ಚಿತ್ರಗಳು : ಬಾಗಲಕೋಟೆಯಲ್ಲಿ ರಾಷ್ಟ್ರೀಯ ಸೈಕ್ಲಿಂಗ್ ಸ್ಪರ್ಧೆ
ಬಾಗಲಕೋಟೆ, ನವೆಂಬರ್ 1 : ಅದು ಪಕ್ಕಾ ಗ್ರಾಮಾಂತರ ಪ್ರದೇಶ, ಆದರೆ, ಅಲ್ಲಿ ನಡೆದದ್ದು ರಾಷ್ಟ್ರ ಮಟ್ಟದ ಸ್ಪರ್ಧೆ. ಎಲ್ಲಿ ನೋಡಿದರೂ ಕ್ರಿಡಾಪಟುಗಳು. ಕ್ರೀಡಾಳುಗಳಿಂದ ಅಭ್ಯಾಸ. ನೋಡೋಕೆ ಸೇರಿತ್ತು ಹಳ್ಳಿಗಾಡಿನ ಅಪಾರ ಜನ, ಸೈಕಲ್ ಸವಾರಿಗರ ಸಾಹಸ ಕಂಡು ಭರ್ಜರಿ ಕರತಾಡನ.
ಗಾಳಿಯ ವೇಗದಂತೆ ಸುಯ್ ಎಂದು ವೇಗವಾಗಿ ಸೈಕಲ್ ಓಡಿಸುತ್ತಿರುವ ಸೈಕ್ಲಿಸ್ಟ್ ಗಳು, ಸೈಕ್ಲಿಸ್ಟ್ ಗಳ ಸವಾರಿ ಕಂಡು ಕೇಕೆ ಹಾಕಿ ಸಂಭ್ರಮಿಸುತ್ತಿರುವ ಅಪಾರ ಜನ, ರಸ್ತೆ ತುಂಬೆಲ್ಲ ಸೈಕಲ್ ಹೀರೋಗಳದ್ದೆ ದರ್ಬಾರ್. ಇದು ಬಾಗಲಕೋಟೆ ಜಿಲ್ಲೆ ಜಮಖಂಡಿ-ವಿಜಯಪುರ ರಸ್ತೆಯಲ್ಲಿ ನಡೆದ 22ನೇ ಅಂತರಾಷ್ಟ್ರೀಯ ಸೈಕ್ಲಿಂಗ್ ಚಾಂಪಿಯನ್ ಶಿಪ್ ಸ್ಪರ್ಧೆಯ ಝಲಕ್.
ಜಮಖಂಡಿ ನಗರ ಈಗ ಇಡೀ ದೇಶವೇ ತನ್ನತ್ತ ತಿರುಗಿ ನೋಡುವಂತೆ ಮಾಡಿದೆ. ಪಕ್ಕಾ ಗ್ರಾಮೀಣ ಭಾಗವಾದ ಜಮಖಂಡಿ ನಗರದಲ್ಲಿ 22ನೇ ರಾಷ್ಟ್ರೀಯ ಸೈಕ್ಲಿಂಗ್ ಸ್ಪರ್ಧೆ ನಡೆಯಿತು. ಜಮಖಂಡಿ ನಗರದ ಕನ್ನಡ ಸಂಘದ 50 ವರ್ಷದ ಸಂಭ್ರಮದ ಪ್ರಯುಕ್ತ ಈ ಚಾಂಪಿಯನ್ ಶಿಪ್ ಆಯೋಜಿಸಲಾಗಿತ್ತು.
ಅಕ್ಟೋಬರ್ 28ರಿಂದ 31ರವರೆಗೆ ಜಮಖಂಡಿಯಲ್ಲಿ ರಾಷ್ಟ್ರೀಯ ಸೈಕ್ಲಿಂಗ್ ಸ್ಪರ್ಧೆಯದ್ದೇ ಹಾವಳಿ. ಕನ್ನಡ ಸಂಘದ ಅಧ್ಯಕ್ಷ ಮತ್ತು ಜಮಖಂಡಿ ಶಾಸಕರೂ ಆದ ಸಿದ್ದು ನ್ಯಾಮಗೌಡ ನೇತೃತ್ವದಲ್ಲಿ ಈ ಸ್ಪರ್ಧೆ ನಡೆಯಿತು. ಕ್ರೀಡಾ ಮತ್ತು ಯುವಜನ ಸೇವೆ ಸಚಿವ ಪ್ರಮೋದ್ ಮಧ್ವರಾಜ್ ಚಾಂಪಿಯನ್ ಶಿಪ್ ಉದ್ಘಾಟಿಸಿದರು. ಚಾಂಪಿಯನ್ ಶಿಪ್ ಚಿತ್ರಗಳು ಇಲ್ಲಿವೆ...

ಹಿಂದೆಯೂ ನಡೆಯುತ್ತಿತ್ತು
ಜಮಖಂಡಿಯ ಪಟವರ್ಧನ ಮಹಾರಾಜರ ಕಾಲದಲ್ಲಿಯೂ ಈ ಭಾಗದಲ್ಲಿ ಸೈಕ್ಲಿಂಗ್ ಸ್ಪರ್ಧೆ ನಡೆಯುತ್ತಿತ್ತು. ಇದನ್ನು ಮುಂದುವರೆಸಿಕೊಂಡು ಹೋಗುವ ಪ್ರಯತ್ನ ಈ ಮೂಲಕ ನಡೆಯುತ್ತಿದೆ.

