಕರ ಗಂಡಾಂತರ ಕಾದಿದೆ: ಕೋಡಿಮಠದ ಶ್ರೀ ಭವಿಷ್ಯ
Recommended Video
ಬಾಗಲಕೋಟೆ, ಆಗಸ್ಟ್ 12: ಉತ್ತರ ಕರ್ನಾಟಕ, ಕರಾವಳಿ, ಉತ್ತರ ಕನ್ನಡ, ಮಲೆನಾಡು ಹೀಗೆ ರಾಜ್ಯದ ಹೆಚ್ಚಿನ ಪಾಲು ಭೂಮಿ ನೀರಿನಲ್ಲಿ ಮುಳುಗಿಹೋಗಿದೆ. ಮನೆಗಳು ನೆಲಕಚ್ಚಿವೆ. ದಶಕಗಟ್ಟಲೆ ಬೆವರು ಹರಿಸಿ ಬೆಳೆಸಿದ್ದ ಗದ್ದೆ, ತೋಟಗಳು ಧರೆಗುರುಳಿವೆ. ಕೆಲವೆಡೆ ರಸ್ತೆಗಳು ಇದ್ದವೆಂಬ ಕುರುಹೂ ಇಲ್ಲದಂತೆ ಕೊಚ್ಚಿಹೋಗಿವೆ.
ಮಳೆ ಮತ್ತು ಪ್ರವಾಹದಿಂದ ರಾಜ್ಯದ ಬಹುತೇಕಭಾಗದ ಜನರು ತತ್ತರಿಸಿದ್ದಾರೆ. ಕೆಲವೇ ದಿನಗಳ ಹಿಂದೆ ಮಳೆ ಇಲ್ಲದೆ, ಕುಡಿಯುವ ನೀರಿಲ್ಲ ಎಂದು ಆಕಾಶ ನೋಡುತ್ತಿದ್ದ ಜನರು, ಈಗ ಸುರಿಯುತ್ತಿರುವ ಮಳೆಯಿಂದ ಕಂಗಾಲಾಗಿದ್ದಾರೆ. ಮನೆ, ಜಮೀನು, ಆಸ್ತಿಪಾಸ್ತಿ ಕಳೆದುಕೊಂಡು ದಿಕ್ಕೆಟ್ಟಿದ್ದಾರೆ. ಕೆಲವೆಡೆ ಮಳೆ ಕಡಿಮೆಯಾಗಿದ್ದು, ಪ್ರವಾಹ ಪರಿಸ್ಥಿತಿ ಇಳಿಮುಖವಾಗಿದೆ. ಜನರೂ ತುಸು ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದಾರೆ.
ಆದರೆ, ಮಳೆ ಇಷ್ಟಕ್ಕೇ ನಿಲ್ಲುವುದಿಲ್ಲ. ಈ ಅಪಾಯಕಾರಿ ಮಳೆ ಅಬ್ಬರ ಇನ್ನೂ ಮುಂದುವರಿಯಲಿದೆ. ಮುಂದಿನ ಮೂರು ತಿಂಗಳು ಜಲಕಂಟಕ ಇರಲಿದೆ ಎಂದು ಕೋಡಿ ಮಠದ ಶ್ರೀಗಳು ಎಚ್ಚರಿಕೆ ನೀಡಿದ್ದಾರೆ.
ಬಾಗಲಕೋಟೆಯ ಶಿವಯೋಗಿ ಮಂದಿರಕ್ಕೆ ಭೇಟಿ ನೀಡಿದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಮಾಧ್ಯಮಗಳೊಂದಿಗೆ ಮಾತನಾಡಿದರು. ಇಡೀ ಜಗತ್ತು ಬೆಚ್ಚಿಬೀಳುವಂತಹ, ಹಿಂದೆಂದೂ ಕಾಣದ ಆಘಾತವೊಂದು ಭೂಮಂಡಲಕ್ಕೆ ಅಪ್ಪಳಿಸಲಿದೆ. ಇದರಿಂದ ದೊಡ್ಡ ನಗರಗಳಿಗೆ ಅಪಾಯವಾಗಬಹುದು ಎಂದು ಅವರು ಭವಿಷ್ಯ ನುಡಿದಿದ್ದಾರೆ.
ಇದೇ ತಿಂಗಳಲ್ಲಿ ಮತ್ತೊಂದು ಭೀಕರ ಪ್ರವಾಹ ಎದುರಾಗಲಿದೆ. ಇನ್ನು ಎರಡು ತಿಂಗಳ ಬಳಿಕ ಮುಂಬರುವ ಕಾರ್ತಿಕ ಮಾಸದವರೆಗೂ ಜಲಕಂಟಕ ಮುಂದುವರಿಯಲಿದೆ ಎಂದಿದ್ದಾರೆ.

