ಮೋದಿ ಎದುರು ನಾನೇ ಬಗ್ಗಿದ್ದೇನೆ... ನನ್ನ ರಾಜ್ಯಕ್ಕಾಗಿ: ನಾಯ್ಡು ಹೊಸ ವರಸೆ!
Recommended Video

ಅಮರಾವತಿ, ಜನವರಿ 02 : 2014ರ ಲೋಕಸಭಾ ಚುನಾವಣೆಯ ನಂತರ ಸ್ನೇಹಿತರಾಗಿದ್ದ ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ನಡುವೆ ಬ್ರೇಕ್ ಅಪ್ ನಂತರ ಶೀತಲ ಸಮರ ಆರಂಭವಾಗಿರುವುದು ಹೊಸ ವಿಷಯವಲ್ಲ.
ಸಿಕ್ಕ ವೇದಿಕೆಯನ್ನೆಲ್ಲ ನರೇಂದ್ರ ಮೋದಿಯವರನ್ನು ಹಳಿಯಲು ಬಳಸಿಕೊಳ್ಳಲು ಯತ್ನಿಸುವ ಚಂದ್ರಬಾಬು ನಾಯ್ಡು ಅವರು ಇದೀಗ ಆಂಧ್ರದ ಜನರನ್ನು ಭಾವನಾತ್ಮಕವಾಗಿ ಸೆಳೆಯುವ ಯತ್ನಕ್ಕೆ ಕೈಹಾಕಿದ್ದಾರೆ. ತಮ್ಮ ರಾಜ್ಯದ ಹಿತಾಸಕ್ತಿಗಾಗಿ ತಾವು ಅವಮಾನವನ್ನೂ ಸಹಿಸಿ ಪ್ರಧಾನಿ ನರೇಂದ್ರ ಮೋದಿಯವರೆದುರು ಮಾತಿಗಿಳಿಯಬೇಕಾಯ್ತು ಎನ್ನುವ ಮೂಲಕ ಜನರ ವಿಶ್ವಾಸ ಗಳಿಸುವ ಯತ್ನ ಮಾಡಿದ್ದಾರೆ.
ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಮೈತ್ರಿಕೂಟದ ವಿರುದ್ಧ ಮಹಾಘಟಬಂಧನವನ್ನು ಒಗ್ಗೂಡಿಸುವ ಮೂಲಕ ಚಂದ್ರಬಾಬು ನಾಯ್ಡು ಅವರು ಸಮರ ಸಾರಿದ್ದಾರೆ. ಆದರೆ ಇದೀಗ 'ನರೇಂದ್ರ ಮೋದಿ ಅವರ ಮುಂದೆ ನಾನೇ ತಲೆಬಾಗಿದ್ದೇನೆ' ಎಂಬ ನಾಯ್ಡು ಅವರ ಹೊಸ ವರಸೆಯ ಹಿಂದಿನ ಮರ್ಮವೇನು?

ನಾನೇ ಬಗ್ಗಿದ್ದೇನೆ!
"ಪ್ರಧಾನಿ ನರೇಂದ್ರ ಮೋದಿ ಅವರ ಅಹಂ ತೃಪ್ತಿ ಪಡಿಸೋಕೆ ನಾನೇ ಹಲವು ಬಾರಿ ಬಗ್ಗಿದ್ದೇನೆ, ಸೋತಿದ್ದೇನೆ. ಅವೆಲ್ಲವೂ ನನ್ನ ರಾಜ್ಯದ ಹಿತಕ್ಕಾಗಿ. ನನ್ನ ರಾಜ್ಯದ ಜನರ ಒಳಿತಿಗಾಗಿ" ಎಂದು ನಾಯ್ಡು ಹೇಳಿದ್ದಾರೆ. ನಾಲ್ಕು ವರ್ಷಗಳ ಕಾಲ ಎನ್ ಡಿಎ ಜೊತೆ ಇದ್ದು ನಾನು ಸಾಕಷ್ಟು ವಿಷಯಗಳಲ್ಲಿ ಅಹಂ ಮರೆತು ಮೋದಿ ಮುಂದೆ ನನ್ನ ರಾಜ್ಯಕ್ಕಾಗಿ ತಲೆಬಾಗಿದ್ದೇನೆ ಎಂದರು.

