ರಾಹು-ಕೇತು ಎಂದಿದ್ದ ಈಶ್ವರಪ್ಪಗೆ ತಲೆ ಸರಿ ಇಲ್ಲ ಎಂದ ಪರಮೇಶ್ವರ
ಜಮಖಂಡಿ, ಅಕ್ಟೋಬರ್ 31: ನಾನು ರಾಹು ಅಲ್ಲ, ನನ್ನ ತಂದೆ ತಾಯಿ ಪರಮೇಶ್ವರ್ ಎಂದು ನಾಮಕರಣ ಮಾಡಿದ್ದಾರೆ ಎಂದು ಉಪಮುಖ್ಯಮಂತ್ರಿ ಡಾ. ಜಿ ಪರಮೇಶ್ವರ ಈಶ್ವರಪ್ಪ ಅವರಿಗೆ ತಿರುಗೇಟು ನೀಡಿದರು.
ಜಮಖಂಡಿ ಪ್ರದೇಶ ಕಾಂಗ್ರೆಸ್ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಮಾಜಿ ಪ್ರಧಾನಿ ಇಂದಿರಾಗಾಂಧಿ ಪುಣ್ಯತಿಥಿ ಹಾಗೂ ಸರ್ದಾರ್ ವಲ್ಲಭಬಾಯ್ ಪಟೇಲರ ಜನ್ಮದಿನ ಹಿನ್ನೆಲೆಯಲ್ಲಿ ಇಂಧಿರಾಗಾಂಧಿ ಹಾಗೂ ಸರ್ದಾರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಬಳಿಕ ಮಾತನಾಡಿದರು.
ಈಶ್ವರಪ್ಪ ಅವರಿಗೆ ತಲೆ ಸರಿ ಇಲ್ಲದೇ ಬಾಯಿಗೆ ಬಂದ ಹಾಗೆ ಹೇಳಿಕೆ ನೀಡುತ್ತಿದ್ದಾರೆ, ಈಶ್ವರಪ್ಪ ಅವರ ಬಾಯಿ ಸರಿ ಇಲ್ಲ, ಬಾಯಿಗೆ ಬಂದ ಹಾಗೆ ಮಾತನಾಡುತ್ತಾರೆ. ಅವರು ನನ್ನನ್ನು ರಾಹು ಎಂದಿದ್ದಾರೆ. ನಾನೇನು ರಾಹು ಅಲ್ಲ. ನನ್ನ ತಂದೆ ತಾಯಿ ಪರಮೇಶ್ವರ ಎಂದು ನಾಮಕರಣ ಮಾಡಿದ್ದಾರೆ ಅವರಂತೆ ನಾನು ಬಾಯಿಗೆ ಬಂದಂತೆ ಮಾತನಾಡುವುದಿಲ್ಲ ಎಂದು ಟಾಂಗ್ ನೀಡಿದರು.

ಈ ಚುನಾವಣೆ ಬಳಿಕ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂಬುದು ಜಗದೀಶ್ ಶೆಟ್ಟರ್ ಅವರ ಕನಸು. ಕನಸಿಗೆ ಮಿತಿ ಇಲ್ಲ. ಹೀಗಾಗಿ ಅವರಿಷ್ಟದಂತೆ ಕನಸು ಕಾಣುತ್ತಿದ್ದಾರೆ. ಸಮ್ಮಿಶ್ರ ಸರ್ಕಾರ ಎಂದಿಗೂ ಪತನವಾಗುವುದಿಲ್ಲ. ಐದು ವರ್ಷ ಅವಧಿ ಪೂರ್ಣಗೊಳಿಸಲಿದೆ. ಯಾವುದೇ ಸ್ವಾಮೀಜಿಯ ಭವಿಷ್ಯವೂ ನಿಜವಾಗುವುದಿಲ್ಲ ಎಂದರು.
