ಬಾಗಲಕೋಟೆ; ಪೊಲೀಸರಿಗೆ ಸಿಕ್ಕಿಬಿದ್ದ ನಕಲಿ ಎಸಿಬಿ ಅಧಿಕಾರಿಗಳು
ಬಾಗಲಕೋಟೆ, ಮೇ30: ಅವರಿಬ್ಬರು ಕಿಲಾಡಿ ಖದೀಮರು. ಒಬ್ಬ ಉತ್ತರ, ಇನ್ನೊಬ್ಬ ದಕ್ಷಿಣ. ಅಧಿಕಾರವೇ ಇಲ್ಲದ ಅವರಿಬ್ಬರೂ ರಾಜ್ಯದ ಅಧಿಕಾರಿಗಳ ಚಳಿ ಬಿಡಿಸುತ್ತಿದ್ದರು. ನಾವು ಎಸಿಬಿಯವರು, ಲೋಕಾಯುಕ್ತದವರು ಎಂದು ಕರೆ ಮಾಡಿ, ದೊಡ್ಡ ದೊಡ್ಡ ಅಧಿಕಾರಿಗಳಿಗೆ ಬೆದರಿಸುತ್ತಿದ್ದರು. ಹೀಗೆ ಕರೆ ಮಾಡುತ್ತಿದ್ದ ನಕಲಿ ಅಧಿಕಾರಿಗಳು ಈಗ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.
ಬಾಗಲಕೋಟೆ ನವನಗರದಲ್ಲಿರುವ ಎಪಿಎಮ್ಸಿ ಆವರಣದಲ್ಲಿ ಪೊಲೀಸ್ ಜೀಪಿನಿಂದ ಕೆಳಗಿಳಿದು ಠಾಣೆ ಒಳ ಹೋಗುತ್ತಿರುವ ಇವರ ಹೆಸರು ಮುರುಗೇಶ ಕುಂಬಾರ ಮತ್ತು ರಜನಿಕಾಂತ್. ಕಳೆದ ಕೆಲ ವರ್ಷಗಳಿಂದ ಈ ಇಬ್ಬರು ರಾಜ್ಯದ ದೊಡ್ಡ ದೊಡ್ಡ ಅಧಿಕಾರಗಳ ನಿದ್ದೆಗೆಡಿಸಿದ್ದವರು. ಬೆದರಿಕೆ ಕರೆ ಸ್ವೀಕರಿಸಿದ್ದ ಬಾಗಲಕೋಟೆ ಪಂಚಾಯತ ಇಂಜಿನಿಯರಿಂಗ್ ಉಪ ವಿಭಾಗದ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ ಈಶ್ವರ ಕುರುಬಗಟ್ಟಿ, ಬಾಗಲಕೋಟೆ ಪೊಲೀಸರ ಕಾರ್ಯ ಶ್ಲಾಘಿಸಿದ್ದಾರೆ.
ನಾವು ಎಸಿಬಿಯವರು, ನಾವು ಲೋಕಾಯುಕ್ತದವರು ಎಂದು ಕರೆ ಮಾಡಿ, ನಿಮ್ಮ ಮೇಲೆ ಭ್ರಷ್ಟಾಚಾರ ಆರೋಪ ಇದೆ ಎನ್ನುತ್ತಲೇ ಅಧಿಕಾರಿಗಳಿಂದ ಹಣ ಪಡೆಯುವ ಯತ್ನ ನಡೆಸುತ್ತಿದ್ದರು. ಲಂಚ ಪಡೆದು ಭಯದಲ್ಲಿದ್ದ ಅಧಿಕಾರಿಗಳು ಈ ನಕಲಿ ಎಸಿಬಿಯವರಿಗೆ ಬಕ್ಸಿಸ್ ಕೊಟ್ಟಿದ್ದಿರಬಹುದು.

