ಜೂನ್ 8 ರಿಂದ ತಿರುಪತಿ ತಿಮ್ಮಪ್ಪನ ದರ್ಶನ: ಭಕ್ತಾದಿಗಳು ಪಾಲಿಸಬೇಕಾದ ನಿಯಮಗಳಿವು
ತಿರುಪತಿ, ಜೂನ್ 6: ಮಹಾಮಾರಿ ಕೊರೊನಾ ವೈರಸ್ ಸೋಂಕನ್ನು ತಡೆಗಟ್ಟಲು ದೇಶದಾದ್ಯಂತ ಲಾಕ್ ಡೌನ್ ಘೋಷಿಸಲಾಗಿತ್ತು. ಲಾಕ್ ಡೌನ್ ಅನ್ವಯ ದೇಶದ ಎಲ್ಲಾ ದೇವಾಲಯಗಳೂ ಮುಚ್ಚಲ್ಪಟ್ಟಿತ್ತು. ಇದೀಗ ಕಂಟೇನ್ಮೆಂಟ್ ಝೋನ್ ಗಳಲ್ಲಿ ಮಾತ್ರ ಲಾಕ್ ಡೌನ್ ಮುಂದುವರೆದಿದ್ದು, ಉಳಿದೆಡೆ ನಿಯಮಗಳನ್ನು ಸಡಿಲಗೊಳಿಸಲಾಗಿದೆ.
Recommended Video
ಕೋವಿಡ್-19 ಸೋಂಕನ್ನು ತಡೆಗಟ್ಟುವ ಸಲುವಾಗಿ ಮಾರ್ಚ್ 20 ರಂದು ತಿರುಮಲ ತಿರುಪತಿ ವೆಂಕಟೇಶ್ವರ ಸ್ವಾಮಿ ದೇವಾಲಯವನ್ನು ಬಂದ್ ಮಾಡಲಾಗಿತ್ತು. 128 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಭಕ್ತಾದಿಗಳಿಗೆ ತಿರುಮಲ ತಿರುಪತಿ ವೆಂಕಟೇಶ್ವರ ಸ್ವಾಮಿಯ ದೇವಾಲಯ ಮುಚ್ಚಲ್ಪಟ್ಟಿತ್ತು.
ಆದ್ರೀಗ, ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ.. ವಿಶ್ವದ ಶ್ರೀಮಂತ ಹಿಂದೂ ದೇಗುಲ ತಿರುಮಲ ತಿರುಪತಿ ವೆಂಕಟೇಶ್ವರ ಸ್ವಾಮಿಯ ದೇವಾಲಯವನ್ನು ತೆರೆಯಲು ಆಂಧ್ರ ಪ್ರದೇಶ ಸರ್ಕಾರ ಅನುಮತಿ ನೀಡಿದೆ.
ಜೂನ್ 8 ರಿಂದ (ಸೋಮವಾರ) ತಿರುಮಲ ತಿರುಪತಿ ವೆಂಕಟೇಶ್ವರ ಸ್ವಾಮಿ ದೇವಾಲಯ ಭಕ್ತರಿಗೆ ಮುಕ್ತವಾಗಲಿದೆ. ತಿರುಪತಿ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆಯಲು ಭಕ್ತರು ಕೆಲವು ನಿಯಮಗಳನ್ನು ಪಾಲಿಸಲೇಬೇಕಿದೆ. ಭಕ್ತರಿಗೆ ಟಿಟಿಡಿ ನೀಡಿರುವ ಮಾರ್ಗಸೂಚಿಗಳು ಇಂತಿವೆ:

ಪ್ರತಿ ಗಂಟೆಗೆ 500 ಭಕ್ತಾದಿಗಳಿಗೆ ದರ್ಶನದ ಅವಕಾಶ
* ಬೆಳಗ್ಗೆ 6.30 ರಿಂದ ಸಂಜೆ 7.30 ರವರೆಗೆ ಪ್ರತಿ ಗಂಟೆಗೆ ಸುಮಾರು 500 ಭಕ್ತಾದಿಗಳಿಗೆ ದೇವರ ದರ್ಶನ ಪಡೆಯಲು ಅವಕಾಶ.
* ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ 65 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಮತ್ತು 10 ವರ್ಷಕ್ಕಿಂತ ಕಡಿಮೆ ಇರುವ ಮಕ್ಕಳಿಗೆ ದೇವಾಲಯದ ಒಳಗೆ ಪ್ರವೇಶವಿಲ್ಲ.

