ಟಿಡಿಪಿ ಕಚೇರಿಯಲ್ಲಿ 'ಶಪಥ'ಗೈದು ಹೊರನಡೆದ ಚಂದ್ರಬಾಬು ನಾಯ್ಡು
ಅಮರಾವತಿ, ನ 19: ಈ ವರ್ಷ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಆಡಳಿತಾರೂಢ ವೈಎಸ್ಆರ್ ಕಾಂಗ್ರೆಸ್ ಪಕ್ಷ ಪ್ರಾಬಲ್ಯವನ್ನು ಮುಂದುವರಿಸುವ ಮೂಲಕ, ತೆಲುಗುದೇಶಂ ಪಾರ್ಟಿ ಜನಪ್ರಿಯತೆಯನ್ನು ಕಳೆದುಕೊಳ್ಳುತ್ತಿದೆ.
ಎರಡು ದಿನಗಳ ಹಿಂದೆ ಹೊರಬಿದ್ದ ಫಲಿತಾಂಶದಲ್ಲಂತೂ ಟಿಡಿಪಿ ಹೀನಾಯವಾಗಿ ಮುಗ್ಗರಿಸಿತ್ತು. ಎಷ್ಟರ ಮಟ್ಟಿಗೆ ಚಂದ್ರಬಾಬು ನಾಯ್ಡುಗೆ ಹಿನ್ನಡೆಯೆಂದರೆ, ತನ್ನ ರಾಜಕೀಯ ಕರ್ಮಭೂಮಿ ಕುಪ್ಪಂ ಮುನ್ಸಿಪಾಲಿಟಿ ಚುನಾವಣೆಯಲ್ಲೂ ಟಿಡಿಪಿ ಸೋತಿತ್ತು.
ಅಂದು ಕಣ್ಣೀರು ಹಾಕಿದ್ದ ಚಂದ್ರಬಾಬು ನಾಯ್ಡು ಇಂದು ಮತ್ತೆ ಪಕ್ಷದ ಕಚೇರಿಯಲ್ಲಿ ಕಾರ್ಯಕರ್ತರ ಮುಂದೆ ಭಾವೋದ್ವೇಗಕ್ಕೆ ಒಳಗಾಗಿ ಕಣ್ಣೀರಧಾರೆಯನ್ನೇ ಹರಿಸಿದ್ದಾರೆ. ವೈಯಕ್ತಿಕವಾಗಿ ತನಗೆ ಮತ್ತು ಕಾರ್ಯಕರ್ತರಿಗೆ ವೈಎಸ್ಆರ್ ಪಕ್ಷದಿಂದ ಆಗುತ್ತಿರುವ ಅವಮಾನದ ಬಗ್ಗೆ ಸಭೆಯಲ್ಲಿ ವಿವರಿಸಿದ್ದಾರೆ.
ಇದೇ ಮೊದಲ ಬಾರಿಗೆ ನಡೆದ ಚಿತ್ತೂರು ಜಿಲ್ಲೆಯ ಕುಪ್ಪಂ ಮುನ್ಸಿಪಾಲಿಟಿ ಚುನಾವಣೆಯಲ್ಲಿ ವೈಎಸ್ಆರ್ ಪಕ್ಷ, 25 ವಾರ್ಡುಗಳ ಪೈಕಿ, ಒಬ್ಬರ ಅವಿರೋಧ ಆಯ್ಕೆ ಸೇರಿದಂತೆ ಇಪ್ಪತ್ತು ಕ್ಷೇತ್ರದಲ್ಲಿ ಗೆಲುವು ಸಾಧಿಸಿತ್ತು. ಟಿಡಿಪಿ ಕೇವಲ ಐದು ಕ್ಷೇತ್ರದಲ್ಲಿ ಮಾತ್ರ ಗೆಲುವು ಕಂಡಿತ್ತು. ಇದು ಚಂದ್ರಬಾಬು ನಾಯ್ಡು ವರ್ಚಸ್ಸಿಗೆ ಭಾರೀ ಹಿನ್ನಡೆ ಎಂದೇ ವ್ಯಾಖ್ಯಾನಿಸಲಾಗಿತ್ತು. ಟಿಡಿಪಿ ಕಚೇರಿಯಲ್ಲಿ ಶಪಥಗೈದು ಹೊರನಡೆದ ಚಂದ್ರಬಾಬು ನಾಯ್ಡು, ಮುಂದೆ ಓದಿ...