ಎರಡು ಬಾರಿ ಸೈಕ್ಲಿಂಗ್ ಸ್ಪರ್ಧೆ ನಡೆದಿದೆ
ಜಮಖಂಡಿ ನಗರದಲ್ಲಿ ಈಗಾಗಲೇ 2 ಬಾರಿ ರಾಷ್ಟ್ರೀಯ ಸೈಕ್ಲಿಂಗ್ ಸ್ಪರ್ಧೆ ನಡೆಸಲಾಗಿದೆ. ಈಗ 22 ನೇ ರಾಷ್ಟ್ರೀಯ ಸೈಕ್ಲಿಂಗ್ ಸ್ಪರ್ಧೆ ನಡೆಯಿತು. ರಾಷ್ಟ್ರೀಯ ಸೈಕ್ಲಿಂಗ್ ಫೆಡರೇಷನ್ ಸಹಭಾಗಿತ್ವದಲ್ಲಿ ಈ ಸ್ಪರ್ಧೆ ನಡೆಯಿತು.

600 ಕ್ರೀಡಾಪಟುಗಳು
ಸ್ಪರ್ಧೆಯಲ್ಲಿ 26 ರಾಜ್ಯಗಳಿಂದ 600ಕ್ಕೂ ಅಧಿಕ ಕ್ರೀಡಾಗಳು ಭಾಗಿಯಾಗಿದ್ದರು. ಭಾರತೀಯ ಸೇನೆಯ 200 ಸೇರಿ ಒಟ್ಟು 800 ಸೈಕ್ಲಿಸ್ಟ್ ಗಳು ಕ್ರೀಡೆಯಲ್ಲಿ ಭಾಗಿಯಾಗಿದ್ದಾರೆ. ವಯೋಮಾನಕ್ಕೆ ತಕ್ಕಂತೆ 20, 30, 40, 50,ರಿಂದ 150 ಕಿ.ಮೀ. ದೂರದ ರಸ್ತೆ ಸೈಕ್ಲಿಂಗ್ ನಡೆಯಿತು.

ಅಂತರಾಷ್ಟ್ರೀಯ ಸೈಕ್ಲಿಸ್ಟ್ ಗಳು ಪಾಲ್ಗೊಂಡಿದ್ದರು
ಅಂತರಾಷ್ಟ್ರೀಯ ಸೈಕ್ಲಿಸ್ಟ್ ಗಳಾದ ಜಮಖಂಡಿ ತಾಲ್ಲೂಕಿನ ಮೇಘಾ ಗೂಗಾಡ, ಜಮಖಂಡಿಯ ರಾಜು ಬಾಟಿ, ಬೆಂಗಳೂರಿನ ನವೀನ್ ಜಾನ್ ಸೇರಿದಂತೆ ಅನೇಕ ಅಂತಾರಾಷ್ಟ್ರೀಯ ಕ್ರೀಡಾಪಟುಗಳು ಸ್ಪರ್ಧೆಯಲ್ಲಿ ಭಾಗಿಯಾಗಿದ್ದರು. ವ್ಯಯಕ್ತಿಕ ಟೈಮ್ ಟ್ರಯಲ್, ಪಂದ್ಯ ಟೈಮ್ ಟ್ರಯಲ್, ಮಾಸ್ ಸ್ಟಾರ್ಟ್, ಕ್ರಿಟೇರಿಯಮ್ ರೇಸ್ ಎಂದು 4 ವಿಭಾಗಗಳಲ್ಲಿ ಸ್ಪರ್ಧೆಗಳು ನಡೆದವು.

ಜನರ ಮೆಚ್ಚುಗೆಗ ಕಾರಣವಾದ ಸ್ಪರ್ಧೆ
ಕಾಮನ್ ವೆಲ್ತ್, ಏಷ್ಯನ್ ಗೇಮ್ಸ್ ನಲ್ಲಿ ಭಾಗಿಯಾದ ಜಮಖಂಡಿ ತಾಲೂಕಿನ ಕುಲ್ಲಳ್ಳಿ ಗ್ರಾಮದ ಮೇಘಾ, ಅಂತಾರಾಷ್ಟ್ರೀಯ ಕ್ರೀಡಾಪಟು ನವೀನ್ ಜಾನ್, ಸೈಕ್ಲಿಂಗ್ ಸ್ಪರ್ಧೆ ಆಯೋಜನೆ ಮಾಡಿದ್ದಕ್ಕೆ ಹರ್ಷ ವ್ಯಕ್ತಪಡಿಸಿದರು. ಇನ್ನು ಸೈಕ್ಲಿಂಗ್ ಸ್ಪರ್ಧೆ ನೋಡಲು ಅಪಾರ ಜನಸ್ತೋಮವೂ ಸೇರಿತ್ತು. ನಾಲ್ಕು ದಿನಗಳ ಕಾಲ ನಡೆದ ಸ್ಪರ್ಧೆ ನೋಡಲು ವಿವಿಧ ರಾಜ್ಯಗಳಿಂದ ಮತ್ತು ಹಲವು ಜಿಲ್ಲೆಗಳಿಂದ ಸೈಕ್ಲಿಂಗ್ ಕ್ರೀಡಾಭಿಮಾನಿಗಳು ಆಗಮಿಸಿದ್ದರು.












Click it and Unblock the Notifications