ಪ್ರಾಯೋಗಿಕ ದರ್ಶನದ ಸ್ಪಾಟ್ ವ್ಯವಸ್ಥೆ
* ಪ್ರಾಯೋಗಿಕವಾಗಿ ಟಿಟಿಡಿಯ ನೌಕರರಿಗೆ ಮತ್ತು ಅವರ ಕುಟುಂಬಗಳಿಗೆ ಜೂನ್ 8 ಮತ್ತು 9 ರಂದು ಇಂಟರ್ ನೆಟ್ ಸೌಲಭ್ಯವನ್ನು ಬಳಸಿಕೊಂಡು ದರ್ಶನದ ಸ್ಲಾಟ್ ಕಾಯ್ದಿರಿಸಲಾಗುತ್ತದೆ. (ಇದಕ್ಕಾಗಿ ನೌಕರರು ತಮ್ಮ ಸ್ಲಾಟ್ ಗಳನ್ನು ಜೂನ್ 6 ಮತ್ತು 7 ರಂದು ಸ್ಲಾಟ್ ಗಳನ್ನು ಕಾಯ್ದಿರಿಸಬೇಕಿದೆ).
* ಜೂನ್ 10 ರಂದು ತಿರುಮಲ ಆವರಣದಲ್ಲಿರುವ ಟೈಮ್ ಸ್ಲಾಟ್ ಟೋಕನ್ ಕೌಂಟರ್ ಗಳಲ್ಲಿ ತಿರುಮಲ ಸ್ಥಳೀಯರಿಗೆ ಪ್ರತಿ ಗಂಟೆಗೆ 500 ವ್ಯಕ್ತಿಗಳಿಗೆ ಮಾತ್ರ ಸ್ಲಾಟ್ ಟೋಕನ್ ನೀಡಲಾಗುವುದು.
* ಜೂನ್ 11 ರಿಂದ ಭಕ್ತರಿಗೆ 300 ರೂಪಾಯಿ ಮೌಲ್ಯದ ದರ್ಶನದ ಆನ್ ಲೈನ್ ಟಿಕೆಟ್ ನೀಡಲಾಗುವುದು. ಬುಕ್ಕಿಂಗ್ ಗಾಗಿ ಆನ್ ಲೈನ್ ಕೋಟಾ ಜೂನ್ 8 ರಿಂದ ಲಭ್ಯವಿರಲಿದೆ.

ಆನ್ ಲೈನ್ ನಲ್ಲಿ ದರ್ಶನದ ಟಿಕೆಟ್ ಕಾಯ್ದಿರಿಸಬೇಕು
* ಗ್ರಾಮಗಳಿಂದ ಅಥವಾ ಗ್ರಾಮೀಣ ಪ್ರದೇಶಗಳಿಂದ ಬರುವವರು ಆನ್ ಲೈನ್ ನಲ್ಲಿಯೇ ದರ್ಶನದ ಟಿಕೆಟ್ ಕಾಯ್ದಿರಿಸಬೇಕಿದೆ.
* ಗ್ರಾಮಸ್ಥರಿಗೆ ಸಹಾಯ ಮಾಡಲು ಟಿಕೆಟ್ ಕಾಯ್ದಿರಿಸುವ ಸರಳ ಹಂತಗಳ ಬಗ್ಗೆ ತರಬೇತಿ ನೀಡಲಾಗುವುದು.
* ತಿರುಪತಿಯಲ್ಲಿರುವ ಎಸ್.ಎಸ್.ಡಿ ಕೌಂಟರ್ ಗಳಲ್ಲಿ ಪ್ರತಿದಿನ 3,000 ಸರ್ವ ದರ್ಶನ ಟಿಕೆಟ್ ಗಳನ್ನು ನೀಡಲಾಗುವುದು.

