ತಿರುಪತಿ ತಿಮ್ಮಪ್ಪನ ದರ್ಶನ ಮಾಡಬೇಕೆ? ಇಲ್ಲಿವೆ ಹೊಸ ಮಾರ್ಗಸೂಚಿಗಳು!
ಬೆಂಗಳೂರು, ಮೇ 15: ಕೊರೊನಾ ವೈರಸ್ ಲಾಕ್ಡೌನ್ ಬಿಸಿ ಕೇವಲ ಮನುಷ್ಯರಿಗೆ ಮಾತ್ರ ತಟ್ಟಿಲ್ಲ. ಧಾರ್ಮಿಕ ಕ್ಷೇತ್ರಗಳು ಲಾಕ್ಡೌನ್ನಿಂದಾಗಿ ಬಣಬಣ ಎನ್ನುತ್ತಿವೆ. ದೇಶದ ಎಲ್ಲ ದೇವಸ್ಥಾನಗಳು ಬಾಗಿಲು ಹಾಕಿದ್ದು, ಲಾಕ್ಡೌನ್ನಿಂದಾಗಿ ಭಕ್ತರು ಕೂಡ ದೇವಸ್ಥಾನಗಳಿಗೆ ಬರುತ್ತಿಲ್ಲ. ಹಿಂದೆಂದೂ ಇಷ್ಟೊಂದು ಸುದೀರ್ಘವಾಗಿ ದೇವಸ್ಥಾನಗಳು ಭಕ್ತರಿಗೆ ದರ್ಶನ ಭಾಗ್ಯ ಕೊಡದಿದ್ದ ನಿದರ್ಶನಗಳಿಲ್ಲ. ಕಳೆದ ಮಾರ್ಚ್ ಕೊನೆಯ ವಾರದಿಂದಲೇ ದೇಶದ ಶ್ರೀಮಂತ ದೇವರು ತಿರುಪತಿ ವೆಂಕಟೇಶ್ವರ ಕೂಡ ಭಕ್ತರಿಗೆ ದರ್ಶನ ಕೊಟ್ಟಿಲ್ಲ.
Recommended Video
ಇದೀಗ ತಿರುಮಲ ತಿರುಪತಿ ದೇವಸ್ಥಾನಂ ಟ್ರಸ್ಟ್ನಿಂದ ಭಕ್ತರಿಗೆ ಸಮಾಧಾನ ಕೊಡುವಂತಹ ಸುದ್ದಿಯೊಂದು ಬಂದಿದೆ. ಲಾಕ್ಡೌನ್ ಸಡಿಲಿಕೆಯಾಗುತ್ತಿದ್ದಂತೆಯೆ ತಿಮ್ಮಪ್ಪನ ದರ್ಶನಕ್ಕೆ ಹೊಸ ಮಾರ್ಗಸೂಚಿಗಳನ್ನು ದೇವಸ್ಥಾನದ ಆಡಳಿತ ಮಂಡಳಿ ಸಿದ್ಧಪಡಿಸಿಕೊಂಡಿದೆ. ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿ ಅವರೊಂದಿಗೆ ಚರ್ಚಿಸಿ ಭಕ್ತರಿಗೆ ದರ್ಶನ ವ್ಯವಸ್ಥೆ ಮಾಡಿಕೊಡುವ ಸಿದ್ಧತೆ ನಡೆಸಿದೆ.

