ಆಂಧ್ರ ರಾಜಧಾನಿ ಅಮರಾವತಿ ಬದಲಿಗೆ ಬೇರೆಡೆ ಸ್ಥಳ ಹುಡುಕಲಿದ್ದಾರಾ ಜಗನ್?
ಅಮರಾವತಿ, ಆಗಸ್ಟ್ 21: ಆಂಧ್ರಪ್ರದೇಶದ ರಾಜಧಾನಿ ಎಂದು 'ಅಮರಾವತಿ'ಗೆ ಎಷ್ಟೆಲ್ಲ ಅಕ್ಕರೆ ತೋರಿದ್ದರು ಚಂದ್ರಬಾಬು ನಾಯ್ಡು ಎಂಬುದು ನಿಮಗೆ ನೆನಪಿದೆಯಾ? ಇದೀಗ ಜಗನ್ ಮೋಹನ್ ರೆಡ್ಡಿ ಆಂಧ್ರಪ್ರದೇಶದ ಮುಖ್ಯಮಂತ್ರಿ ಆಗಿದ್ದು, ಅವರ ಸಂಪುಟದ ಸಚಿವರೇ ಆದ ಬೋತ್ಸಾ ಸತ್ಯನಾರಾಯಣ ಅವರು ಮಂಗಳವಾರ ಮಾತನಾಡಿ, ರಾಜಧಾನಿ ಬದಲಾಗಬಹುದು ಎಂಬ ಸೂಚನೆ ನೀಡಿದ್ದಾರೆ.
ಈ ಬಗ್ಗೆ ಇನ್ನಷ್ಟು ವಿವರಗಳನ್ನು ಹಂಚಿಕೊಳ್ಳಲು ನಿರಾಕರಿಸಿದ ಅವರು, ಸದ್ಯದಲ್ಲೇ ಅಮರಾವತಿ ಭವಿಷ್ಯದ ವಿಚಾರವಾಗಿ ಘೋಷಣೆ ಮಾಡುವುದಾಗಿ ಹೇಳಿದ್ದಾರೆ.
"ಬೇರೆ ಪ್ರದೇಶಗಳಲ್ಲಿ ನಿರ್ಮಾಣದ ವೆಚ್ಚ ಒಂದು ಲಕ್ಷವಾದರೆ, ಅಮರಾವತಿಯಲ್ಲಿ ಎರಡು ಲಕ್ಷವಾಗುತ್ತದೆ. ಇದರಿಂದ ಸಾರ್ವಜನಿಕ ಹಣದ ಪೋಲಾಗುತ್ತದೆ. ಜತೆಗೆ ಅಲ್ಲಿ ಭಾರಿ ಮಳೆ ಆಗಲಿದ್ದು, ತಗ್ಗು ಪ್ರದೇಶ ಇದ್ದು, ಸದಾ ನೆರೆ ಪೀಡಿತ ಪ್ರದೇಶವಾಗಿದೆ. ಅಮರಾವತಿಯಲ್ಲಿ ಜನರ ರಕ್ಷಣೆಗಾಗಿ ಪ್ರತ್ಯೇಕ ಒಳಚರಂಡಿ ಅಥವಾ ಸಣ್ಣ ಅಣೆಕಟ್ಟೆ ನಿರ್ಮಿಸಬೇಕಾಗುತ್ತದೆ. ಈ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ಎಲ್ಲ ಅಂಶಗಳನ್ನು ಗಮನಿಸಿ, ನಮ್ಮ ನೀತಿಯನ್ನು ಸದ್ಯದಲ್ಲೇ ಘೋಷಿಸುತ್ತೇವೆ" ಎಂದಿದ್ದಾರೆ.

ಪ್ರಕಾಶಂ ಜಿಲ್ಲೆಯ ದೊನಕೊಂಡವನ್ನು ಅಮರಾವತಿ ಬದಲಿಗೆ ಆಯ್ಕೆ ಮಾಡಲಾಗುತ್ತದೆ ಎಂಬ ಮಾತು ಕೇಳಿಬರುತ್ತಿರುವ ಬಗ್ಗೆ ಪ್ರಶ್ನೆ ಮಾಡಿದಾಗ, ದೊನಕೊಂಡ ಅಥವಾ ಅನಕೊಂಡವನ್ನು ರಾಜಧಾನಿಯಾಗಿ ಆಯ್ಕೆ ಮಾಡಲಾಗುತ್ತದೆ ಎಂಬ ಹೇಳಿಕೆಗಳನ್ನು ನೀಡುವುದು ಸರಿಯಲ್ಲ. ಸೂಕ್ತ ರಾಜಧಾನಿ ಯಾವುದು ಎಂದು ಕೇಳಲಾಗಿದ್ದು, ಶಿವರಾಮಕೃಷ್ಣನ್ ಸಮಿತಿಯನ್ನು ರಚಿಸಲಾಗಿದೆ. ಆ ಸಮಿತಿಯು ವರದಿ ನೀಡಲಿದೆ ಎಂದು ಸಚಿವರು ಹೇಳಿದ್ದಾರೆ.
ಈಗಿನ ಪರಿಸ್ಥಿತಿಯನ್ನು ಮುಂಚಿನ ತಿಳಿಸಲಾಗಿತ್ತು. ಸರಕಾರದಿಂದ ಅವಲೋಕನ ನಡೆಯುತ್ತಿದೆ. ಆದರೆ ಅಮರಾವತಿಗೆ ಪರ್ಯಾಯವಾಗಿ ಯಾವುದೇ ಸ್ಥಳವನ್ನು ನಾನು ಹೆಸರಿಲ್ಲ ಎಂದು ಸತ್ಯನಾರಾಯಣ ಹೇಳಿದ್ದಾರೆ.












Click it and Unblock the Notifications