ವಿ.ಐ.ಪಿ ದರ್ಶನ ಇದ್ಯಾ.?
* ಜೂನ್ 11 ರಿಂದ ವಿ.ಐ.ಪಿ ದರ್ಶನ ವ್ಯವಸ್ಥೆ ಆರಂಭವಾಗಲಿದೆ.
* ಪ್ರತಿದಿನ ಬೆಳಗ್ಗೆ 6.30 ರಿಂದ 7.30 ರವರೆಗೆ ವಿ.ಐ.ಪಿ ದರ್ಶನ ವ್ಯವಸ್ಥೆ ಇರಲಿದೆ.
* ವಿ.ಐ.ಪಿ ದರ್ಶನ ಪಡೆಯಲು ಶಿಫಾರಸ್ಸು ಪತ್ರಗಳಿಗೆ ಮಾನ್ಯತೆ ನೀಡಲಾಗುವುದಿಲ್ಲ.

ತೀರ್ಥ ನೀಡುವುದಿಲ್ಲ
* ಭಕ್ತಾದಿಗಳ ಸುರಕ್ಷತೆ ದೃಷ್ಟಿಯಿಂದ ಅಲಿಪಿರಿ ವಾಕರ್ಸ್ ಮಾರ್ಗ ಮಾತ್ರ ಬೆಳಗ್ಗೆ 6 ರಿಂದ ಸಂಜೆ 4 ರವರೆಗೆ ತೆರೆದಿರುತ್ತದೆ. ಆದರೆ, ಶ್ರೀವಾರಿ ಮೆಟ್ಟು ಮಾತ್ರ ಮುಚ್ಚಲ್ಪಟ್ಟಿರುತ್ತದೆ.
* ರಾತ್ರಿ 9 ರಿಂದ ಬೆಳಗ್ಗೆ 5 ರವರೆಗೆ ಕರ್ಫ್ಯೂ ಇರುವುದರಿಂದ ಎರಡೂ ಘಾಟ್ ಗಳ ರಸ್ತೆಗಳು ಬೆಳಗ್ಗೆ 5 ರಿಂದ ರಾತ್ರಿ 8 ರವರೆಗೆ ಮಾತ್ರ ತೆರೆದಿರುತ್ತವೆ.
* ಮುಖ್ಯ ದೇವರ ದರ್ಶನಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ವಕುಲಮಾಥ, ಭಾಷ್ಯಕಾರೂಳ ಸನ್ನಿಧಿ ಮತ್ತು ಯೋಗನರಸಿಂಹ ಸ್ವಾಮಿ ಸೇರಿದಂತೆ ಉಪ ದೇವಾಲಯಗಳನ್ನು ಸದ್ಯಕ್ಕೆ ತೆರೆಯುವುದಿಲ್ಲ.
* ಭಕ್ತರಿಗೆ ಪುಷ್ಕರಣಿ ಪ್ರವೇಶಿಸಲು ಅವಕಾಶವಿಲ್ಲ.
* ಭಕ್ತರಿಗೆ ತೀರ್ಥ ಮತ್ತು ಶತಾರಿ ನೀಡಲಾಗುವುದಿಲ್ಲ.
* ಶ್ರೀವಾರಿ ಹುಂಡಿ ಬಳಿ ಗಿಡಮೂಲಿಕೆಗಳ ಹ್ಯಾಂಡ್ ಸ್ಯಾನಿಟೈಸರ್ ನೀಡಲಾಗುತ್ತದೆ.

