ಕೋವಿಡ್19 ಕಾಟ: ಅಹೋಬಿಲಂ ಲಕ್ಷ್ಮಿನರಸಿಂಹ ದೇಗುಲ ಬಂದ್
ಕರ್ನೂಲ್, ಜೂನ್ 22: ಕೊರೊನಾವೈರಸ್ ಕಾಟದಿಂದ ಆಂಧ್ರಪ್ರದೇಶದ ಕಾಣಿಪಾಕಂನ ಶ್ರೀ ಸ್ವಯಂಭು ವರಸಿದ್ಧಿ ವಿನಾಯಕ ಸ್ವಾಮಿ ದೇಗುಲ ಬಾಗಿಲು ಮುಚ್ಚಿದ ಬೆನ್ನಲ್ಲೇ ಇತಿಹಾಸ ಪ್ರಸಿದ್ಧ ಅಹೋಬಿಲಂ ಲಕ್ಷ್ಮಿನರಸಿಂಹ ದೇಗುಲ ಬಂದ್ ಆಗಿದೆ.
ಲಕ್ಷ್ಮಿನರಸಿಂಹ ದೇಗುಲದ ಅರ್ಚಕರೊಬ್ಬರಿಗೆ ಕೊವಿಡ್ 19 ಪಾಸಿಟಿವ್ ಇರುವುದು ಪತ್ತೆಯಾದ ಬೆನ್ನಲ್ಲೇ ದೇಗುಲ ಬಂದ್ ಮಾಡಲು ನಿರ್ಧರಿಸಲಾಗಿದೆ ಎಂದು ಶ್ರೀಅಹೋಬಿಲಂ ಪರಂಪರಾಧೀನ ಶ್ರೀಲಕ್ಷ್ಮಿನರಸಿಂಹ ಸ್ವಾಮಿ ದೇವಸ್ಥಾನಂ ಮಂಡಳಿ ಪ್ರಕಟಿಸಿದೆ. ದೇಗುಲ ಮತ್ತೆ ಯಾವಾಗ ಓಪನ್ ಎಂಬುದರ ಬಗ್ಗೆ ಮಾಹಿತಿ ನೀಡಿಲ್ಲ.
ಅರ್ಚಕರೊಬ್ಬರಿಗೆ ಕೊರೊನಾವೈರಸ್ ಸೋಂಕು ತಗುಲಿರುವ ಬಗ್ಗೆ ಅಹೋಬಿಲಂ ಶ್ರೀಮಠದ ಮುಖ್ಯಸ್ಥರಾದ 46ನೇ ಶ್ರೀ ಜೀಯರ್ ಅವರಿಗೆ ತಿಳಿಸಲಾಗಿದ್ದು, ಕೂಡಲೇ ದೇಗುಲ ಬಂದ್ ಮಾಡಲು ಸೂಚನೆ ಸಿಕ್ಕಿದ್ದರಿಂದ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಇದು ತಾತ್ಕಾಲಿಕ ಕ್ರಮವಾಗಿದ್ದು, ಅರ್ಚಕರಿಗೆ ಸೂಕ್ತ ಚಿಕಿತ್ಸೆಗೆ ಮಠದ ವತಿಯಿಂದ ವ್ಯವಸ್ಥೆ ಕಲ್ಪಿಸಲಾಗಿದೆ. ಭಕ್ತಾದಿಗಳು ಸಹಕರಿಸಬೇಕಾಗಿ ದೇಗುಲದ ವ್ಯವಸ್ಥಾಪಕ ಮಂಡಳಿ ಕೋರಿದೆ.

ದೈನಂದಿನ ದೇವತಾಕಾರ್ಯವನ್ನು ನಿಲ್ಲಿಸದಿರಲು ಮಂಡಳಿ ನಿರ್ಧರಿಸಿದ್ದು, ಪ್ರಧಾನ ಅರ್ಚಕರು ಸೇರಿದಂತೆ ಸಿಬ್ಬಂದಿಗಳಿಗೆ ಸೀಮಿತ ಪ್ರವೇಶ ಅವಕಾಶ ಇರಲಿದೆ. ಭಕ್ತಾದಿಗಳಿಗೆ ಸದ್ಯಕ್ಕೆ ಯಾವುದೇ ಸಮಯದಲ್ಲೂ ಪ್ರವೇಶ ಅವಕಾಶವಿಲ್ಲ ಎಂದು ಮಂಡಳಿ ಹೇಳಿದೆ.
ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿ ಭಾನುವಾರಾಕ್ಕೆ 1294 ಕೊರೊನಾವೈರಸ್ ಸೋಂಕು ಪ್ರಕರಣಗಳು ಪತ್ತೆಯಾಗಿದೆ. ತಿರುಮಲ ತಿರುಪತಿ ದೇವಸ್ಥಾನಂ(ಟಿಟಿಡಿ) ಅಧೀನಕ್ಕೆ ಒಳಪಡುವ ಶ್ರೀಗೋವಿಂದರಾಜ ಸ್ವಾಮಿ ದೇಗುಲವನ್ನು ಬಂದ್ ಮಾಡಲಾಗಿತ್ತು.
ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯ ಕಾಣಿಪಾಕಂನಲ್ಲಿರುವ ಶ್ರೀ ಸ್ವಯಂಭು ವರಸಿದ್ಧಿ ವಿನಾಯಕ ಸ್ವಾಮಿ ದೇಗುಲದ ಭದ್ರತಾ ಸಿಬ್ಬಂದಿಗೆ ಇತ್ತೀಚೆಗೆ ಕೊರೋನಾ ಸೋಂಕು ದೃಢವಾಗಿತ್ತು. ಈ ಹಿನ್ನಲೆಯಲ್ಲಿ ದೇಗುಲವನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿತ್ತು.












Click it and Unblock the Notifications