ಅಮೆರಿಕದಲ್ಲಿ ಶ್ರೀನಿವಾಸ ಕಲ್ಯಾಣ ಆಯೋಜಿಸಲಿದೆ ಟಿಟಿಡಿ
ಅವರಾವತಿ, ಜೂ. 12: ವಿದೇಶಗಳಲ್ಲಿರುವ ತಿರುಪತಿ ವೆಂಕಟೇಶ್ವರನ ಭಕ್ತರಿಗೆ ಟಿಟಿಡಿ ಸಿಹಿಸುದ್ದಿ ನೀಡಿದೆ. ಕೋವಿಡ್ ಕಾರಣದಿಂದಾಗಿ ರದ್ದಾಗಿದ್ದ ಶ್ರೀನಿವಾಸ ಕಲ್ಯಾಣ ಉತ್ಸವವನ್ನು ಪುನಃ ಅಮೆರಿಕದಲ್ಲಿ ಆಯೋಜಿಸಲು ತೀರ್ಮಾನಿಸಲಾಗಿದೆ.
ಭಾರತದ ವಿವಿಧ ರಾಜ್ಯಗಳಲ್ಲಿ ಶ್ರೀನಿವಾಸ ಕಲ್ಯಾಣ ನಡೆಯುತ್ತದೆ. ಟಿಟಿಡಿ ಈ ಹಿಂದೆ ವಿದೇಶಗಳಲ್ಲಿ ಸಹ ಶ್ರೀ ವೆಂಕಟೇಶ್ವರ ದಂಪತಿಯ ಶ್ರೀನಿವಾಸ ಕಲ್ಯಾಣ ಕಾರ್ಯಕ್ರಮ ನಡೆಸುತ್ತಿತ್ತು.
ಆದರೆ ಕೊರೊನಾ ಸೋಂಕು ಕಾಣಿಸಿಕೊಂಡ ಬಳಿಕ ವಿದೇಶಗಳ ಕಾರ್ಯಕ್ರಮ ರದ್ದುಗೊಳಿಸಲಾಗಿತ್ತು. ಈಗ ಕೋವಿಡ್ ಪರಿಸ್ಥಿತಿ ಬಳಿಕ ತಿರುಪತಿಗೆ ವಿದೇಶಿ ಭಕ್ತರು ಆಗಮಿಸುವುದು ಬಹುತೇಕ ಕಡಿಮೆಯಾಗಿದೆ.

ಟಿಟಿಡಿ ಜೂ.18 ರಿಂದ ಜುಲೈ 9ರವರೆಗೆ ಅಮೆರಿಕದ 8 ನಗರಗಳಲ್ಲಿ ಶ್ರೀನಿವಾಸ ಕಲ್ಯಾಣ ಕಾರ್ಯಕ್ರಮ ಆಯೋಜನೆ ಮಾಡಲಿದೆ ಎಂದು ಟಿಟಿಡಿ ಅಧ್ಯಕ್ಷ ವೈ. ವಿ. ಸುಬ್ಬಾರೆಡ್ಡಿ ಮಾಹಿತಿ ನೀಡಿದ್ದಾರೆ.
ಶನಿವಾರ ಈ ಕುರಿತು ಮಾತನಾಡಿದ ಅವರು, "ಕೋವಿಡ್ನಿಂದಾಗಿ ಕಳೆದ ಎರಡೂವರೆ ವರ್ಷದಿಂದ ವಿದೇಶಿ ಭಕ್ತರು ದೇವರ ದರ್ಶನಕ್ಕೆಂದು ತಿರುಪತಿ ಭೇಟಿ ನೀಡಿಲ್ಲ. ಈ ಕುರಿತು ಸರ್ಕಾರ ಹಾಗೂ ಸಂಬಂಧಿಸಿದ ಅಧಿಕಾರಿಗಳ ಜತೆ ಚರ್ಚಿಸಲಾಯಿತು. ನಂತರ ಆಂಧ್ರ ಪ್ರದೇಶದ ಮುಖ್ಯಮಂತ್ರಿ ವೈ. ಎಸ್. ಜಗನ್ ಮೋಹನ್ ರೆಡ್ಡಿ ಮಾರ್ಗದರ್ಶನ ಹಾಗೂ ಅಮೆರಿಕದಲ್ಲಿರುವ ಆಂಧ್ರದ ಎನ್ಆರ್ಐ ಸಂಘದ ಸಹಕಾರದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ" ಎಂದರು.