ಕಂಡು ಕೇಳರಿಯದ ವಾಯು ಆಘಾತ
ಈ ವರ್ಷ ಮತ್ತಷ್ಟು ಜಲ ಆಘಾತ, ಭೂ ಆಘಾತ ಹಾಗೂ ವಾಯು ಆಘಾತಗಳು ಸಂಭವಿಸಲಿವೆ. ಈಗ ಜಲ ಆಘಾತ ಸಂಭವಿಸುತ್ತಿದೆ. ಮುಂದಿನ ದಿನಗಳಲ್ಲಿ ಭೂ ಆಘಾತ ಉಂಟಾಗಲಿದೆ. ಭೂಮಿ ನಡುಗುವುದು, ಭೂಕುಸಿತ, ಕಟ್ಟಡ ಕುಸಿತಗಳಂತಹ ಘಟನೆಗಳು ನಡೆಯಲಿವೆ. ಜಗತ್ತು ಹಿಂದೆಂದೂ ಕೇಳದ ವಾಯು ಆಘಾತವೊಂದು ಕೂಡ ಉಂಟಾಗಲಿದೆ ಎಂದರು. ಈ ವಾಯು ಆಘಾತ ಯಾವ ರೀತಿಯದು ಎಂಬುದನ್ನು ಮುಂದಿನ ದಿನಗಳಲ್ಲಿ ತಿಳಿಸುವುದಾಗಿ ಹೇಳಿದರು.

ಜನರಲ್ಲಿ ಭಕ್ತಿ ಭಾವ ಕಡಿಮೆಯಾಗುತ್ತಿದೆ
ಜನರಲ್ಲಿ ಭಕ್ತಿಭಾವಗಳು, ದೈವ ನಂಬಿಕೆ ಮತ್ತು ವಿಶ್ವಾಸಗಳು ಕಡಿಮೆಯಾಗುತ್ತಿವೆ. ಹೀಗಾಗಿ ಪ್ರಕೃತಿಯೇ ಈ ರೀತಿ ಜನರನ್ನು ಎಚ್ಚರಿಸುತ್ತಿದೆ. ಧರ್ಮದ ದಾರಿ ತಪ್ಪುವ ಮನುಷ್ಯನಿಗೆ ದೈವವು ಒಂದೊಂದೇ ಸೂಚನೆ ನೀಡುತ್ತದೆ. ಹಾಗೆಯೇ ಈ ಪ್ರವಾಹವೂ ಒಂದು ಸೂಚನೆಯಾಗಿದೆ ಎಂದು ಹೇಳಿದರು.

ಜನ, ಸರ್ಕಾರ ಮುಂದೆ ಬರಬೇಕು
ಬಾಗಲಕೋಟೆಯ ಶಿವಯೋಗಿ ಮಂದಿರಕ್ಕೆ ಪ್ರವಾಹದಿಂದ ಹಾನಿಯಾಗಿದೆ. ಈ ಬಗ್ಗೆ ವಿಷಾದ ವ್ಯಕ್ತಪಡಿಸಿದ ಅವರು, ಇಲ್ಲಿ ನೂರಾರು ಕೋಟಿ ರೂಪಾಯಿ ನಷ್ಟವುಂಟಾಗಿದೆ. ಸರ್ಕಾರ ಮತ್ತು ಜನರು ಈ ಮಂದಿರದ ಪುನಶ್ಚೇತನಕ್ಕೆ ಸಹಾಯ ಮಾಡಲು ಮುಂದೆ ಬರಬೇಕು ಎಂದು ಮನವಿ ಮಾಡಿದರು.

ಉತ್ತಮ ಮಳೆಯಾಗಲಿದೆ ಎಂದಿದ್ದ ಶ್ರೀಗಳು
ಈ ವರ್ಷ ಉತ್ತಮ ಮಳೆಯಾಗಲಿದೆ ಎಂದು ಕೋಡಿಮಠದ ಶ್ರೀಗಳು ಕಳೆದ ಏಪ್ರಿಲ್ನಲ್ಲಿ ಭವಿಷ್ಯ ನುಡಿದಿದ್ದರು. ರಾಜ್ಯದಲ್ಲಿ ಭೀಕರ ಬರಗಾಲ ಉಂಟಾಗಿ ಜನರು ತತ್ತರಿಸಿ ಹೋಗಿದ್ದಾರೆ. ಆದರೆ, ಆತಂಕ ಪಡುವ ಅಗತ್ಯವಿಲ್ಲ. ಈ ವರ್ಷ ಸಾಕಷ್ಟು ಮಳೆ, ಬೆಳೆ ಆಗಲಿದೆ. ಎಲ್ಲ ಕಡೆಯೂ ನೀರು ಹರಿದಾಡಲಿದೆ ಎಂದು ಬೆಳಗಾವಿಯಲ್ಲಿ ಅವರು ಹೇಳಿದ್ದರು. ಆದರೆ, ಪ್ರವಾಹದ ಕುರಿತು ಅವರು ಭವಿಷ್ಯ ನುಡಿದಿರಲಿಲ್ಲ.












Click it and Unblock the Notifications