ತಿಮ್ಮಪ್ಪನ ದರ್ಶನಕ್ಕೆ ಹೊಸ ಮಾರ್ಗಸೂಚಿ
ಹೌದು, ಮೂರನೇ ಹಂತದ ಲಾಕ್ಡೌನ್ನಲ್ಲಿ ಸಡಿಲಿಕೆ ಬೆನ್ನಲ್ಲೇ ತಿರುಪತಿ ತಿಮ್ಮಪ್ಪ ದರ್ಶನಕ್ಕೆ ಅನುವು ಮಾಡಿಕೊಡಲು ಟಿಟಿಡಿ ಹೊಸ ಮಾರ್ಗಸೂಚಿ ಸಿದ್ದಪಡಿಸುತ್ತಿದೆ. ಪ್ರತಿನಿತ್ಯ 14 ಗಂಟೆ ದೇವರ ದರ್ಶನಕ್ಕೆ ಮಾಡಿಕೊಡಲು ಟಿಟಿಡಿ ಟ್ರಸ್ಟ್ ಆಂಧ್ರಪ್ರದೇಶ ಸರ್ಕಾರಕ್ಕೆ ಸಲಹೆ ಕೊಟ್ಟಿದೆ. ಪ್ರತಿ ಗಂಟೆಗೆ 500, ಒಂದು ದಿನಕ್ಕೆ 7 ಸಾವಿರ ಭಕ್ತರಿಗೆ ಮಾತ್ರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ.
ಜೊತೆಗೆ ಆದ್ಯತೆ ಮೇರೆಗೆ ಭಕ್ತರಿಗೆ ದರ್ಶನ ಒದಗಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಈ ಮೊದಲು ಸಾಮಾನ್ಯ ದಿನಗಳಲ್ಲಿ ಪ್ರತಿದಿನ 18 ರಿಂದ 20 ಗಂಟೆಗಳ ಕಾಲ 60 ಸಾವಿರದಿಂದ 80 ಸಾವಿರ ಜನ ಭಕ್ತರಿಗೆ, ವಿಶೇಷ ಸಂದರ್ಭಗಳಲ್ಲಿ ಸುಮಾರು 5 ಲಕ್ಷ ಭಕ್ತರಿಗೆ ತಿರುಪತಿ ವೆಂಕಟೇಶ್ವರ ದರ್ಶನ ಕೊಡುತ್ತಿದ್ದ.

ಮೊದಲ ಮೂರು ದಿನ ಸಿಬ್ಬಂದಿಗೆ ದರ್ಶನ
ಲಾಕ್ಡೌನ್ ಸಡಿಲಗೊಳಿಸಿರುವ ಈ ಸಂದರ್ಭದಲ್ಲಿ ವೆಂಕಟೇಶ್ವರನ ದರ್ಶನಕ್ಕೆ ಹೊಸ ಮಾರ್ಗಸೂಚಿಗಳನ್ನು ಟಿಟಿಡಿ ಸಿದ್ಧಪಡಿಸಿದೆ. ಹೊಸ ಮಾರ್ಗಸೂಚಿಗಳನ್ನು ಜಾರಿಗೆ ತರಲು ಪ್ರಯೋಗಾತ್ಮಕವಾಗಿ ಮೊದಲ ಮೂರು ದಿನ ಟಿಟಿಡಿ ಸಿಬ್ಬಂದಿಗೆ ದರ್ಶನ ಭಾಗ್ಯ ಕೊಡಲು ತಿರುಮಲ ತಿರುಪತಿ ದೇವಸ್ಥಾನಂ ಟ್ರಸ್ಟ್ ತೀರ್ಮಾನ ಮಾಡಿದೆ. ಅದರ ಬಳಿಕ ದೇವಸ್ಥಾನವಿರುವ ಚಿತ್ತೂರು ಜಿಲ್ಲಾ ವ್ಯಾಪ್ತಿಯ ಭಕ್ತರಿಗೆ ದರ್ಶನ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಇವೆಲ್ಲವನ್ನೂ ನೋಡಿಕೊಂಡು ನಂತರ ಇಡೀ ಆಂಧ್ರಪ್ರದೇಶ ರಾಜ್ಯ ವ್ಯಾಪ್ತಿಯ ಜನರಿಗೆ ದರ್ಶನಕ್ಕೆ ವ್ಯವಸ್ಥೆ ಮಾಡಲು ಟಿಟಿಡಿ ಮಾರ್ಗಸೂಚಿಸಿ ರೂಪಿಸಿದೆ.