ರಾಜಧಾನಿಯ ತೆಲುಗುದೇಶಂ ಕಚೇರಿಯಲ್ಲಿ ಪಕ್ಷದ ಮುಖಂಡರ ಸಭೆ
ರಾಜಧಾನಿಯ ತೆಲುಗುದೇಶಂ ಕಚೇರಿಯಲ್ಲಿ ಪಕ್ಷದ ಮುಖಂಡರ ಸಭೆಯನ್ನು ಇಂದು ಚಂದ್ರಬಾಬು ನಾಯ್ಡು ನಡೆಸಿದ್ದಾರೆ. "ನನ್ನ ಸುದೀರ್ಘ ರಾಜಕೀಯ ಜೀವನದಲ್ಲಿ ಇಂತಹ ಸೋಲು, ಅವಮಾನವನ್ನು ಎಂದೂ ಎದುರಿಸಲಿಲ್ಲ. ಹಲವು ವರ್ಷಗಳ ಕಾಲ ಮುಖ್ಯಮಂತ್ರಿ ಮತ್ತು ವಿರೋಧ ಪಕ್ಷದ ನಾಯಕನಾಗಿದ್ದೆ. ನಾನು ಎಲ್ಲರಿಗೂ ಗೌರವ ಕೊಡುತ್ತಿದ್ದೆ, ವೈ.ಎಸ್.ರಾಜಶೇಖರ ರೆಡ್ಡಿ ಕೂಡಾ ನನಗೆ ಮರ್ಯಾದೆಯನ್ನು ನೀಡುತ್ತಿದ್ದರು. ಆದರೆ, ಅಂತಹ ರಾಜಕಾರಣ ಈಗಿಲ್ಲ"ಎಂದು ನಾಯ್ಡು ಬೇಸರಿಸಿಕೊಂಡರು.

ಮತ್ತೆ ನಾನು ಮುಖ್ಯಮಂತ್ರಿ ಆಗುವವರೆಗೆ ಆಂಧ್ರ ಪ್ರದೇಶದ ಅಸೆಂಬ್ಲಿಗೆ ಕಾಲಿಡುವುದಿಲ್ಲ
"ಅಸೆಂಬ್ಲಿಯಲ್ಲಂತೂ ವೈಎಸ್ಆರ್ ಪಕ್ಷದ ಶಾಸಕರು ನನ್ನ ವಿರುದ್ದ ವೈಯಕ್ತಿಕ ದಾಳಿಯನ್ನು ನಡೆಸುತ್ತಿದ್ದಾರೆ. ನನ್ನ ಕುಟುಂಬದ ವಿಚಾರವನ್ನು ಸದನದಲ್ಲೇ ತಂದು ಅವಮಾನ ಮಾಡುತ್ತಿದ್ದಾರೆ. ಪವಿತ್ರ ರಾಜಕೀಯ ಎನ್ನುವುದು ಆಂಧ್ರ ಪ್ರದೇಶದಲ್ಲಿ ಇಲ್ಲದಂತಾಗಿದೆ. ಹಾಗಾಗಿ, ಒಂದು ನಿರ್ಧಾರಕ್ಕೆ ಬಂದಿದ್ದೇನೆ, ಮತ್ತೆ ನಾನು ಮುಖ್ಯಮಂತ್ರಿ ಆಗುವವರೆಗೆ ಆಂಧ್ರ ಪ್ರದೇಶದ ಅಸೆಂಬ್ಲಿಗೆ ಕಾಲಿಡುವುದಿಲ್ಲ"ಎಂದು ಚಂದ್ರಬಾಬು ನಾಯ್ಡು ಶಪಥಗೈದು ಸಭೆಯಿಂದ ಹೊರನಡೆದಿದ್ದಾರೆ.

