ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡುವವರಿಗೆ ಲಸಿಕೆ, ಕೊರೊನಾ ನೆಗೆಟಿವ್ ಪ್ರಮಾಣಪತ್ರ ಕಡ್ಡಾಯ
ಅಮರಾವತಿ, ಸೆಪ್ಟೆಂಬರ್ 24: ತಿರುಪತಿ ತಿರುಮಲ ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತಾದಿಗಳೆಲ್ಲರಿಗೂ ಕೊರೊನಾ ಲಸಿಕೆ ಪ್ರಮಾಣಪತ್ರ ಅಥವಾ ನೆಗೆಟಿವ್ ಆರ್ಟಿಪಿಸಿಆರ್ ಪರೀಕ್ಷಾ ವರದಿಯನ್ನು ಕಡ್ಡಾಯಗೊಳಿಸಲಾಗಿದೆ ಎಂದು ತಿರುಮಲ ತಿರುಪತಿ ದೇವಸ್ಥಾನಗಳ (ಟಿಟಿಡಿ) ಅಧ್ಯಕ್ಷ ವೈವಿ ಸುಬ್ಬಾರೆಡ್ಡಿ ಘೋಷಿಸಿದ್ದಾರೆ.
ಕೊರೊನಾ ಲಸಿಕೆಯ ಎರಡೂ ಡೋಸ್ಗಳನ್ನು ಪಡೆದ ಯಾತ್ರಿಕರಿಗೆ ಮಾತ್ರ ಪ್ರವೇಶ ಕಲ್ಪಿಸಲಾಗುವುದು. ಇಲ್ಲವೆಂದರೆ 72 ಗಂಟೆ ಮುಂಚಿನ ಆರ್ಟಿಪಿಸಿಆರ್ ಪರೀಕ್ಷಾ ವರದಿ ಹೊಂದಿರಬೇಕು ಎಂದು ತಿಳಿಸಲಾಗಿದೆ.
ಆನ್ಲೈನ್ ವಿಶೇಷ ಪ್ರವೇಶ ಟಿಕೆಟ್ ಅಥವಾ ಕಾಯ್ದಿರಿಸಿದ ಸರ್ವ ದರ್ಶನ (ಎಸ್ಎಸ್ಡಿ) ಟೋಕನ್ಗಳೊಂದಿಗೆ ಬರುವ ಭಕ್ತರು (ಯಾತ್ರಿಕರಿಗೆ ಉಚಿತ ದರ್ಶನಕ್ಕೆ ನೀಡಲಾಗುತ್ತದೆ) ಎರಡು ಡೋಸ್ ಲಸಿಕೆ ಪ್ರಮಾಣ ಪತ್ರ ಹೊಂದಿರಬೇಕು ಇಲ್ಲವೇ ನೆಗೆಟಿವ್ ಕೊರೊನಾ ಪರೀಕ್ಷಾ ವರದಿ ಹೊಂದಿರಬೇಕು ಎಂದು ನಿಯಮ ಹಾಕಲಾಗಿದೆ. ದರ್ಶನದ ನಿಗದಿತ ದಿನಕ್ಕೆ ಮೂರು ದಿನಗಳ ಮೊದಲು ಪರೀಕ್ಷೆ ಮಾಡಿಸಿರಬೇಕು ಎಂದು ರೆಡ್ಡಿ ವಿವರಿಸಿದ್ದಾರೆ.

ಕೊರೊನಾ ಎರಡನೇ ಅಲೆ ಕಾಣಿಸಿಕೊಂಡ ನಂತರ ಏಪ್ರಿಲ್ನಲ್ಲಿ ತಿರುಪತಿಯಲ್ಲಿ ತಿಮ್ಮಪ್ಪನ ಉಚಿತ ದರ್ಶನ ಹಾಗೂ ಪೂಜೆಯನ್ನು ರದ್ದುಗೊಳಿಸಲಾಗಿತ್ತು. ಇತ್ತೀಚೆಗಷ್ಟೇ ವೈವಿ ಸುಬ್ಬಾರೆಡ್ಡಿಯವರು ಶೀಘ್ರವೇ ಭಕ್ತರಿಗೆ ಉಚಿತ ದರ್ಶನ ವ್ಯವಸ್ಥೆ ಕಲ್ಪಿಸುವುದಾಗಿ ತಿಳಿಸಿದ್ದರು.
ಅದರಂತೆ ಸೆಪ್ಟೆಂಬರ್ 9ರಿಂದ ಟಿಟಿಡಿ ಉಚಿತ ದರ್ಶನಕ್ಕಾಗಿ ಎಸ್ಎಸ್ಡಿ ಟೋಕನ್ಗಳನ್ನು ನೀಡಲು ಆರಂಭಿಸಿತು. ಮೊದಲಿಗೆ ಚಿತ್ತೂರು ಜಿಲ್ಲೆಯ ಭಕ್ತರಿಗೆ ಅವಕಾಶ ನೀಡಲಾಗಿದ್ದು ಪ್ರತಿದಿನ 2 ಸಾವಿರ ಟೋಕನ್ ವಿತರಿಸಿ ದೇಗುಲಕ್ಕೆ ಭೇಟಿ ನೀಡಲು ಅವಕಾಶ ಕಲ್ಪಿಸಲಾಗಿದೆ. ಬೆಳಗ್ಗೆ 6 ಗಂಟೆಯಿಂದಲೇ ಟೋಕನ್ ವಿತರಣೆ ನಡೆಯುತ್ತಿದೆ. ಶ್ರೀನಿವಾಸ ಕಾಂಪ್ಲೆಕ್ಸ್ ನ ಕೌಂಟರ್ ಗಳಲ್ಲಿ ಟೋಕನ್ ಸಿಗಲಿದೆ. ಈ ಮೊದಲು ಸರ್ವದರ್ಶನಕ್ಕೆ 8 ಸಾವಿರ ಟೋಕನ್ ವಿತರಿಸಲಾಗುತ್ತಿತ್ತು.
ಕೊರೊನಾ ಸೋಂಕಿನಿಂದಾಗಿ ಸುಮಾರು ಒಂದೂವರೆ ವರ್ಷಗಳ ಕಾಲ ದೇವಾಲಯ ಬಂದ್ ಆಗಿತ್ತು, ಮಧ್ಯೆ ಮಧ್ಯೆ ಕೆಲವು ಬಾರಿ ತೆರೆಯಲಾಗಿತ್ತು. ವಿಐಪಿಗಳಿಗೆ ಮಾತ್ರ ಅವಕಾಶ ಕೊಟ್ಟಿತ್ತು. ಈ ಮೊದಲು ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿರುವ ವಿಶ್ವವಿಖ್ಯಾತ ತಿರುಪತಿ ತಿರುಮಲ ದೇವಾಲಯವು ತಿಮ್ಮಪ್ಪನ ದರ್ಶನ ಪಡೆಯಲು ಭಕ್ತರಿಗಾಗಿ ವಿಶೇಷ ಟಿಕೆಟ್ ಬಿಡುಗಡೆ ಮಾಡಿತ್ತು.

