ಬಾಗಲಕೋಟೆಯಲ್ಲಿ ಪ್ರವಾಹ : 785 ಕುಟುಂಬ ಸ್ಥಳಾಂತರ
ಬಾಗಲಕೋಟೆ, ಆಗಸ್ಟ್ 07 : ಬಾಗಲಕೋಟೆ ಜಿಲ್ಲೆಯ ಜಮಖಂಡಿ ಮತ್ತು ಮುಧೋಳ ತಾಲೂಕಿನ 785 ಕುಟುಂಬಗಳು ಪ್ರವಾಹದಿಂದಾಗಿ ಸಂಕಷ್ಟಕ್ಕೆ ಸಿಲುಕಿವೆ. ಪ್ರವಾಹ ಪರಿಸ್ಥಿತಿಯಿಂದ ತೊಂದರೆಗೀಡಾದ ಕುಟುಂಬಗಳಿಗಾಗಿ 19 ಪರಿಹಾರ ಕೇಂದ್ರಗಳನ್ನು ತೆರಯಲಾಗಿದೆ.
ಜಿಲ್ಲಾಧಿಕಾರಿ ಆರ್. ರಾಮಚಂದ್ರನ್ ಈ ಕುರಿತು ಮಾಹಿತಿ ನೀಡಿದರು. "ಕೃಷ್ಣೆಯ ಪ್ರವಾಹದಿಂದ ಜಿಲ್ಲೆಯ ಜಮಖಂಡಿ ಹಾಗೂ ಘಟಪ್ರಭಾ ಪ್ರವಾಹದಿಂದ ಮುಧೋಳ ತಾಲೂಕಿನ ಒಟ್ಟು 785 ಕುಟುಂಬಗಳ 3,461 ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ" ಎಂದರು.
ಪ್ರವಾಹ ಪರಿಸ್ಥಿತಿಯಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಜನರಿಗಾಗಿ ಒಟ್ಟು 19 ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದೆ. ಜಮಖಂಡಿಯಲ್ಲಿ 13 ಹಾಗೂ ಮುಧೋಳದಲ್ಲಿ 6 ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಪರಿಹಾರ ಕೇಂದ್ರದಲ್ಲಿ ಒಟ್ಟು 1494 ಕುಟುಂಬಗಳಿಗೆ ಪರಿಹಾರ ಒದಗಿಸಲಾಗುತ್ತಿದೆ.

ಪ್ರವಾಹ ಪರಿಸ್ಥಿತಿಯಿಂದ ಇಲ್ಲಿಯವರೆಗೆ 5 ಜಾನುವಾರುಗಳು ಸಾವನ್ನಪ್ಪಿವೆ. ಒಟ್ಟು 1,34,000 ರೂ.ಗಳ ಪರಿಹಾರಧನ ವಿತರಿಸಲಾಗಿದೆ. ಪ್ರವಾಹ ಪೀಡಿತ ಗ್ರಾಮಗಳಲ್ಲಿ ಆರೋಗ್ಯ ಇಲಾಖೆಯಿಂದಲೂ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ.
ಜಮಖಂಡಿ ತಾಲೂಕಿನಲ್ಲಿ 27, ಮುಧೋಳದ ತಾಲೂಕಿನಲ್ಲಿ 13 ಹಾಗೂ ಹುನಗುಂದ ತಾಲೂಕಿನಲ್ಲಿ 18 ಸೇರಿ ಒಟ್ಟು 58 ತುರ್ತು ಚಿಕಿತ್ಸಾಕೇಂದ್ರ ತೆರೆಯಲಾಗಿದೆ. ಬಾದಾಮಿ ತಾಲೂಕಿನಲ್ಲಿ ಅಂದಾಜು 40 ಗ್ರಾಮಗಳು ಪ್ರವಾಹ ಪರಿಸ್ಥಿತಿ ಭೀತಿಯಲ್ಲಿದ್ದು, ತುರ್ತು ಪರಿಸ್ಥಿತಿ ನಿಭಾಯಿಸಲು ಆರೋಗ್ಯ ತಂಡ ರಚಿಸಲಾಗಿದೆ.

ನವಿಲುತೀರ್ಥ ಜಲಾಶಯದಿಂದ ಅಂದಾಜು 45 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಿದ್ದು, ಬಾದಾಮಿ ತಾಲೂಕಿನ ಮಲಪ್ರಭಾ ನದಿಯ ದಡದಲ್ಲಿರುವ 27 ಗ್ರಾಮಗಳು ಹಾಗೂ ಹುನಗುಂದ ತಾಲೂಕಿನ 7 ಗ್ರಾಮಗಳು ಪ್ರವಾಹಕ್ಕೆ ಒಳಪಡಲಿವೆ.
ತಕ್ಷಣವೇ ನದಿ ದಡದಲ್ಲಿ ವಾಸಿಸುತ್ತಿರುವ ಜನರು ಜಾನುವಾರುಗಳೊಂದಿಗೆ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಜಿಲ್ಲಾಧಿಕಾರಿ ಆರ್.ರಾಮಚಂದ್ರನ್ ಮನವಿ ಮಾಡಿದ್ದಾರೆ.












Click it and Unblock the Notifications