ಬದಲಾಯ್ತು ನಾಯ್ಡು ವರಸೆ!
ಇಷ್ಟು ದಿನ ಎನ್ ಡಿಎ ಸರ್ಕಾರದ ವಿರುದ್ಧ ಮಾತನಾಡುತ್ತಿದ್ದ ನಾಯ್ಡು, ಇದೀಗ ಆಂಧ್ರಪ್ರದೇಶದ ಜನರನ್ನು ಸೆಳೆಯುವ ಬಗ್ಗೆ ಯೋಚನೆ ಮಾಡುತ್ತಿರುವಂತಿದೆ. ಅದಕ್ಕೆಂದೇ 'ರಾಜ್ಯಕ್ಕಾಗಿ ನಾನು ಅಹಂ ಮರೆತು ತಲೆಬಾಗಿದ್ದೇನೆ' ಎಂದು 'ರಾಜ್ಯಕ್ಕಾಗಿ' ಎಂಬುದನ್ನು ಒತ್ತಿ ಹೇಳಿದ್ದಾರೆ. ಕೇವಲ ಕೇಂದ್ರ ಸರ್ಕಾರದ ವೈಫಲ್ಯಗಳನ್ನು ಹೇಳುತ್ತ ಕೂತರೆ ಮತಗಳಿಸೋದು ಸುಲಭವಿಲ್ಲ ಎಂಬುದನ್ನು ಅರ್ಥಮಾಡಿಕೊಂಡ ನಾಯ್ಡು, ಜನರನ್ನು ಭಾವನಾತ್ಮಕವಾಗಿ ಸೆಳೆಯುಬವ ಪ್ರಯತ್ನದ ಫಲವೇ ಈ ಹೇಳಿಕೆ ಎನ್ನಬಹುದು.

ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಿ
ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಿ ಎಂಬ ಬೇಡಿಕೆ ಈಡೇರದ ಕಾರಣಕ್ಕಾಗಿಯೇ ಎನ್ ಡಿಎ ಮೈತ್ರಿಕೂಟದಿಂದ ಹೊರಬಂದ ನಾಯ್ಡು, ಇದೀಗ ಮಹಾಘಟಬಂಧನದ ಮುಂದೆಯೂ ಅದೇ ಬೇಡಿಕೆ ಇಡಲು ಮುಂದಾಗಿದ್ದಾರೆ. ಮಹಾಘಟಬಂಧನ ಸರ್ಕಾರ ಅಧಿಕಾರಕ್ಕೆ ಬಂದರೆ ನಾಯ್ಡು ಬೇಡಿಕೆ ಆಂಧ್ರಕ್ಕೆ ವಿಶೇಷ ಸ್ಥಾನಮಾನ ನೀಡಿ ಎಂಬುದೇ ಆಗಿರುತ್ತದೆ. ಒಟ್ಟಿನಲ್ಲಿ ಆಂಧ್ರದ ಜನರಿಗಾಗಿ ಕೇಂದ್ರ ಸರ್ಕಾರದ ನಿಷ್ಟುರ ಕಟ್ಟಿಕೊಳ್ಳುವುದಕ್ಕೂ ತಾನು ಸಿದ್ಧ ಎಂಬ ಭಾವನೆಯನ್ನು ಸೃಷ್ಟಿಸಲು ನಾಯ್ಡು ಶತಾಯಗತಾಯ ಹೋರಾಡುತ್ತಿರುವಂತಿದೆ.

ಲೋಕಸಮರದೊಂದಿಗೆ ಆಂಧ್ರದಲ್ಲೂ ಚುನಾವಣೆ!
ಮೇ-ಜೂನ್ ತಿಂಗಳಿನಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಯ ಸಮಯದಲ್ಲೇ ಆಂಧ್ರಪ್ರದೇಶದಲ್ಲೂ ವಿಧಾನಸಭೆ ಚುನಾವಣೆ ನಡೆಯಲಿದೆ. ಆದ್ದರಿಂದ ಈಗಾಗಲೇ ನಾಯ್ಡು ಅವರು ಪ್ರಚಾರ ಆರಂಭಿಸಿದ್ದು, ಜನ್ಮಭೂಮಿ-ಮಾ ವೂರು ಎಂಬ ಕಾರ್ಯಕ್ರಮದ ಮೂಲಕ ಜನಸಂಪರ್ಕದ ಉದ್ದೇಶ ಹೊಂದಿದ್ದಾರೆ.












Click it and Unblock the Notifications