ಅಲಿಪುರಿ ಬಳಿ ವೈದ್ಯಕೀಯ ತಪಾಸಣೆ
ವಿಶೇಷ ಟಿಕೆಟ್ ನೀಡಿ ದರ್ಶನಕ್ಕೆ ವ್ಯವಸ್ಥೆ ಮಾಡಲು ತೀರ್ಮಾನ ಮಾಡಲಾಗಿದೆ. ಹೀಗೆ ವಿಶೇಷ ಟಿಕೆಟ್ ಹೊಂದಿರುವವರಿಗೆ ಮೊದಲು ಟಿಟಿಡಿ ದೇವಸ್ಥಾನದಿಂದ ಸುಮಾರು ಎರಡೂವರೆ ಕಿಲೋಮೀಟರ್ ದೂರದ ಅಲಿಪಿರಿ ಬಳಿ ವೈದ್ಯಕೀಯ ತಪಾಸಣೆ ಮಾಡಲಾಗುತ್ತದೆ. ವೈದ್ಯಕೀಯ ತಪಾಸಣೆ ಬಳಿಕ ಆರೋಗ್ಯವಂತರಾಗಿರುವ ಹಾಗೂ ಕೊರೊನಾ ವೈರಸ್ ಸೋಂಕಿನ ಯಾವುದೇ ಲಕ್ಷಣಗಳಿಲ್ಲದ ಭಕ್ತರಿಗೆ ಮಾತ್ರ ದರ್ಶನಕ್ಕೆ ಅನುಮತಿ ಕೊಡಲಾಗುತ್ತಿದೆ.
ಈ ಬಗ್ಗೆ ಶೀಘ್ರದಲ್ಲೇ ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರೊಂದಿಗೆ ಜೊತೆ ಚರ್ಚಿಸಿ ತೀರ್ಮಾನ ಮಾಡಲಾಗುವುದು ಎಂದು ಟಿಟಿಡಿ ಟ್ರಸ್ಟ್ ಅಧ್ಯಕ್ಷ ವೈ.ವಿ. ಸುಬ್ಬಾ ರೆಡ್ಡಿ ಮಾಹಿತಿ ಕೊಟ್ಟಿದ್ದಾರೆ.

ಸಂಕಟ ಬಂದಾರ ವೆಂಕಟರಮಣನ ದರ್ಶನವಿಲ್ಲ
ಸಂಕಟ ಬಂದಾರ ವೆಂಕಟ ರಮಣ ಎನ್ನುತ್ತಿದ್ದ ಜನರಿಗೆ ಕಳೆದ ಸುಮಾರು ಒಂದೂವರೆ ತಿಂಗಳುಗಳಿಂದ ತಿರುಪತಿ ವೇಂಕಟೇಶ್ವರ ಭಕ್ತರಿಗೆ ದರ್ಶನ ಕೊಟ್ಟಿಲ್ಲ. ಸಂಕಟ ಬಂದಾಗ ದೇವರ ದರ್ಶನವನ್ನೂ ಪಡೆಯದಂತಹ ಸ್ಥಿತಿ ಕೊರೊನಾ ವೈರಸ್ನಿಂದ ನಿರ್ಮಾಣವಾಗಿದೆ. ಎರಡು ವರ್ಷಗಳ ಹಿಂದೆ ಸ್ವಚ್ಛತಾ ಕಾರ್ಯಗಳಿಗಾಗಿ ದೇವಸ್ಥಾನವನ್ನು 6 ದಿನಗಳ ಕಾಲ್ ಭಕ್ತರಿಗೆ ಬಂದ್ ಮಾಡಲಾಗಿತ್ತು. ಅದನ್ನು ಬಿಟ್ಟರೆ ಇಷ್ಟೊಂದು ಸುದೀರ್ಘವಾಗಿ ಭಕ್ತರಿಗೆ ದೇವಸ್ಥಾನದ ಬಾಗಿಲು ಬಂದ್ ಮಾಡಿರುವುದು ಇತಿಹಾಸದಲ್ಲಿಯೆ ಮೊದಲ ಎನ್ನಲಾಗಿದೆ. ಹೀಗಾಗಿ ಭಕ್ತರಿಗೆ ದರ್ಶನ ಭಾಗ್ಯ ಕೊಡಲು ಟಿಟಿಡಿ ಟ್ರಸ್ಟ್ ಸಿದ್ಧತೆ ಮಾಡಿಕೊಳ್ಳುತ್ತಿದೆ.












Click it and Unblock the Notifications