ಕಾರ್ಯಕ್ರಮದ ವಿವರಗಳು; ಶ್ರೀ ಶ್ರೀನಿವಾಸ ದಂಪತಿ ಕಲ್ಯಾಣ ಉತ್ಸವ ಸ್ವರ್ಗಿಯ ವಿವಾಹ (ಸೆಲೆಸ್ಟಿಯಲ್ ವೆಡ್ಡಿಂಗ್) ಸ್ವರ್ಗದಲ್ಲಿ ಜರುಗಲಿರುವ ಉತ್ಸವ ಎಂಬ ನಂಬಿಕೆ ಭಕ್ತರಲ್ಲಿದೆ. ಇದನ್ನು ಆಯೋಜಿಸುವುದಾಗಿ ಅಮೆರಿಕದ ಒಪ್ಪಿಗೆ ಕೇಳಿದಾಗ ಒಪ್ಪಿಗೆ ಸಿಕ್ಕಿದೆ.
ಮೊದಲು ಸ್ಯಾನ್ ಫ್ರಾನ್ಸಿಸ್ಕೋನಲ್ಲಿ (ಜೂ.18) ಉತ್ಸವ ನಡೆಯಲಿದೆ. ನಂತರ ಸಿಯಾಟಲ್ (ಜೂ.19), ಡಲ್ಲಾಸ್ (ಜೂ.25), ಸೇಂಟ್ ಲೂಯಿಸ್ (ಜೂ.26), ಚಿಕಾಗೊ (ಜೂ.30), ನ್ಯೂ ಓರ್ಲಿಯನ್ಸ್ (ಜು.2), ವಾಷಿಂಗ್ಟನ್ ಡಿಸಿ (ಜು.3) ಮತ್ತು ಅಂಟ್ಲಾಂಟಾದಲ್ಲಿ (ಜು.9)ರಂದು ಶ್ರೀನಿವಾಸ ಕಲ್ಯಾಣ ನಡೆಯಲಿದೆ.
ತಿರುಮಲದಿಂದ ವಿಗ್ರಹಗಳು: ಶ್ರೀ ವೆಂಕಟೇಶ್ವರ ಮತ್ತವರ ಇಬ್ಬರು ಪತ್ನಿಯರಾದ ಶ್ರೀದೇವಿ ಮತ್ತು ಭೂದೇವಿ ವಿಗ್ರಹಗಳನ್ನು ಅರ್ಚಕರ ತಂಡದೊಂದಿಗೆ ತಿರುಮಲದಿಂದ ಅಮೆರಿಕದ ಉತ್ಸವದ ಸ್ಥಳಗಳಿಗೆ ತೆಗೆದುಕೊಂಡು ಹೋಗಲಾಗುತ್ತದೆ.
ಮೂರ್ತಿಗಳು ಜೂ.18ಕ್ಕು ಮುನ್ನವೇ ಸ್ಯಾನ್ ಫ್ರಾನ್ಸಿಸ್ಕೋ ತಲುಪಲಿವೆ. ಅಮೆರಿಕದ ಬಳಿಕ ದುಬೈ ಸೇರಿದಂತೆ ಇತರ ಕೆಲವು ದೇಶಗಳಲ್ಲಿ ಶ್ರೀನಿವಾಸ ಕಲ್ಯಾಣ ಆಯೋಜಿಸಲು ಚಿಂತನೆ ನಡೆದಿದೆ.
"ಸನಾತನ ಹಿಂದೂ ಧರ್ಮ ಜಗತ್ತಿನಾದ್ಯಂತ ಸಾರಲು ಟಿಟಿಡಿ ಅನೇಕ ಧಾರ್ಮಿಕ ಕಾರ್ಯಕ್ರಮಗಳನ್ನು ಮುಂದಿನ ದಿನಗಳಲ್ಲಿ ಹಮ್ಮಿಕೊಳ್ಳಲಿದೆ. ಸದ್ಯ ಆಂಧ್ರ ಪ್ರದೇಶದ ತುಂನಾ ಆಗಸ್ಟ್ 7ರಂದು ಕಲ್ಯಾಣ ಮಸ್ತು, ಬಡವರಿಗಾಗಿ ಉಚಿತ ಸಮೂಹಿಕ ವಿವಾಹದಂತ ಕಾರ್ಯಕ್ರಮ ನಡೆಸಲಾಗುವುದು" ಎಂದು ವೈ. ವಿ. ಸುಬ್ಬಾರೆಡ್ಡಿ ಹಾಗೂ ಟಿಟಿಡಿ ಮತ್ತೊರ್ವ ಮುಖ್ಯಸ್ಥ ಎ. ವಿ. ಧರ್ಮರೆಡ್ಡಿ ಹೇಳಿದ್ದಾರೆ.












Click it and Unblock the Notifications