ಯೆಸ್ ಬ್ಯಾಂಕ್ ಆರ್ಥಿಕ ಸಂಕಷ್ಟ; ತಿರುಪತಿ ತಿಮ್ಮಪ್ಪನಿಗೆ ಮೊದಲೇ ಗೊತ್ತಿತ್ತಾ?
ಅಮರಾವತಿ, ಮಾರ್ಚ್ 6: ದೇಶದ ಬ್ಯಾಂಕಿಂಗ್ ವಲಯದಲ್ಲಿ ಯೆಸ್ ಬ್ಯಾಂಕ್ ಬಿರುಗಾಳಿ ಎಬ್ಬಿಸಿದೆ. ಯೆಸ್ ಬ್ಯಾಂಕ್ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವುದರಿಂದ ಬ್ಯಾಂಕ್ ಗ್ರಾಹಕರು ಆತಂಕಕ್ಕೆ ಒಳಗಾಗಿದ್ದಾರೆ.
Recommended Video
ಬ್ಯಾಂಕ್ ಠೇವಣಿದಾರರು ತಮ್ಮ ಹಣ ವಾಪಸ್ ಸಿಗುತ್ತೋ ಇಲ್ಲವೋ ಎಂದು ಚಿಂತಾಕ್ರಾಂತರಾಗಿದ್ದಾರೆ. ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಗ್ರಾಹಕರಿಗೆ ಅಭಯ ನೀಡಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಯೆಸ್ ಬ್ಯಾಂಕ್ ಸಂಕಷ್ಟದ ಕುರಿತು ಮೇಲಿಂದ ಮೇಲೆ ಸಭೆಗಳನ್ನು ನಡೆಸುತ್ತಿದ್ದಾರೆ. ಮುಂದೆನಾಗುತ್ತೋ ಎಂದು ಬ್ಯಾಂಕ್ ಗ್ರಾಹಕರು ಕಾಲ ಕಳೆಯುತ್ತಿದ್ದಾರೆ.
ಆದರೆ, ಯೆಸ್ ಬ್ಯಾಂಕ್ನ ಆರ್ಥಿಕ ದಿವಾಳಿತನ ಮುನ್ಸೂಚನೆಯ ಸುಳಿವು ದೇಶದ ಶ್ರೀಮಂತ ದೇವಸ್ಥಾನವಾದ ಆಂಧ್ರಪ್ರದೇಶದ ತಿರುಪತಿ ತಿರುಮಲ ದೇವಸ್ಥಾನದ ಆಡಳಿತ ಮಂಡಳಿಗೆ (ಟಿಟಿಡಿ) ಮುಂಚಿತವಾಗಿಯೇ ಸಿಕ್ಕಿತ್ತಾ? ಎನ್ನುವ ವರದಿಗಳು ಬಂದಿವೆ. ಯೆಸ್ ಬ್ಯಾಂಕ್ ದಿವಾಳಿ ಎಳುವ ಮುನ್ಸೂಚನೆಯಿಂದ ಬ್ಯಾಂಕ್ನಲ್ಲಿ ಇರಿಸಿದ್ದ ಅಪಾರ ಪ್ರಮಾಣದ ಠೇವಣಿ ಹಣವನ್ನು ಟಿಟಿಡಿ ಈ ಹಿಂದೆಯೇ ವಾಪಸ್ ಪಡೆದಿತ್ತು ಎಂದು ತಿಳಿದು ಬಂದಿದೆ.

ಬ್ಯಾಂಕ್ ದಿವಾಳಿ ಆಗುವ ಮುನ್ಸೂಚನೆ
ಭಕ್ತರಿಂದ ತನ್ನಲ್ಲಿ ಜಮೆಯಾಗುವ ಅಪಾರ ಪ್ರಮಾಣದ ಹುಂಡಿ ಹಣ ಹಾಗೂ ಟಿಟಿಡಿಗೆ ಬರುವ ಆದಾಯವನ್ನು ತಿರುಪತಿ ದೇವಸ್ಥಾನ ಆಡಳಿತ ಮಂಡಳಿ ಠೇವಣಿ ರೂಪದಲ್ಲಿ ವಿವಿಧ ಬ್ಯಾಂಕ್ಗಳಲ್ಲಿ ಇರಿಸುತ್ತದೆ. ಇದರಿಂದ ದೇವಸ್ಥಾನಕ್ಕೆ ಬಡ್ಡಿಯ ರೂಪದಲ್ಲಿ ಮತ್ತಷ್ಟು ಹಣ ಹರಿದು ಬರುತ್ತದೆ. ಯೆಸ್ ಬ್ಯಾಂಕ್ನಲ್ಲೂ ಟಿಟಿಡಿ 1300 ಕೋಟಿ ರುಪಾಯಿಗೂ ಹೆಚ್ಚು ಮೊತ್ತದ ಹಣವನ್ನು ಇಟ್ಟಿತ್ತು. ಯಶ್ ಬ್ಯಾಂಕ್ ದಿವಾಳಿ ಆಗುವ ಮುನ್ಸೂಚನೆ ಅರಿತ ಟಿಟಿಡಿ ಬೃಹತ್ ಪ್ರಮಾಣದ ಹಣವನ್ನು ವಾಪಸ್ ಪಡೆದು ಬೇರೆಡೆ ಹೂಡಿಕೆ ಮಾಡಿದೆ.

