ವೈಜಾಗ್ ಅನಿಲ ಸೋರಿಕೆ: ಎಲ್ ಜಿ ಪಾಲಿಮರ್ ಸಿಇಒ ಬಂಧನ
ವಿಶಾಖಪಟ್ಟಣಂ, ಜುಲೈ 8: ವಿಶಾಖಪಟ್ಟಣಂನ ಎಲ್ ಜಿ ಪಾಲಿಮಾರ್ ರಾಸಾಯನಿಕ ಸ್ಥಾವರದಿಂದ ವಿಷಾನಿಲ ಸೋರಿಕೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸ್ಥೆಯ ಸಿಇಒ ಹಾಗೂ ಇನ್ನಿತರ ಉನ್ನತ ಅಧಿಕಾರಗಳನ್ನು ಆಂಧ್ರಪ್ರದೇಶ ಪೊಲೀಸರು ಬಂಧಿಸಿದ್ದಾರೆ.
ಮೇ 7ರಂದು ಎಲ್ ಜಿ ಪಾಲಿಮರ್ ಸಂಸ್ಥೆಯಿಂದ ಅನಿಲ ಸೋರಿಕೆ ಉಂಟಾಗಿ ಹನ್ನೆರಡು ಮಂದಿ, 34 ಜಾನುವಾರುಗಳು ಮೃತಪಟ್ಟು, 5000ಕ್ಕೂ ಹೆಚ್ಚು ಜನ ಅಸ್ವಸ್ಥರಾಗಿದ್ದರು. ವೈಜಾಗ್ ನ ಗೋಪಾಲಪಟ್ಟಣಂನಲ್ಲಿರುವ ಈ ಘಟಕವನ್ನು ಬಂದ್ ಮಾಡಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ ಜಿ ಪಾಲಿಮಾರ್ಸ್ ನ ಇಬ್ಬರು ಸಿಇಒಗಳಾದ ದಕ್ಷಿಣ ಕೊರಿಯಾದ ಸಂಕೀ ಜಿಯಾಂಗ್ ಎಂಡಿ, ಸಿಇಒ ಹಾಗೂ ತಾಂತ್ರಿಕ ನಿರ್ದೇಶಕ ಡಿಎಸ್ ಕಿಮ್ ಸೇರಿದಂತೆ 12 ಮಂದಿಯನ್ನು ಬಂಧಿಸಲಾಗಿದೆ. ಬಂಧಿತರ ಪೈಕಿ ಹೆಚ್ಚುವರಿ ನಿರ್ದೇಶಕ ಪಿಚ್ಚುಕಾ ಪಿಸಿ ಮೋಹನ್ ರಾವ್, ನೈಟ್ ಡ್ಯೂಟಿ ಅಧಿಕಾರಿ, ಇಂಜಿನಿಯರ್ಸ್, ಸೆಫ್ಟಿ ಅಧಿಕಾರಿ ಸೇರಿದ್ದಾರೆ.

ಈ ಎಲ್ಲಾ ಅಧಿಕಾರಿಗಳು ಈ ಅನಿಲ ಸೋರಿಕೆಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಕಾರಣಾರಾಗಿದ್ದಾರೆ. ಎಂ6 ಸ್ಟೈರಿನ್ ಶೇಖರಣಾ ಟ್ಯಾಂಕ್ ನಿಂದ ಅನಿಲ ಸೋರಿಕೆಯಾಗಲು ಈ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ, ಅನಿಲ ಸೋರಿಕೆಯಿಂದ ಸಾವು ಸಂಭವಿಸುವ ಬಗ್ಗೆ ಅಧಿಕಾರಿಗಳಿಗೆ ತಿಳಿದಿತ್ತು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಎಲ್ಲಾ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಕಳಿಸುವ ಸಾಧ್ಯತೆಯಿದೆ.
ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 304 II, 278, 284 ಹಾಕಲಾಗಿದೆ. ಆಂಧ್ರಪ್ರದೇಶದ ವಿಶೇಷ ಪ್ರಧಾನ ಕಾರ್ಯದರ್ಶಿ ನೀರಭ್ ಕುಮಾರ್ ಪ್ರಸಾದ್ ಅವರು 4000 ಪುಟಗಳ ವರದಿಯನ್ನು ಸಿಎಂ ಜಗನ್ ಮೋಹನ್ ರೆಡ್ಡಿ ಅವರಿಗೆ ಸಲ್ಲಿಸಿದ್ದರು. ಈ ವರದಿಯನ್ನು ಕೂಡಾ ತನಿಖೆಯಲ್ಲಿ ಪೊಲೀಸರು ಉಲ್ಲೇಖಿಸಿದ್ದಾರೆ.












Click it and Unblock the Notifications