ಕೊಠಡಿ ಹಂಚಿಕೆ ಹೇಗೆ.?
* ಟಿಕೆಟ್ ನೊಂದಿಗೆ ಅಲಿಪಿರಿಗೆ ಪ್ರವೇಶಿಸುವ ಪ್ರತಿಯೊಬ್ಬ ಭಕ್ತರು ಅಲಿಪಿರಿ ಟೋಲ್ ಗೇಟ್ ನಲ್ಲಿ ಥರ್ಮಲ್ ಸ್ಕ್ಯಾನಿಂಗ್, ವೆಹಿಕಲ್ ಸ್ಕ್ಯಾನಿಂಗ್ ಮತ್ತು ಹ್ಯಾಂಡ್ ಸ್ಯಾನಿಟೈಸ್ ಗೆ ಒಳಗಾಗಬೇಕಿದೆ.
* ತಿರುಮಲದಲ್ಲಿ ಯಾತ್ರಾರ್ಥಿಗಳಿಗೆ ಪರ್ಯಾಯ (ಬೆಸ-ಬೆಸ, ಸಮ-ಸಮ) ಕ್ರಮದಲ್ಲಿ ವಸತಿ ವ್ಯವಸ್ಥೆ ಮಾಡಲಾಗುತ್ತದೆ.
* ತಿರುಮಲದಲ್ಲಿ ಪ್ರತಿ ಕೋಣೆಯಲ್ಲಿ ಇಬ್ಬರು ವ್ಯಕ್ತಿಗಳಿಗೆ ಕೇವಲ 24 ಗಂಟೆಗಳ ಕಾಲ ಉಳಿಯುವ ಅವಕಾಶವಿರುತ್ತದೆ.
* ಕೊಠಡಿಗಳ ವಿಸ್ತರಣೆಗೆ ಅವಕಾಶವಿಲ್ಲ.
* ಕೊಠಡಿಗಳ ಮರು ಹಂಚಿಕೆಗಾಗಿ 12 ಗಂಟೆಗಳ ಅಂತರವನ್ನು ಕಾಯ್ದುಕೊಳ್ಳಲಾಗುವುದು.
* ಪ್ರತಿ ಎರಡು ಗಂಟೆಗಳಿಗೊಮ್ಮೆ ಕೊಠಡಿಗಳನ್ನು ಸ್ಯಾನಿಟೈಸ್ ಮಾಡಲಾಗುವುದು.
* ತಿರುಪತಿಯಲ್ಲೂ ಕೊಠಡಿಯ ಹಂಚಿಕೆ ಇದೇ ವ್ಯವಸ್ಥೆಯನ್ನು ಅನುಸರಿಸುತ್ತದೆ.

ತಿರುಮಲದಲ್ಲಿ ಮದುವೆ.?
* ಕೇಂದ್ರ ಸರ್ಕಾರ ನೀಡಿರುವ ಮಾರ್ಗಸೂಚಿ ಅನ್ವಯ, ಆರೋಗ್ಯ ಅಧಿಕಾರಿಯ ಅನುಮೋದನೆಯ ನಂತರ ತಿರುಮಲದಲ್ಲಿರುವ ಮದುವೆ ಮಂಟಪದಲ್ಲಿ 50 ಜನರ ಸಮ್ಮುಖದಲ್ಲಿ ಮಾತ್ರ ವಿವಾಹ ನಡೆಸಲು ಅವಕಾಶ ನೀಡಲಾಗಿದೆ.

ನಿರಂತರ ಪ್ರಕಟಣೆ
* ಕೋವಿಡ್-19 ಬಗ್ಗೆ ಯಾತ್ರಾರ್ಥಿಗಳಲ್ಲಿ ಅರಿವು ಮೂಡಿಸಲು ಎಸ್.ಇ.ಡಿ ಮತ್ತು ಎಸ್.ಎಸ್.ಡಿ ಎಂಟ್ರಿ, ತಿರುಮಲ ವಸತಿ ಸೌಕರ್ಯ, ಅಲಿಪಿರಿ ಮಾರ್ಗದಲ್ಲಿ ತಡೆರಹಿತ ಪ್ರಕಟಣೆಗಳನ್ನು ತೆಲುಗು, ತಮಿಳು, ಕನ್ನಡ, ಹಿಂದಿ ಮತ್ತು ಇಂಗ್ಲೀಷ್ ನಲ್ಲಿ ಮಾಡಲಾಗುವುದು.
* ತಿರುಮಲ ತಿರುಪತಿಯಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು, ಮಾಸ್ಕ್ ಧರಿಸುವುದು ಮತ್ತು ಹ್ಯಾಂಡ್ ಸ್ಯಾನಿಟೈಸರ್ ಬಳಸುವುದು ಕಡ್ಡಾಯ.
* ಮಾತೃಶ್ರೀ ತರಿಗೊಂಡ ವೆಂಗಮಾಂಬ ಅನ್ನದಾನಂ ಕಾಂಪ್ಲೆಕ್ಸ್ ಮಾತ್ರ ಬೆಳಗ್ಗೆ 8 ರಿಂದ ರಾತ್ರಿ 8 ರವರೆಗೆ ಕಾರ್ಯನಿರ್ವಹಿಸಲಿದೆ.
* ಯಾತಾರ್ಥಿಗಳ ಸಂಪರ್ಕದಲ್ಲಿರುವ ಆರೋಗ್ಯ ಕಾರ್ಯಕರ್ತರು, ಶ್ರೀವಾರಿ ಸೇವಕರು ಮತ್ತು ಕ್ಷೌರಿಕರಿಗೆ ಪಿಪಿಇ ಕಿಟ್ ಗಳನ್ನು ನೀಡಲಾಗುವುದು.

