ಪ್ರಶಸ್ತಿಗೆ ಕಲಾಂ ಬದಲು ಅಪ್ಪನ ಹೆಸರು, ಆಕ್ರೋಶಕ್ಕೆ ಹೆದರಿ ಒಲ್ಲೆ ಎಂದ ಜಗನ್
ಅಮರಾವತಿ, ನವೆಂಬರ್ 05: ಮಾಜಿ ರಾಷ್ಟ್ರಪತಿ ಎಪಿಎ ಅಬ್ದುಲ್ ಕಲಾಂ ಅವರ ಹೆಸರಿನಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದ್ದ ಪ್ರಶಸ್ತಿಯೊಂದರ ಹೆಸರನ್ನು 'ವೈಎಸ್ ಆರ್ ವಿದ್ಯಾ ಪುರಸ್ಕಾರ' ಎಂದು ಬದಲಿಸಲು ಮುಂದಾಗಿದ್ದ ಆಂಧ್ರ ಪ್ರದೇಶ ಸರ್ಕಾರ ಜನರ ಆಕ್ರೋಶಕ್ಕೆ ಮಣಿದು ತನ್ನ ನಿರ್ಧಾರದಿಂದ ಹಿಂದೆಸರಿದಿದೆ.
'ಡಾ. ಎಪಿಜೆ ಅಬ್ದುಲ್ ಕಲಾಂ ಪ್ರತಿಭಾ ವಿದ್ಯಾ ಪುರಸ್ಕಾರ' ಎಂಬ ಹೆಸರಿನಲ್ಲಿ ನೀಡಲಾಗುತ್ತಿದ್ದ ಪ್ರಶಸ್ತಿಯನ್ನು 'ವೈಎಸ್ ಆರ್(ವೈ ಎಸ್ ರಾಜಶೇಖರ ರೆಡ್ಡಿ) ವಿದ್ಯಾ ಪುರಸ್ಕಾರ' ಎಂದು ಬದಲಿಸಲು ಆಂಧ್ರ ಸರ್ಕಾರ ಮುಂದಾಗಿತ್ತು. ಆಗಲೇ ಆ ಕುರಿತು ಪ್ರಕಟಣೆಯನ್ನೂ ಹೊರಡಿಸಿತ್ತು. ಆದರೆ ಸಾಮಾಜಿಕ ಮಾಧ್ಯಮಗಳಲ್ಲಿ ಈ ಕುರಿತು ಭಾರೀ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ತನ್ನ ನಿರ್ಧಾರದಿಂದ ಅದು ಹಿಂದೆ ಸರಿದಿದ್ದು, ಈ ಪ್ರಶಸ್ತಿಯನ್ನು 'ವೈಎಸ್ ಆರ್ ವಿದ್ಯಾ ಪುರಸ್ಕಾರ' ಎಂಬ ಹೆಸರಿನ ಬದಲಿಗೆ 'ಎಪಿಜೆ ಅಬ್ದುಲ್ ಕಲಾಂ ಪ್ರತಿಭಾ ವಿದ್ಯಾ ಪುರಸ್ಕಾರ' ಎಂದು ಮರುನಾಮಕರಣ ಮಾಡಿರುವುದಾಗಿ ಹೊಸ ಪ್ರಕರಟಣೆಯಲ್ಲಿ ಸರ್ಕಾರ ಹೇಳಿದೆ.

ಆಂಧ್ರ ಪ್ರದೇಶ ಮುಖ್ಯಮಂತ್ರಿ ವೈ.ಎಸ್. ಜಗನ್ಮೋಹನ್ ರೆಡ್ಡಿ ಅವರು ತಮ್ಮ ತಂದೆಯ ಹೆಸರಿನಲ್ಲಿ ಈ ಪ್ರಶಸ್ತಿ ನೀಡುವ ಪ್ರಸ್ತಾವಕ್ಕೆ ಮೊದಲು ಸಮ್ಮತಿ ಸೂಚಿಸಿದ್ದರು. ಈ ಪ್ರಶಸ್ತಿಯ ಅಡಿಯಲ್ಲಿ 10 ನೇ ತರಗತಿಯಲ್ಲಿ ಉತ್ತಮ ಪ್ರದರ್ಶನ ತೋರಿದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ, ಪಾರಿತೋಷಕ ಮತ್ತು ವಿದ್ಯಾರ್ಥಿವೇತನವನ್ನು ನೀಡಲಾಗುತ್ತಿತ್ತು.
ಕಲಾಂ ಹೆಸರಿನಿಂದ ವೈಎಸ್ ಆರ್ ಹೆಸರಿಗೆ ಬದಲಿಸಿದ ಸರ್ಕಾರದ ಕ್ರಮವನ್ನು ವಿಪಕ್ಷ ನಾಯಕ ಟಿಡಿಪಿಯ ಎನ್. ಚಂದ್ರಬಾಬು ನಾಯ್ಡು ಅವರೂ ಕಟುವಾಗಿ ವಿರೋಧಿಸಿದ್ದರು.












Click it and Unblock the Notifications