ತಿರುಮಲ ಬಸ್ ಟಿಕೆಟ್ ನಲ್ಲಿ ಕ್ರೈಸ್ತ ಮತ ಪ್ರಚಾರ, ಬಿಜೆಪಿ ಆಕ್ರೋಶ
ತಿರುಮಲ, ಆಗಸ್ಟ್ 23: ಹಿಂದೂ ದೇಗುಲಗಳ ಜಮೀನಿನ ಮೇಲೆ ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಕಣ್ಣು ಹಾಕಿದ್ದಾರೆ ಎಂಬ ಆರೋಪದ ನಡುವೆ, ಹೊಸದೊಂದು ವಿವಾದ ಎದ್ದು ಬಂದಿದೆ. ಹಾಗೆ ನೋಡಿದರೆ ಇದು ತುಂಬಾ ಹಳೆ ಸಂಶಯ ಹಾಗೂ ವಿವಾದ. ಜಗನ್ ಅವರು ಪರೋಕ್ಷವಾಗಿ ಶ್ರೀಮಂತ ದೇಗುಲ ತಿರುಮಲ ತಿರುಪತಿ ದೇವಸ್ಥಾನ ಮಂಡಳಿಯಲ್ಲಿ ಕ್ರೈಸ್ತರನ್ನು ಕೂರಿಸುತ್ತಾರೆ ಎಂಬ ಅಪವಾದವಿದೆ.
ಈ ಬಗ್ಗೆ ದೊಡ್ಡ ಚರ್ಚೆಯಾಗಿ, ಹಾಲಿ ಟಿಟಿಡಿ ಮುಖ್ಯಸ್ಥ ಸುಬ್ಬಾರೆಡ್ಡಿ ಅವರು ಸಮಜಾಯಿಷಿ ನೀಡಿದ್ದು ಆಯ್ತು, ಆದರೆ, ಈಗ ತಿರುಮಲದಲ್ಲಿ ಸಂಚರಿಸುವ ಆಂಧ್ರಪ್ರದೇಶ ಸರ್ಕಾರದ ಸಾರಿಗೆ ಬಸ್ ಗಳ ಟಿಕೆಟ್ ನಲ್ಲಿ ಕ್ರೈಸ್ತ ಮತ ಪ್ರಚಾರ ನಡೆಯುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
ಆರ್ಟಿಸಿ ಬಸ್ ಟಿಕೆಟ್ಗಳ ಹಿಂದೆ ಕ್ರೈಸ್ತ ಮತ ಪ್ರಚಾರದ ವಾಕ್ಯಗಳನ್ನು ಹಾಕಲಾಗಿದೆ ಎಂದು ಬಿಜೆಪಿ ಟೀಕಿಸಿದೆ. ಟಿಟಿಡಿಯ ಪಾವಿತ್ರ್ಯಕ್ಕೆ ಸರ್ಕಾರಿ ಅಧಿಕಾರಿಗಳು ಹಾನಿ ಮಾಡುತ್ತಿದ್ದಾರೆ ಎಂದು ಭಕ್ತರು ಕೋಪಗೊಂಡಿದ್ದಾರೆ. ಸಾರಿಗೆ ಸಂಸ್ಥೆ ಎದುರು ಪ್ರತಿಭಟನೆ ನಡೆಸಿದ್ದಾರೆ.

ತಿರುಮಲ ಬಸ್ ನಿಲ್ದಾಣದಲ್ಲಿರುವ ಕೌಂಟರ್ನಲ್ಲಿ ಗುರುವಾರ ಬೆಳಿಗ್ಗೆ ನೀಡಲಾದ ಟಿಕೆಟ್ಗಳ ಹಿಂಭಾಗದಲ್ಲಿ ಹಜ್ ಮತ್ತು ಜೆರುಸಲೆಮ್ ತೀರ್ಥಯಾತ್ರೆಯ ಪ್ರಕಟಣೆಯನ್ನು ಮುದ್ರಿಸಲಾಗಿದೆ. ಟಿಕೆಟ್ನ ಹಿಂಭಾಗದಲ್ಲಿ ಜಾಹೀರಾತನ್ನು ನೋಡಿದ ಕೆಲವು ಭಕ್ತರು ಆರ್ಟಿಸಿ ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ. ಆದರೆ, ನಮ್ಮ ಟಿಕೆಟ್ ನಲ್ಲಿ ಯಾವುದೇ ಜಾಹೀರಾತು ಇರುವುದಿಲ್ಲ, ಇದು ಬೇರೆ ಡಿಪೋದಿಂದ ಬಸ್ ಟಿಕೆಟ್ ಆಗಿದ್ದು, ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಆರ್ಟಿಸಿ ಡಿಪೋ ವ್ಯವಸ್ಥಾಪಕರು ತಿಳಿಸಿದ್ದಾರೆ.
"ಈ ವಿಷಯದಲ್ಲಿ ಟಿಟಿಡಿ ಹಾಗೂ ಆರ್ ಟಿಸಿ ಅಧಿಕಾರಿಗಳು ಅಪರಾಧಿಗಳಾಗಿದ್ದು, ಹಿಂದೂ ಧರ್ಮ ಕ್ಷೇತ್ರಗಳಲ್ಲಿ ಅನ್ಯಮತ ಪ್ರಚಾರಕ್ಕೆ ಅಸ್ಪದವಿಲ್ಲ ಎಂಬ ಕಾನೂನನ್ನು ತರಲಾಗಿದೆ, ಈ ರೀತಿ ಪ್ರಚಾರ ನಿರತರಿಗೆ ದಂಡ ಹಾಗೂ ಜೈಲುಶಿಕ್ಷೆ ವಿಧಿಸಬಹುದು ಎಂದು ವೈಎಸ್ ರಾಜಶೇಖರ ರೆಡ್ಡಿ ಹೇಳಿದ್ದರು, ಆದರೆ, ಈಗ ಹಿಂದುಗಳ ಪವಿತ್ರ ದೇಗುಲಗಳನ್ನು ಗುರಿಯಾಗಿಸಲಾಗಿದೆ. ಟಿಟಿಡಿಯಲ್ಲಿ ಇಂದು ನಡೆದಿರುವ ವಿಷಯ ಮಾಧ್ಯಮ, ಸಾಮಾಜಿಕ ಜಾಲ ತಾಣಗಳ ಮೂಲಕ ಟಿಟಿಡಿಗೆ ತಿಳಿದು ಬಂದಿದೆ ಎಂಬುದು ಅಚ್ಚರಿಯ ಸಂಗತಿ" ಎಂದು ಪ್ರತಿಭಟನಾಕಾರರು ಹೇಳಿದ್ದಾರೆ.












Click it and Unblock the Notifications