ಭಾವುಕ ಕ್ಷಣಗಳು, ಜಯಘೋಷದ ಮಧ್ಯೆ ಭಾರತಕ್ಕೆ ವಾಪಸ್ ಆದ ಅಭಿನಂದನ್
ವಾಘಾ, ಮಾರ್ಚ್ 1: ಜಯಘೋಷ, ಸಂಭ್ರಮ, ಕಣ್ಣೀರು, ಹೆಮ್ಮೆ ಹೀಗೆ ನಾನಾ ಭಾವನೆಗಳ ಮಧ್ಯೆ ಭಾರತೀಯ ವಾಯು ಸೇನೆಯ ವಿಂಗ್ ಕಮ್ಯಾಂಡರ್ ಅಭಿನಂದನ್ ವರ್ತಮಾನ್ ಅಟ್ಟಾರಿ ಗಡಿಯ ಮೂಲಕ ಶುಕ್ರವಾರ ಪಾಕಿಸ್ತಾನದಿಂದ ಭಾರತಕ್ಕೆ ವಾಪಸ್ ಆಗಿದ್ದಾರೆ. ಭಾರತಕ್ಕೆ ಅಭಿನಂದನ್ ಅವರನ್ನು ಹಸ್ತಾಂತರಿಸುವ ಮುನ್ನ ವಿವಿಧ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲಾಯಿತು.
ಮಧ್ಯಾಹ್ನ ಮೂರೂ ಮೂವತ್ತರ ಹೊತ್ತಿಗೆ ಅಭಿನಂದನ್ ವಾಪಸ್ ಬರಬಹುದು ಎಂಬ ಅಂದಾಜಿತ್ತು. ಆದರೆ ಅಂದುಕೊಂಡಿದ್ದಕ್ಕಿಂತ ಬಹಳ ಸಮಯ ಹಿಡಿದಿತ್ತು. ಅಭಿನಂದನ್ ರ ಪೋಷಕರು, ಸೇನೆಯ ಹಿರಿಯ ಅಧಿಕಾರಿಗಳು, ಪಂಜಾಬ್ ನ ಸಚಿವರು, ಅಪಾರ ಸಂಖ್ಯೆಯಲ್ಲಿ ಸಾರ್ವಜನಿಕರು ಹಾಜರಿದ್ದರು.
ಶತ್ರು ದೇಶದಿಂದ ವಾಪಸ್ ಬಂದ ಅಭಿಯನ್ನು ಎಂಥ ಪರೀಕ್ಷೆಗೆ ಒಳಪಡಿಸಲಾಗುತ್ತದೆ?
ಭಾರತದ ವಿಮಾನವೊಂದು ಪತನವಾಗಿ, ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಅಭಿನಂದನ್ ಪಾಕ್ ಸೇನೆಗೆ ಸಿಕ್ಕಿಬಿದ್ದಿದ್ದರು. ಎರಡೂ ದೇಶಗಳ ಮಧ್ಯೆ ಉದ್ವಿಗ್ನ ಸ್ಥಿತಿ ಇರುವ ಸನ್ನಿವೇಶದಲ್ಲಿ ಏನಾಗಬಹುದು ಎಂಬ ಆತಂಕ ಇತ್ತು. ಆದರೆ ಶಾಂತಿಯ ದ್ಯೋತಕವಾಗಿ ನಾವು ಅಭಿನಂದನ್ ರನ್ನು ಬಿಡುಗಡೆ ಮಾಡುವುದಾಗಿ ಇಮ್ರಾನ್ ಖಾನ್ ಘೋಷಣೆ ಮಾಡಿದ್ದರು.
ಆದರೆ, ಇದು ಭಾರತದ ರಾಜತಾಂತ್ರಿಕ ಯಶಸ್ಸು. ಜತೆಗೆ ಪಾಕಿಸ್ತಾನವು ಜಿನೀವಾ ಒಪ್ಪಂದವನ್ನು ಉಲ್ಲಂಘಿಸಿ, ವಾಯುಪಡೆಯ ಸೇನಾಧಿಕಾರಿ ವಿಡಿಯೋ ಹಾಗೂ ಫೋಟೋವನ್ನು ಎಲ್ಲೆಡೆ ಪ್ರಸಾರ ಮಾಡಿತ್ತು. ಈ ಬಗ್ಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿತ್ತು.