ಭಾರಿ ಮಳೆಯಿಂದ 322 ಕೋಟಿ ರೂಪಾಯಿ ಹಾನಿ; ಕಂಗಾಲಾದ ಬಾಗಲಕೋಟೆ ಜಿಲ್ಲೆಯ ರೈತ
ಬಾಗಲಕೋಟೆ, ಸೆಪ್ಟೆಂಬರ್, 15: ಬಾಗಲಕೋಟೆ ಜಿಲ್ಲೆಯಲ್ಲಿ ಭಾರಿ ಮಳೆ ಸುರಿದಿದ್ದು, ಅಲ್ಲಿರುವ ನದಿಗಳು ಉಕ್ಕಿ ಹರಿಯುತ್ತಿವೆ. ಪ್ರತಿವರ್ಷವೂ ಬಾಗಲಕೋಟೆ ಜಿಲ್ಲೆಯಲ್ಲಿ ಪ್ರವಾಹ ಉಂಟಾಗಿ ಬೆಳೆಗಳು ಜಾಲಾವೃತವಾಗುತ್ತಲೇ ಇವೆ. ಇದರಿಂದ ರೈತರು ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳುವಂತಾಗಿದೆ.
ಮಹಾರಾಷ್ಟ್ರ, ಬೆಳಗಾವಿಯಲ್ಲಿ ಭಾಗದಲ್ಲಿ ಹೆಚ್ಚಿನ ಮಳೆ ಸುರಿದಿದ್ದು, ಕೃಷ್ಣಾ, ಘಟಪ್ರಭಾ ಹಾಗೂ ಮಲಪ್ರಭಾ ನದಿಗಳು ತುಂಬಿ ಹರಿಯುತ್ತಿವೆ. ಆಗಸ್ಟ್ ತಿಂಗಳಿನಲ್ಲಿ ಸುರಿದ ಭಾರಿ ಮಳೆ ಹಾಗೂ ಪ್ರವಾಹಕ್ಕೆ ಸಿಲುಕಿ ಬಾಗಲಕೋಟೆ ಜಿಲ್ಲೆಯ ಜನರು ನಲುಗಿ ಹೋಗಿದ್ದಾರೆ. ಆದರೆ ಆಗಸ್ಟ್ ತಿಂಗಳಿನಲ್ಲಿ ಸಂಭವಿಸಿದ ಅತೀವೃಷ್ಠಿಯಿಂದ ರೈತರು ತತ್ತರಿಸಿ ಹೋಗಿದ್ದರು. ಚೇತರಿಸಿಕೊಳ್ಳಬೇಕು ಎನ್ನುವಷ್ಟರಲ್ಲಿ ಮತ್ತೆ ಇದೀಗ ಪ್ರವಾಹ ಆಗಿದ್ದು, ಜನರು ಹೈರಾಣಾಗಿದ್ದಾರೆ. 15 ದಿನಗಳಲ್ಲಿ ಸುರಿದ ಮಳೆಯಿಂದಾಗಿ ಬರೋಬ್ಬರಿ 322 ಕೋಟಿ ರೂಪಾಯಿಗೂ ಅಧಿಕ ಹಾನಿ ಆಗಿರುವ ವರದಿ ಆಗಿದೆ.
ಭಾರಿ ಮಳೆಯಿಂದ ಧರೆಗುರುಳಿದ ಮನೆಗಳು
ಮನೆಗಳು ಧರೆಗುರುಳಿರುವುದರಿಂದ ಜಿಲ್ಲೆಯ ನೂರಾರು ಕುಟುಂಬಗಳು ಬೀದಿಗೆ ಬಂದಿವೆ. ಕೆಲವರು ಬಿದ್ದ ಮನೆಯೊಂದರ ಮೂಲೆಯಲ್ಲಿಯೇ ಇದ್ದರೆ, ಇನ್ನೂ ಕೆಲವರು ಬಾಡಿಗೆ ಮನೆಗಳ ಮೊರೆ ಹೋಗಿದ್ದಾರೆ. ಈ ವರ್ಷ ಇಲ್ಲಿಯವರೆಗೆ ಜಿಲ್ಲೆಯಲ್ಲಿ ವಾಡಿಕೆ ಪ್ರಕಾರ 34.5 ಸೆ.ಮೀಟರ್ನಷ್ಟು ಮಳೆ ಆಗಬೇಕಿತ್ತು. ವಾಸ್ತವವಾಗಿ 61.1 ಸೆ.ಮೀಟರ್ನಷ್ಟು ಮಳೆ ಆಗಿದ್ದು, ಶೇಕಡಾ 77ರಷ್ಟು ಹೆಚ್ಚಾಗಿದೆ. 43,318 ಹೆಕ್ಟೇರ್ನಲ್ಲಿ ಬೆಳೆದಿದ್ದ ಉದ್ದು, ಸೂರ್ಯಕಾಂತಿ, ಹೆಸರು, ಸೋಯಾಬಿನ್, ಶೇಂಗಾ, ಸಜ್ಜಿ, ಮೆಕ್ಕೆಜೋಳ ಸೇರಿದಂತೆ ಇನ್ನಿತರ ಬೆಳೆಗಳು ಜಲಾವೃತವಾಗಿವೆ.

ಸೂಕ್ತ ಪರಿಹಾರ ನೀಡುವಂತೆ ಅಗ್ರಹ
ಹೆಸ್ಕಾಂನ 1,214 ಕಂಬ, 146 ವಿದ್ಯುತ್ ಪರಿವರ್ತಕಗಳು ಹಾಗೂ 28 ಕಿಲೋ ಮೀಟರ್ ವಿದ್ಯುತ್ ಮಾರ್ಗ ಹಾಳಾಗಿದೆ. ಇದರಿಂದಾಗಿ ಹಲವಾರು ಗ್ರಾಮಗಳಲ್ಲಿ ವಿದ್ಯುತ್ ಇಲ್ಲದೆ ಜೀವನ ಕಳೆಯಬೇಕಾದ ಪರಿಸ್ಥಿತಿ ನಿರ್ಮಾಣ ಆಗಿದೆ. ಜಿಲ್ಲೆಯಲ್ಲಿ 831 ಮನೆಗಳು ಕುಸಿದಿವೆ. ಪ್ರತಿ ನಿತ್ಯ ಮನೆಗಳು ಕುಸಿಯುತ್ತಿರುವುದು ವರದಿ ಆಗುತ್ತಲೇ ಇದೆ. ಪ್ರವಾಹದಿಂದಾಗಿ ಜಿಲ್ಲೆಯ 200ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿ, ಮನೆಗಳಲ್ಲಿದ್ದ ಸಾಮಗ್ರಿಗಳು ಜಲಾವೃತವಾಗಿವೆ. ಲಕ್ಷಾಂತರ ರೂಪಾಯಿ ಹಾಕಿ ಬೆಳೆಗಳನ್ನು ಬೆಳೆದಿದ್ದ ರೈತರು ಆತಂಕ್ಕೆ ಒಳಗಾಗಿದ್ದು, ಸರ್ಕಾರ ನಮಗೆ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.












Click it and Unblock the Notifications