ಕುಪ್ಪಂ ಕ್ಷೇತ್ರದ ಉಸ್ತುವಾರಿ, ಸಚಿವರೂ ಆಗಿರುವ ಪೆದ್ದರೆಡ್ಡಿ ರಾಮಚಂದ್ರ ರೆಡ್ಡಿ
ತನ್ನ ಈ ನಿರ್ಧಾರವನ್ನು ಹೇಳುವಾಗ ಅಕ್ಷರಸಃ ಕಣ್ಣೀರಿಟ್ಟ ಚಂದ್ರಬಾಬು ನಾಯ್ಡು ಅವರನ್ನು ಪಕ್ಷದ ಮುಖಂಡರು ಸಮಾಧಾನಿಸಲು ಮುಂದಾಗಿದ್ದರು. "ಇನ್ನು ನೀವು ಅಲ್ಲಿಂದ (ಕುಪ್ಪಂ) ಗೆಲ್ಲಲಾರಿರಿ, ಬೇಕಾದರೆ ನನ್ನ ಕ್ಷೇತ್ರಕ್ಕೆ ಬನ್ನಿ"ಎಂದು ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕುಪ್ಪಂ ಕ್ಷೇತ್ರದ ಉಸ್ತುವಾರಿ, ಸಚಿವರೂ ಆಗಿರುವ ಪೆದ್ದರೆಡ್ಡಿ ರಾಮಚಂದ್ರ ರೆಡ್ಡಿಯವರು ಚಂದ್ರಬಾಬು ನಾಯ್ಡುಗೆ ಸವಾಲು ಹಾಕಿದ್ದರು. ಈ ವಿಚಾರವನ್ನೂ ನಾಯ್ಡು ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ್ದರು.

ಸದನಕ್ಕೆ ಕಾಲಿಡುವುದಿಲ್ಲ ಎಂದು ರೋಜಾ ಹಿಂದೆ ಶಪಥ ಮಾಡಿದ್ದರು
ಆಂಧ್ರ ಪ್ರದೇಶದ ಅಸೆಂಬ್ಲಿಯಲ್ಲಿ ಕಡತದಿಂದ ಹೊರತೆಗೆಯಬೇಕಾದಂತಹ ಹಲವು ಹೇಳಿಕೆಗಳನ್ನು ಚಂದ್ರಬಾಬು ನಾಯ್ಡು ವಿರುದ್ದ ವೈಎಸ್ಆರ್ ಶಾಸಕರು ನೀಡಿದ್ದ ಉದಾಹರಣೆಗಳಿವೆ. ಅದರಲ್ಲೂ ಪ್ರಮುಖವಾಗಿ ಗುಧಿವಾಡ ಕ್ಷೇತ್ರದ ಶಾಸಕ, ಸಚಿವರೂ ಆಗಿರುವ ಕೊಡಲಿ ವೆಂಕಟೇಶ್ವರ ರಾವ್ ಮತ್ತು ನಗರಿ ಕ್ಷೇತ್ರದ ಶಾಸಕಿಯಾಗಿರುವ ರೋಜಾ. ಚಂದ್ರಬಾಬು ನಾಯ್ಡು ಅವರು ಮುಖ್ಯಮಂತ್ರಿಯಾಗಿದ್ದರೆ, ಸದನಕ್ಕೆ ಕಾಲಿಡುವುದಿಲ್ಲ ಎಂದು ಇದೇ ರೋಜಾ ಹಿಂದೆ ಶಪಥ ಮಾಡಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.












Click it and Unblock the Notifications