ಆದರೆ ಆ ರೀತಿ ಹಣ ಕಳೆದುಕೊಂಡ ಅಧಿಕಾರಿಗಳಾರು ಇವರೆಗೂ ದೂರು ನೀಡಿಲ್ಲ. ಹೀಗಾಗಿ ರಾಜ್ಯದ ಬೇರೆ ಬೇರೆ ಜಿಲ್ಲೆಯ ವಿವಿಧ ಇಲಾಖೆಗಳ ಅಧಿಕಾರಿಗಳಿಂದ ಅದೆಷ್ಟು ದುಡ್ಡು ಪಡೆದಿದ್ದಾರೋ ಗೊತ್ತಿಲ್ಲ.ಇದೀಗ ಈ ಕಿಲಾಡಿ ನಕಲಿ ಎಸಿಬಿ ಅಧಿಕಾರಿಗಳ ಹೆಡೆಮುರಿ ಕಟ್ಟುವಲ್ಲಿ ಬಾಗಲಕೋಟೆ ಪೊಲೀಸರು ಯಶಸ್ವಿಯಾಗಿದ್ದಾರೆ.
ನವನಗರದ ಸಿಇಎನ್ ಠಾಣೆಯ ಸಿಪಿಐ ವಿಜಯ್ ಮುರುಗುಂಡಿ ನೇತೃತ್ವದಲ್ಲಿ ಆರೋಪಿಗಳ ಪತ್ತೆಗೆ ತಂಡ ರಚಿಸಲಾಗಿತ್ತು. ತಿಂಗಳುಗಳಿಂದ ಹುಟುಕಾಟದಲ್ಲಿದ್ದ ಪೊಲೀಸರಿಗೆ ಈ ಗಿರಾಕಿಗಳು ಹಾಸನದಲ್ಲಿ ಬಲೆಗೆ ಬಿದ್ದಿದ್ದಾರೆ.

30ಕ್ಕೂ ಹೆಚ್ಚು ಸಿಮ್ ಕಾರ್ಡ್ ಬಳಕೆ; ಬಂಧಿತ ಆರೋಪಿತರು ಕೆಲ ವರ್ಷಗಳಿಂದ ನಕಲಿ ಎಸಿಬಿಯಂತಹ ದೃಷ್ಕೃತ್ಯದಲ್ಲಿ ಭಾಗಿಯಾಗಿದ್ದರು. ರಾಜ್ಯದ ಬೇರೆ ಬೇರೆ ಜಿಲ್ಲೆಗಳ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ, ಎಸಿಬಿ & ಲೋಕಾಯುಕ್ತ ಅಧಿಕಾರಿಗಳ ಹೆಸರು ಹೇಳಿ ಬೆದರಿಕೆ ಹಾಕಿ ಹಣ ವಸೂಲಿ ಮಾಡುತ್ತಿದ್ದರು ಎಂಬುದು ಸಾಬೀತಾಗಿದೆ.
ಇನ್ನು ಈ ಕೃತ್ಯಕ್ಕಾಗಿ ಆರೋಪಿತರು ಸುಮಾರು 30ಕ್ಕೂ ಹೆಚ್ಚು ಸಿಮ್ ಕಾರ್ಡ್ ಬಳಸಿಕೊಂಡಿದ್ದರಂತೆ. ಅಲ್ಲದೇ ಈ ಪ್ರಕರಣದ ಪ್ರಮುಖ ಕಿಂಗ್ಪಿನ್, ಬೆಳಗಾವಿ ಮೂಲದ ಮುರುಗೇಶ ಕುಂಬಾರ್, ಈ ಹಿಂದೆ ಎರಡು ವರ್ಷ ಕಾಲ ಬೆಳಗಾವಿಯ ಲೋಕಾಯುಕ್ತ ಇಲಾಖೆಯಲ್ಲಿ ಪೇದೆಯಾಗಿ ಕಾರ್ಯ ನಿರ್ವಹಸಿದ್ದರಂತೆ. ಇತನಿಗೆ ಸಹಾಯಕನಾಗಿ ರಜನಿಕಾಂತ ಕೆಲಸ ಮಾಡುತ್ತಿದ್ದನಂತೆ. ಇದೀಗ ಹಾಸನ ಪೊಲೀಸರ ಸಹಾಯದಿಂದ ಆರೋಪಿಗಳನ್ನು ಬಂಧಿಸುವಲ್ಲಿ, ಬಾಗಲಕೋಟೆ ಸಿಇಎನ್ ಪೊಲೀಸರು ಸಕ್ಸಸ್ ಆಗಿದ್ದು, ಹೆಚ್ಚಿನ ವಿಚಾರಣೆ ನಡೆಸಿದ್ದಾರೆ.












Click it and Unblock the Notifications