ಚುನಾವಣೆ ಆಯೋಗವು ದೇಶದಲ್ಲೇ 'ಅಪ್ರಯೋಜಕ ಸಂಸ್ಥೆ': ಚಂದ್ರಬಾಬು ನಾಯ್ಡು
ಅಮರಾವತಿ (ಆಂಧ್ರಪ್ರದೇಶ), ಏಪ್ರಿಲ್ 12: ಚುನಾವಣೆ ಆಯೋಗವು ದೇಶದ "ಅಪ್ರಯೋಜಕ ಸಂಸ್ಥೆ" ಮತ್ತು "ಬಿಜೆಪಿಯ ಶಾಖಾ ಕಚೇರಿ" ಎಂದು ತೆಲುಗು ದೇಶಂ ಪಾರ್ಟಿ ಅಧ್ಯಕ್ಷ ಹಾಗೂ ಆಂಧ್ರ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ವಾಗ್ದಾಳಿ ನಡೆಸಿದ್ದಾರೆ. ಆಂಧ್ರಪ್ರದೇಶದಲ್ಲಿ ಯಾವುದೇ ತೊಂದರೆ ಇಲ್ಲದೆ ಚುನಾವಣೆ ನಡೆಸಲು ಆಯೋಗ ವಿಫಲವಾಗಿದೆ ಎಂದು ದೂರಿದ್ದಾರೆ.
175 ಸದಸ್ಯ ಬಲದ ಆಂಧ್ರಪ್ರದೇಶ ವಿಧಾನಸಭೆ ಹಾಗೂ 25 ಲೋಕಸಭಾ ಕ್ಷೇತ್ರಕ್ಕೆ ಗುರುವಾರ ಚುನಾವಣೆ ನಡೆದಿದೆ. ವೈಎಸ್ ಆರ್ ಕಾಂಗ್ರೆಸ್ ಹಾಗೂ ಆಡಳಿತಾರೂಢ ಟಿಡಿಪಿ ಜತೆಗೆ ಭಾರೀ ಪೈಪೋಟಿ ಕಂಡಿದೆ.
"ನನ್ನ ನಾಲ್ಕು ದಶಕಗಳ ರಾಜಕೀಯ ಜೀವನದಲ್ಲಿ ಇಂಥ ಸಂಸ್ಥೆಯನ್ನು ನೋಡಿಲ್ಲ. ಆಯೋಗವು ಸಂಪೂರ್ಣವಾಗಿ ಆಡಳಿತಾರೂಢ ಬಿಜೆಪಿ ಕೈಯಲ್ಲಿದೆ. ಯಾವ ಸಂಸ್ಥೆಯು ಟಿ.ಎನ್.ಶೇಷನ್ ಅವರಿಂದ ನಡೆಯಿತೋ ಅಂಥ ಸಂಸ್ಥೆಯು ಪ್ರಧಾನಮಂತ್ರಿ ಅವರ ಕೈಗೊಂಬೆ ಆಗಿದೆ" ಎಂದು ಅಮರಾವತಿಯಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ನಾಯ್ಡು ಆರೋಪಿಸಿದ್ದಾರೆ.

ಯಾರಾದರೂ ಸ್ಪರ್ಧಿಸಲು ಬಯಸಿದರೆ, ಅವರು ಶಾಸಕರಾಗಲು ವೇದಿಕೆಯನ್ನೂ ಕೂಡ ಚುನಾವಣೆ ಆಯೋಗ ಒದಗಿಸಿಕೊಡಬಹುದು; ಒಂದು ವೇಳೆ ಐದು ಕೋಟಿ ರುಪಾಯಿ ಲಂಚ ನೀಡಿದರೆ ಅದಕ್ಕೂ ಸಿದ್ಧರಾಗುತ್ತಾರೆ ಎಂದು ಆರೋಪಿಸಿದ್ದಾರೆ.