ವಿಶೇಷ ದರ್ಶನ ಪಡೆಯಬಯಸುವವರು 300 ರೂಪಾಯಿ ನೀಡಿ ಈ ಟಿಕೆಟ್ ಪಡೆದುಕೊಳ್ಳಬೇಕು. ಪ್ರತಿ ದಿನ 3 ಸಾವಿರ ಟಿಕೆಟ್ಗಳನ್ನು ತಿರುಪತಿ ತಿರುಮಲ ದೇವಾಲಯದ ಆಡಳಿತ ಮಂಡಳಿ ಬಿಡುಗಡೆ ಮಾಡುತ್ತಿದೆ.
ನಂತರ ಕೊರೊನಾ ಕಾರಣವಾಗಿ ಟಿಟಿಡಿ ಆನ್ಲೈನ್ ಟಿಕೆಟಿಂಗ್ ವ್ಯವಸ್ಥೆಯನ್ನು ಆರಂಭಿಸಿದೆ. ಟಿಕೆಟ್ಗಾಗಿ ಜನಸಂದಣಿ ಸೇರುವುದನ್ನು ತಪ್ಪಿಸಿ ಈ ಮೂಲಕ ಕೊರೊನಾ ಹರಡುವಿಕೆ ತಪ್ಪಿಸುವ ಪ್ರಯತ್ನ ಇದಾಗಿದೆ.
ಮೂರು ದಿನಗಳ ಹಿಂದಷ್ಟೇ ತಿರುಮಲ ತಿರುಪತಿ ದೇವಸ್ಥಾನಮ್ ಸಮಿತಿ (ಟಿಟಿಡಿ) ವೆಂಕಟೇಶ್ವರ ದೇವಸ್ಥಾನದಲ್ಲಿ ದೇವರ ದರ್ಶನದ ಅವಧಿಯನ್ನು ರಾತ್ರಿ 11.30ರವರೆಗೆ ವಿಸ್ತರಿಸಿದೆ.
ಭಕ್ತರಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಟಿಟಿಡಿ ದರ್ಶನದ ಅವಧಿಯನ್ನು ಹೆಚ್ಚಿಸಿದೆ. ತಿರುಪತಿ ದೇವಸ್ಥಾನದಲ್ಲಿ ನೀಡುವ ಉಚಿತ ದರ್ಶನದ ಟೋಕನ್ಗಳ ಪ್ರಮಾಣವನ್ನು ಹೆಚ್ಚಿಸುವುದಾಗಿ ಟಿಟಿಡಿಯ ಅಧ್ಯಕ್ಷ ವೈ.ವಿ.ಸುಬ್ಬಾರೆಡ್ಡಿ ತಿಳಿಸಿದ್ದಾರೆ. ಈವರೆಗೆ 10 ಗಂಟೆಗೆ ದರ್ಶನದ ಅವಧಿ ಮುಕ್ತಾಯವಾಗುತ್ತಿತ್ತು. ಇನ್ನು 11.30ರವರೆಗೆ ದರ್ಶನ ಭಾಗ್ಯ ಭಕ್ತಾದಿಗಳಿಗೆ ಲಭಿಸಲಿದೆ. ನಂತರ ಏಕಾಂತ ಸೇವೆ ನಡೆಯಲಿದ್ದು, ರಾತ್ರಿ 12 ಗಂಟೆಗೆ ದೇಗುಲದ ಬಾಗಿಲು ಮುಚ್ಚಲಾಗುತ್ತದೆ ಎಂದು ತಿಳಿಸಿದ್ದಾರೆ.
ಇದೀಗ ತಿಮ್ಮಪ್ಪನ ದರ್ಶನನ ಪಡೆಎಯಲು ಭಕ್ತಾದಿಗಳೆಲ್ಲರಿಗೂ ಕೊರೊನಾ ಲಸಿಕೆ ಪ್ರಮಾಣಪತ್ರ ಅಥವಾ ನೆಗೆಟಿವ್ ಆರ್ಟಿಪಿಸಿಆರ್ ಪರೀಕ್ಷಾ ವರದಿಯನ್ನು ಕಡ್ಡಾಯಗೊಳಿಸಲಾಗಿದೆ ಎಂದು ಸುಬ್ಬಾರೆಡ್ಡಿ ಘೋಷಿಸಿದ್ದಾರೆ.












Click it and Unblock the Notifications