ಪೊಲೀಸರ ರಕ್ಷಣೆ ಕೋರಿದ ಬಾಗಲಕೋಟೆಯ ಪ್ರೇಮಿಗಳು
ಬಾಗಲಕೋಟೆ, ಅಕ್ಟೋಬರ್ 20 : ಕೊರಳಲ್ಲಿ ತಾಳಿ, ಮುಖದಲ್ಲಿ ಮಂದಹಾಸ, ಕೈಯಲ್ಲೊಂದು ಮನವಿ ಪತ್ರ, ನನಗೆ ನೀನು ನಿನಗೆ ನಾನು ಎಂದು ಕೈ ಕೈ ಹಿಡಿದು ಪ್ರೇಮಿಗಳ ಪ್ರಯಾಣ. ಹೌದು ಪ್ರೀತಿ ಮಾಡಬಾರದು ಮಾಡಿದರೆ ಜಗಕೆ ಹೆದರಬಾರದು ಅಂತಾರೆ. ಆದರೆ, ಸಿನಿಮಾ ಹಾಡಿನಂತೆ ನಡೆದುಕೊಳ್ಳೋದು ಅಷ್ಟು ಸುಲಭನಾ? ಖಂಡಿತ ಇಲ್ಲ ಬಿಡಿ.
ಅಂದ ಹಾಗೆ ಇದು ಬಾಗಲಕೋಟೆ ಪ್ರೇಮಿಗಳ ಕಥೆ. ಸಾಬು ಗುಣದಾಳ ಮತ್ತು ಶೃತಿ ಬಿರಾದಾರ ಬಾಗಲಕೋಟೆ ಜಿಲ್ಲೆ ಜಮಖಂಡಿ ನಗರದ ನಿವಾಸಿಗಳು. ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದ ಇವರ ಪ್ರೇಮ ಇದೇ ಅಕ್ಟೋಬರ್ 16ರಂದು ಮದುವೆಯಲ್ಲಿ ಯಶಸ್ಸು ಕಂಡಿದೆ.
ಆದರೆ, ಪ್ರೀತಿ ತುಂಬಿದ ಈ ಪ್ರೇಮಿಗಳ ಎದೆಯಲ್ಲಿ ಈಗ ಭಯದ ಕಾರ್ಮೋಡ ಆವರಿಸಿದೆ. ಇದಕ್ಕೆ ಕಾರಣ ಇವರ ಅಂತರ್ಜಾತಿ ವಿವಾಹ. ಶೃತಿ ಮೇಲ್ಜಾತಿಗೆ ಸೇರಿದ ಹುಡುಗಿ ಇನ್ನು ಸಾಬು ದಲಿತ ಸಮುದಾಯಕ್ಕೆ ಸೇರಿದ ಯುವಕ. ಶೃತಿ ತಂದೆ ಜಮಖಂಡಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಎಎಸ್ಐ ಬೇರೆ.

ಪ್ರೇಮ ವಿವಾಹಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವ ಶೃತಿ ತಂದೆ ವರನ ಕುಟುಂಬದವರಿಗೆ ಜೀವ ಬೆದರಿಕೆ ಹಾಕುತ್ತಿದ್ದಾರೆ ಎಂದು ಪ್ರೇಮಿಗಳು ಆರೋಪಿಸಿದ್ದಾರೆ. ರಕ್ಷಣೆ ಕೋರಿ ಈ ಜೋಡಿ ಬಾಗಲಕೋಟೆ ಎಸ್ಪಿಯವರಿಗೆ ಮನವಿ ಮಾಡಿದೆ.
ಪ್ರೇಮ ಹುಟ್ಟಿದ್ದು ಹೇಗೆ? : ಶೃತಿ ಬಿಎಸ್ ಸಿ ಕಲಿಯುತ್ತಿರುವಾಗಲೇ ನಗರದಲ್ಲಿ ಫೈನಾನ್ಸ್ ಕಂಪನಿ ವ್ಯವಹಾರ ಮಾಡುತ್ತಿರುವ ಸಾಬುನ ಜೊತೆ ಪ್ರೇಮಾಂಕುರವಾಗಿತ್ತು. ಸಾಬು ಕೂಡ ಬಿಬಿಎ ಪದವೀಧರನಾಗಿದ್ದಾನೆ. ಇಬ್ಬರಲ್ಲೂ ಜಾತಿ ಭೇದ ಮೀರಿದ ಪ್ರೇಮ ಅರಳಿ ನಿಂತಿದೆ. ಆದರೆ, ಇವರ ಪ್ರೀತಿ ವಿಷಯ ತಿಳಿದ ಶೃತಿ ತಂದೆ ಬಸನಗೌಡ ಬಿರಾದಾರ ಪ್ರೀತಿಗೆ ವಿರೋಧ ವ್ಯಕ್ತಪಡಿಸಿದ್ದಾರೆ.
ಅನ್ಯ ಜಾತಿ ಹುಡುಗನನ್ನು ಮದುವೆಯಾಗೋದಕ್ಕೆ ಅವಕಾಶ ಕೊಟ್ಟಿಲ್ಲ. ಮೇಲಾಗಿ ಶೃತಿಯನ್ನು ತಮ್ಮದೇ ಸಮುದಾಯದ ಹುಡುಗನ ನೋಡಿ ಮದುವೆ ಮಾಡಲು ಮುಂದಾಗಿದ್ದಾರೆ. ಇದನ್ನರಿತ ಶೃತಿ ಮತ್ತು ಸಾಬು ಮನೆ ಬಿಟ್ಟು ಬಾಗಲಕೋಟೆ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಮದುವೆಯಾಗಿದ್ದಾರೆ. ಈಗ ಶೃತಿ ತಂದೆ ವರನ ಮನೆಯವರಿಗೆ ಜೀವ ಬೆದರಿಕೆ ಹಾಕುತ್ತಿದ್ದಾರಂತೆ ಜೊತೆಗೆ ಮಗಳಿಗೆ ಅವನನ್ನು ಬಿಟ್ಟು ಮನೆಗೆ ಬಾ ಎಂದು ಬೆದರಿಕೆ ಒಡ್ಡುತ್ತಿದ್ದಾರೆ. ಇದರಿಂದ ದಾರಿ ಕಾಣದ ಪ್ರೇಮಿಗಳು ಎಸ್ಪಿಗೆ ಮನವಿ ಸಲ್ಲಿಸಿದ್ದಾರೆ.
ಮನವಿ ಆಲಿಸಿದ ಎಸ್ ಪಿ ಸಿ.ಬಿ.ರಿಷ್ಯಂತ್, 'ಇಬ್ಬರು ವಯಸ್ಕರರು ಸ್ವಂತ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಹೊಂದಿದ್ದಾರೆ. ನೋಂದಣಿ ಕೂಡ ಆಗಿದ್ದು ಯಾವುದೇ ತೊಂದರೆಯಿಲ್ಲ. ಅವರ ಮನವಿಯಂತೆ ಸೂಕ್ತ ರಕ್ಷಣೆ ನೀಡುತ್ತೇವೆ' ಎಂದು ಭರವಸೆ ನೀಡಿದ್ದಾರೆ.












Click it and Unblock the Notifications