ತಮ್ಮ ಪಕ್ಷದ ಸಂಸದರು ಹಾಗೂ ಸಚಿವರ ಜತೆಗೆ ಶನಿವಾರ ನವದೆಹಲಿಗೆ ತೆರಳಿದ್ದಾರೆ. ಮತ ಎಣಿಕೆಗೆ ವಿವಿ ಪ್ಯಾಟ್ ಗಳ ಸಂಖ್ಯೆ ಏರಿಸುವ ವಿಚಾರವಾಗಿ ಸುಪ್ರೀಂ ಕೋರ್ಟ್ ನಲ್ಲಿ ಪರಿಶೀಲನಾ ಅರ್ಜಿ ಸಲ್ಲಿಸಲಿದ್ದಾರೆ. ಈಚೆಗೆ ಸುಪ್ರೀಂ ಕೋರ್ಟ್ ಚುನಾವಣೆ ಆಯೋಗಕ್ಕೆ ನಿರ್ದೇಶಿಸಿ, ಐದು ಪರ್ಸೆಂಟ್ ವಿವಿ ಪ್ಯಾಟ್ ಗಳನ್ನು ಲೆಕ್ಕ ಹಾಕಲು ತಿಳಿಸಿತ್ತು. ಈ ಬಗ್ಗೆ ನಾಯ್ಡು ಮತ್ತು ಇತರ ಇಪ್ಪತ್ತೊಂದು ಪಕ್ಷಗಳು ಅರ್ಜಿ ಸಲ್ಲಿಸಿದ್ದವು.
ಬ್ಯಾಲಟ್ ಪೇಪರ್ ಬಳಸಿ ಚುನಾವಣೆ ನಡೆಸಲು ಒತ್ತಡ ಹೇರುವ ನಿಟ್ಟಿನಲ್ಲಿ ರಾಷ್ಟ್ರೀಯ ನಾಯಕರು ಸಹ ಬೆಂಬಲ ನೀಡುವಂತೆ ಕೋರಲು ನಾಯ್ಡು ನಿರ್ಧರಿಸಿದ್ದಾರೆ. ಅಗತ್ಯ ಬಿದ್ದಲ್ಲಿ ಚುನಾವಣೆ ಆಯೋಗದ ಮುಂದೆ ಧರಣಿ ನಡೆಸಲು ಸಿದ್ಧವಿರುವುದಾಗಿ ಹೇಳಿದ್ದಾರೆ.
ಅಷ್ಟೊಂದು ಇವಿಎಂಗಳು ದುರಸ್ತಿ ಆಗಿದ್ದು ಹೇಗೆ? ಅದನ್ನು ಸರಿಪಡಿಸಲು ಕಳುಹಿಸಿದವರು ಯಾರು? ಆವರ ಅರ್ಹತೆ ಏನು? ಅವರನ್ನು ನೀವು ನೇಮಿಸಿದ್ದಿರಾ? ಆ ಅಧಿಕಾರ ನಿಮಗೆ ಇದೆಯಾ? ಸರಿಪಡಿಸುವ ನೆಪದಲ್ಲಿ ಅವರು ಇವಿಎಂ ತಿರುಚಿಲ್ಲ ಅನ್ನೋದಿಕ್ಕೆ ಖಾತ್ರಿ ಏನು ಎಂದು ಚಂದ್ರಬಾಬು ನಾಯ್ಡು ಪ್ರಶ್ನಿಸಿದ್ದಾರೆ.
ಆಂಧ್ರಪ್ರದೇಶದಲ್ಲಿ ಚುನಾವಣೆ ವೇಳೆ ನಡೆದ ಹಿಂಸಾಚಾರದಲ್ಲಿ ಇಬ್ಬರು ಮೃತಪಟ್ಟಿದ್ದಾರೆ. "ಜನರು ಈ ಹಿಂಸಾಚಾರದ ವಿರುದ್ಧ ನಿಲ್ಲುತ್ತಾರೆ. ನಮ್ಮ ಪರವಾಗಿ ಮತ ಹಾಕುತ್ತಾರೆ" ಎಂಬ ವಿಶ್ವಾಸವನ್ನು ನಾಯ್ಡು ವ್ಯಕ್ತಪಡಿಸಿದ್ದಾರೆ.












Click it and Unblock the Notifications