1300 ಕೋಟಿ ರುಪಾಯಿ ಹಿಂತೆಗೆತ
ಯೆಸ್ ಬ್ಯಾಂಕ್ ದಿವಾಳಿ ಏಳಬಹುದು ಎಂದು ಕಳೆದ ಅಕ್ಟೋಬರ್ನಲ್ಲಿ ಟಿಟಿಡಿ 1300 ಕೋಟಿ ರುಪಾಯಿಯನ್ನು ಹಿಂದಕ್ಕೆ ಪಡೆದಿದೆ. ಹಣವನ್ನು ದೇವಸ್ಥಾನದ ಇನ್ನಿತರ ಅಭಿವೃದ್ಧಿ ಕಾರ್ಯಗಳಿಗೆ ಬಳಸಲು ಸಮಿತಿ ತೀರ್ಮಾನದಂತೆ ಹಿಂತೆಗೆಯಲಾಗಿತ್ತು. "ಈಗಿನ ಯೆಸ್ ಬ್ಯಾಂಕ್ ಬೆಳವಣಿಗೆಗಳಿಗೂ ಹಣ ಹಿಂತೆಗೆತಕ್ಕೂ ಯಾವುದೇ ಸಂಬಂಧವಿಲ್ಲ. ಸಮಿತಿ ಖಾಸಗಿ ಬ್ಯಾಂಕ್ಗಳಲ್ಲಿ ದೊಡ್ಡ ಮೊತ್ತದ ಹಣ ಠೇವಣಿ ಇಡಬಾರದು ಎಂಬ ನಿರ್ಧಾರ ತೆಗೆದುಕೊಂಡಿತ್ತು" ಎಂದು ಟಿಟಿಡಿ ಅಧ್ಯಕ್ಷ ಸುಬ್ಬಾ ರೆಡ್ಡಿ ಮಾಧ್ಯಮಗಳಿಗೆ ಹೇಳಿದ್ದಾರೆ.

ಬ್ಯಾಂಕ್ ಮೇಲೆ ಸಾಕಷ್ಟು ನಿರ್ಭಂಧ
ಭಾರತೀಯ ರಿಸರ್ವ್ ಬ್ಯಾಂಕ್ ಯೆಸ್ ಬ್ಯಾಂಕ್ ಮೇಲೆ ಸಾಕಷ್ಟು ನಿರ್ಭಂಧಗಳನ್ನು ಹೇರಿದೆ. ಇದರಿಂದ ಗ್ರಾಹಕರು ಕಂಗಾಲಾಗಿದ್ದಾರೆ. ಎಲ್ಲಾ ಖಾತೆಗಳನ್ನೂ ಒಳಗೊಂಡಂತೆ ಬ್ಯಾಂಕ್ ಗ್ರಾಹಕರು ಮಾರ್ಚ್ 31 ರ ವರಗೆ ಕೇವಲ 50 ಸಾವಿರ ರುಪಾಯಿಗಳನ್ನು ಮಾತ್ರ ಹಿಂತೆಗೆಯಬೇಕು ಎಂದು ಆರ್ಬಿಐ ಹೇಳಿದೆ.

ಪ್ರಶಾಂತ್ ಕುಮಾರ್ ಅಧ್ಯಕ್ಷ
ಸದ್ಯ ನಡೆದಿರುವ ಬೆಳವಣಿಗೆಗಳ ಹಿನ್ನೆಲೆಯಲ್ಲಿಯೆಸ್ ಬ್ಯಾಂಕ್ ಆಡಳಿತ ಮಂಡಳಿಯನ್ನು ಆರ್ಬಿಐ ವಜಾಗೊಳಿಸಿದೆ. ಎಸ್ಬಿಐನ ಮಾಜಿ ಸಿಎಫ್ ಓ ಪ್ರಶಾಂತ್ ಕುಮಾರ್ ಅವರನ್ನು ಆಡಳಿತ ಮಂಡಳಿ ಅಧ್ಯಕ್ಷರನ್ನಾಗಿ ನೇಮಿಸಿದೆ. ಬ್ಯಾಂಕ್ನ್ನು ಎಸ್ಬಿಐನೊಂದಿಗೆ ವಿಲೀನ ಮಾಡಲಾಗುತ್ತಿದೆ ಎನ್ನಲಾಗಿದೆ.












Click it and Unblock the Notifications