ತಿರುಮಲ ತಿರುಪತಿಗೆ ಒಂದೇ ದಿನ 2.54 ಕೋಟಿ ರು ಆದಾಯ
ತಿರುಮಲ, ಜನವರಿ 13: ಏಳುಬೆಟ್ಟದ ಒಡೆಯ ತಿರುಪತಿ ತಿಮ್ಮಪ್ಪನ ಸನ್ನಿಧಿಗೆ ಕಳೆದ ಒಂದು ವರ್ಷದಲ್ಲಿ ಆದಾಯ ಗಳಿಕೆ ತಗ್ಗಿದೆ. ಕೋವಿಡ್ 19 ಕಾರಣದಿಂದ ನಷ್ಟ ಅನುಭವಿಸಿದರೂ 2021ರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರನ್ನು ನಿರೀಕ್ಷಿಸಲಾಗಿದೆ.
ಕೊರೊನಾ ಸಾಂಕ್ರಾಮಿಕದ ನಡುವೆಯೂ, ಮಳೆ, ಚಳಿ ಗಾಳಿ ಲೆಕ್ಕಿಸದೆ ಬೆಟ್ಟವೇರಿ ವೆಂಕಟೇಶ್ವರ ಸ್ವಾಮಿಯ ದರ್ಶನವನ್ನು ಭಕ್ತರು ಪಡೆದುಕೊಳ್ಳುತ್ತಿದ್ದಾರೆ. ಇದರಿಂದ ಪ್ರತಿದಿನ ಭಕ್ತರ ಸಂಖ್ಯೆ ಹೆಚ್ಚುತಿದೆ. ಕಳೆದ ವಾರ 48,462 ಯಾತ್ರಿಗಳನ್ನು ದೇಗುಲ ನಗರಿ ಕಂಡಿದೆ.
ಈ ವಾರದ ಆರಂಭದಲ್ಲೇ ಸುಮಾರು 37,259 ಯಾತ್ರಿಗಳು ತಿರುಮಲದ ಒಡೆಯ ಶ್ರೀನಿವಾಸನ ದರ್ಶನ ಪಡೆದುಕೊಂಡಿದ್ದಾರೆ. ಇದರಿಂದ ಸುಮಾರು 2.54 ಕೋಟಿ ರು ಹುಂಡಿ ಗಳಿಕೆ ಬಂದಿದೆ ಎಂದು ಟಿಟಿಡಿ ಪ್ರಕಟಿಸಿದೆ.

ಸುಮಾರು 80 ದಿನಗಳ ಕಾಲ ದೇಗುಲದ ಬಾಗಿಲು ಮುಚ್ಚಲಾಗಿತ್ತು. ಆದರೆ, ನಿರ್ಬಂಧಿತ ಪ್ರವೇಶ ಅವಕಾಶ ಸಾಧ್ಯತೆ ಮೂಲಕ ನಿತ್ಯ ಪೂಜೆ ಜಾರಿಯಲ್ಲಿತ್ತು.
ಹಾಗಂತ, ಕೊವಿಡ್ 19 ನಿಯಮಗಳನ್ನು ಪಾಲಿಸುವುದರಲ್ಲಿ ತಿರುಮಲ ತಿರುಪತಿ ದೇವಸ್ಥಾನಂ(ಟಿಟಿಡಿ) ಹಿಂದೆ ಬಿದ್ದಿಲ್ಲ. 65 ವರ್ಷಕ್ಕೂ ಮೇಲ್ಪಟ್ಟ ವೃದ್ಧರು, 10 ಕ್ಕೂ ಕಡಿಮೆ ವಯಸ್ಸಿನ ಮಕ್ಕಳಿಗೆ ಕಡ್ಡಾಯವಾಗಿ ಪ್ರವೇಶ ನಿರ್ಬಂಧಿಸಲಾಗಿದೆ. ಗರ್ಭಿಣಿಯರು, ಅನಾರೋಗ್ಯದಿಂದ ಬಳಲುತ್ತಿರುವವರಿಗೂ ಇದೇ ನಿಯಮ ಜಾರಿಯಲ್ಲಿದೆ.

ಮಾರ್ಚ್ 20ರಂದು ಬಂದ್ ಆಗಿದ್ದ ದೇಗುಲ ಜೂನ್ ತಿಂಗಳಿನಿಂದ ಸಾರ್ವಜನಿಕರ ಪ್ರವೇಶಕ್ಕೆ ಮುಕ್ತವಾಗಿದೆ. ಸಂಕ್ರಾಂತಿ ಸಂದರ್ಭದಲ್ಲಿ ಹೈದರಾಬಾದ್, ಬೆಂಗಳೂರು ಕಡೆಯಿಂದ ವಿಶೇಷ ರೈಲು, ಬಸ್ ವ್ಯವಸ್ಥೆ ಕೂಡಾ ಮಾಡಲಾಗಿದೆ.












Click it and Unblock the Notifications