ಕೋವಿಡ್-19 ಪರೀಕ್ಷೆ
* ಪ್ರತಿದಿನ 200 ಭಕ್ತಾದಿಗಳು ಮತ್ತು ನೌಕರರಿಗೆ ಕೋವಿಡ್-19 ರಾಂಡಮ್ ಪರೀಕ್ಷೆ ನಡೆಸಲಾಗುವುದು.
* ತಿರುಮಲದ ಅಲಿಪಿರಿ ಮತ್ತು ಅಶ್ವಿನಿ ಆಸ್ಪತ್ರೆಯಲ್ಲಿ ವಿಶೇಷ ಕೋವಿಡ್-19 ಪರೀಕ್ಷೆ ಮತ್ತು ಮಾದರಿ ಸಂಗ್ರಹ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.
* ಭಕ್ತರು ಮತ್ತು ನೌಕರರ ಅನುಕೂಲಕ್ಕಾಗಿ ಕೊರೊನಾ ಪರೀಕ್ಷಾ ಪ್ರಯೋಗಾಲಯವನ್ನು ತಿರುಪತಿಯಲ್ಲಿ SVIMS ಆಸ್ಪತ್ರೆಯಲ್ಲಿ ಸ್ಥಾಪಿಸಲಾಗಿದೆ.
* ಕೋವಿಡ್-19 ಪರೀಕ್ಷೆಯಲ್ಲಿ ಪಾಸಿಟಿವ್ ಕಂಡುಬಂದರೆ, ಭಕ್ತರು ಕೇಂದ್ರ ಮತ್ತು ರಾಜ್ಯ ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ನಡೆದುಕೊಳ್ಳಬೇಕಿದೆ.

ಕಂಟೇನ್ಮೆಂಟ್ ಝೋನ್ ನಲ್ಲಿರುವವರು ದರ್ಶನ ಟಿಕೆಟ್ ಕಾಯ್ದಿರಿಸಬೇಡಿ
* ಕಂಟೇನ್ಮೆಂಟ್ ಝೋನ್ ನಲ್ಲಿರುವ ಭಕ್ತಾದಿಗಳು ಆನ್ ಲೈನ್ ದರ್ಶನ ಟಿಕೆಟ್ ಗಳನ್ನು ಕಾಯ್ದಿರಿಸದಂತೆ ಸೂಚಿಸಲಾಗಿದೆ.
* ಆನ್ ಲೈನ್ ಟಿಕೆಟ್ ಕಾಯ್ದಿರಿಸಿದ ಇತರೆ ರಾಜ್ಯಗಳ ಭಕ್ತರು ಆಯಾ ರಾಜ್ಯ ಸರ್ಕಾರಗಳು ಸೂಚಿಸಿರುವ ಕೋವಿಡ್-19 ಮಾರ್ಗಸೂಚಿಗಳನ್ನು ಪಾಲಿಸಬೇಕು.
* ದರ್ಶನದ ಟಿಕೆಟ್ ಗಳು ರಾಜ್ಯವನ್ನು ಪ್ರವೇಶಿಸಲು ಅರ್ಹತೆ ಪಡೆಯುವುದಿಲ್ಲ ಎಂಬುದನ್ನು ಭಕ್ತರು ಗಮನಿಸಬೇಕು.












Click it and Unblock the Notifications