ಜಮಖಂಡಿಯಲ್ಲಿ ಬಿಜೆಪಿ ಗೆದ್ದರೂ 105 ಮಾತ್ರ ಆಗಲಿದೆ, ಹೀಗಿರುವಾಗ ಹೇಗೆ ಸರಕಾರ ರಚಿಸಿಬಿಡುತ್ತಾರೆ? ಶೆಟ್ಟರ್ ಅವರೇ ಆಪರೇಷನ್ ಕಮಲ ಮಾಡುವ ಗುಟ್ಟನ್ನು ಬಹಿರಂಗ ಪಡಿಸಿದ್ದಾರೆ ಎಂದು ಹೇಳಿದರು.
ಸಮ್ಮಿಶ್ರ ಸರ್ಕಾರ ಸುಭದ್ರವಾಗಿರುವ ಜೊತೆಗೆ ಈ ಚುನಾವಣೆ ಬಳಿಕ ಸಚಿವ ಸಂಪುಟ ಹಾಗೂ ನಿಗಮ ಮಂಡಳಿ ಅಧ್ಯಕ್ಷರ ನೇಮಕ ಮಾಡಲಾಗುವುದು ಎಂದರು. ಚುನಾವಣೆ ಪ್ರಚಾರದ ಭರದಲ್ಲಿ ಯಾರೂ ಕೂಡ ವೈಯಕ್ತಿಕ ನಿಂದನೆ ಮಾಡಬಾರದು. ಸಾರ್ವಜನಿಕ ಬದುಕಿನಲ್ಲಿರಿವವರು ರಾಜಕೀಯವಾಗಿ ಅಷ್ಟೇ ಟೀಕೆ ಮಾಡವೇಕು, ಅಭಿವೃದ್ಧಿ ವಿಚಾರ ಮುಂದಿಟ್ಟು ಪ್ರಚಾರ ಮಾಡಬೇಕೇ ವಿನಃ ವೈಯಕ್ತಿಕ ವಿಚಾರ ಅಲ್ಲ ಎಂದು ಹೇಳಿದರು.
ಇದಕ್ಕೂ ಮುನ್ನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಳೆದ ಕೆಲ ದಿನಗಳಿಂದ ಸಾಕಷ್ಟು ಪ್ರಚಾರ ನಡೆಸಿದ್ದು, ಕಾಂಗ್ರೆಸ್ ಪಕ್ಷವೇ ಗೆಲ್ಲಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ಸಿದ್ದುನ್ಯಾಮಗೌಡ ನಿಧನ ಬಳಿಕ, ಇದೇ ಕುಟುಂಬದ ಯಾರೇ ಸ್ಪರ್ಧಿಸಿದರೂ ಚುನಾವಣೆಗೆ ನಿಲ್ಲುವುದಿಲ್ಲ ಎಂದು ಹೇಳಿದ್ದ ಬಿಜೆಪಿಯ ಕುಲಕರ್ಣಿ ಈಗ ಸ್ಪರ್ಧಿಸುವ ಮೂಲಕ ವಚನ ಭ್ರಷ್ಟರಾಗಿದ್ದಾರೆ.ಈ ಎಲ್ಲವನ್ನು ಜನರು ಗಮನಿಸುತ್ತಿದ್ದಾರೆ ಎಂದರು.
ಉತ್ತರ ಕರ್ನಾಟಕ ಭಾಗದ ಕೆಲ ಜಿಲ್ಲೆಗಳು ಬರಪೀಡಿತ ಜಿಲ್ಲೆ ಎಂದು ಘೋಷಿಸಿ, ಪರಿಹಾರಕ್ಕೆ ಕೇಂದ್ರದ ಮೊರೆ ಹೋದರೂ, ಕೇಂದ್ರ ಸರಕಾರ ನಯಾಪೈಸೆ ನೆರವು ನೀಡದೇ ಮಲತಾಯಿ ಧೋರಣೆ ಅನುಸರಿಸಿದೆ ಎಂದು ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರು.












Click it and Unblock the Notifications