'ವಿದ್ಯುನ್ಮಾನ ಮತಯಂತ್ರ ಬಳಕೆ ವಿರೋಧಿಸಿ ಸುಪ್ರೀಂ ಮೆಟ್ಟಿಲೇರಲು ತೀರ್ಮಾನ'
ಅಮರಾವತಿ (ಆಂಧ್ರಪ್ರದೇಶ), ಫೆಬ್ರವರಿ 14: ವಿದ್ಯುನ್ಮಾನ ಮತ ಯಂತ್ರ ಬಳಕೆ (ಇವಿಎಂ) ವಿರುದ್ಧ ಸುಪ್ರೀಂ ಕೋರ್ಟ್ ಮೊರೆ ಹೋಗಲು ಕೆಲವು ರಾಜಕೀಯ ಪಕ್ಷಗಳು ತೀರ್ಮಾನಿಸಿವೆ ಎಂದು ಅಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಗುರುವಾರದಂದು ಅಮರಾವತಿಯಲ್ಲಿ ಹೇಳಿದ್ದಾರೆ.
ತೆಲುಗು ದೇಶಂ ಪಕ್ಷದ ನಾಯಕರ ಜತೆಗೆ ನಿತ್ಯದ ಟೆಲಿ ಕಾನ್ಫರೆನ್ಸ್ ನಲ್ಲಿ ಮಾತನಾಡಿದ ಅವರು, ಫೆಬ್ರವರಿ ಹದಿಮೂರನೇ ತಾರೀಕು ನವದೆಹಲಿಯಲ್ಲಿ ಶರದ್ ಪವಾರ್ ಮನೆಯಲ್ಲಿ ನಡೆದ ಹದಿನೈದು ಪಕ್ಷಗಳ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಚಂದ್ರಬಾಬು ನಾಯ್ಡು ಹೇಳಿದ್ದಾರೆ.
ಈ ಬಗ್ಗೆ ಟಿಡಿಪಿಯಿಂದ ನೀಡಲಾದ ಹೇಳಿಕೆಯಲ್ಲಿ ಹೆಚ್ಚಿನ ವಿವರಗಳು ಇಲ್ಲ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ವಿದ್ಯುನ್ಮಾನ ಮತಯಂತ್ರ ಬಳಕೆ ಮಾಡಬಾರದು. ಚುನಾವಣೆ ಆಯೋಗದಿಂದ ಪೇಪರ್ ಬ್ಯಾಲಟ್ ಅನ್ನೇ ಮತ್ತೆ ಬಳಸಬೇಕು ಎಂದು ಟಿಡಿಪಿ ಒತ್ತಾಯ ಮಾಡಿದೆ.

ಇತ್ತೀಚೆಗೆ ಅಮರಾವತಿಗೆ ಬಂದಿದ್ದ ಮುಖ್ಯ ಚುನಾವಣಾ ಆಯುಕ್ತ ಸುನೀಲ್ ಅರೋರಾ, "ಹಲವು ಪಕ್ಷಗಳು" ಇವಿಎಂಗಳ ಬಗ್ಗೆ ಮತ್ತೆ ನಂಬಿಕೆ ವ್ಯಕ್ತಪಡಿಸಿವೆ ಎಂದು ಹೇಳಿದ್ದರು.
ಇನ್ನು ಚಂದ್ರಬಾಬು ನಾಯ್ಡು ತಮ್ಮ ಪಕ್ಷದ ಕಾರ್ಯಕರ್ತರ ಜತೆ ಮಾತನಾಡುತ್ತಾ, ಚುನಾವಣಾಪೂರ್ವ ಮೈತ್ರಿ ಮಾಡಿಕೊಳ್ಳಲು ಹಾಗೂ ಕನಿಷ್ಠ ಸಾಮಾನ್ಯ ಕಾರ್ಯಕ್ರಮದೊಂದಿಗೆ ಕೆಲಸ ಮಾಡಲು ವಿಪಕ್ಷಗಳೆಲ್ಲ ನಿರ್ಧಾರ ಮಾಡಿವೆ ಎಂದು ಹೇಳಿದ್ದಾರೆ.
ದೇಶದಾದ್ಯಂತ ನರೇಂದ್ರ ಮೋದಿ ಆಡಳಿತದ ವಿರುದ್ಧ ವಿರೋಧಿ ಅಲೆ ಇದೆ. ಅಸಮರ್ಥ ವ್ಯಕ್ತಿಗಳ ಕೈಯಲ್ಲಿ ಪ್ರಜಾತಂತ್ರ ವ್ಯವಸ್ಥೆಯು ಅಪಾಯದಲ್ಲಿದೆ. ರಾಷ್ಟ್ರೀಯ ಪಕ್ಷಗಳ ಜತೆಗಿನ ನಮ್ಮ ಮಾತುಕತೆ ಸಫಲವಾಗಿದೆ ಎಂದು ನಾಯ್ಡು ಹೇಳಿದ್ದಾಗಿ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಆದರೆ, ಆಂಧ್ರಪ್ರದೇಶದಲ್ಲಿ ಟಿಡಿಪಿಯು ಕಾಂಗ್ರೆಸ್ ಜತೆಗೆ ಚುನಾವಣೆ ಪೂರ್ವ ಮೈತ್ರಿ ಮಾಡಿಕೊಳ್ಳುತ್ತದೆಯೇ ಎಂಬುದಕ್ಕೆ ಉತ್ತರ ನೀಡಿಲ್ಲ. ಕಾಂಗ್ರೆಸ್ ಮಾತ್ರ ಮೇ ತಿಂಗಳಲ್ಲಿ ನಡೆಯಲಿರುವ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಗಳನ್ನು ಎದುರಿಸುವುದಾಗಿ ಈಗಾಗಲೇ ಘೋಷಣೆ ಮಾಡಿದೆ.












Click it and Unblock the Notifications