'ತಿತ್ಲಿ'ಯನ್ನು ರಾಜಕೀಯಕ್ಕೆ ಬಳಸುತ್ತಿದ್ದಾರೆ ನಾಯ್ಡು: ಬಿಜೆಪಿ
ವಿಜಯವಾಡ, ಅಕ್ಟೋಬರ್ 18: ಆಂಧ್ರಪ್ರದೇಶದಲ್ಲಿ ಆರ್ಭಟಿಸುತ್ತಿರುವ ತಿತ್ಲಿ ಚಂಡಮಾರುತವನ್ನು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ರಾಜಕೀಯಕ್ಕೆ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.
ವಿಜಯವಾಡದಲ್ಲಿ ನಡೆದ ಸಭೆಯೊಂದರಲ್ಲಿ ಮಾತನಾಡುತ್ತಿದ್ದ ಆಂಧ್ರಪ್ರದೇಶದ ಬಿಜೆಪಿ ಅಧ್ಯಕ್ಷ ಕನ್ನಾ ಲಕ್ಷ್ಮಿನಾರಾಯಣ್ ಅವರು ಟಿಡಿಪಿ ಮುಖಂಡ ನಾಯ್ಡು ಅವರನ್ನು ತರಾಟೆಗೆ ತೆಗೆದುಕೊಂಡರು.
ಈ ಸಂದರ್ಭದಲ್ಲಿ ಆಂಧ್ರಪ್ರದೇಶದ ಟಿಡಿಪಿ ಸರ್ಕಾರಕ್ಕೆ ಹದಿನೈದು ಪ್ರಶ್ನೆಗಳನ್ನು ಕೇಳಿದ ಲಕ್ಷ್ಮಿನಾರಾಯಣ್, ಸರ್ಕಾರದ ಭ್ರಷ್ಟಾಚಾರದ ಬಗ್ಗೆ ತಕರಾರೆತ್ತಿದರು.

'ತಿತ್ಲಿ' ಸೈಕ್ಲೋನ್ ಸಂತ್ರಸ್ತರಿಗೆ ನೆರವು ನೀಡುವಲ್ಲಿ ನಾಯ್ಡು ಅವರು ಮುಂದಾಗಬೇಕು. ಆದರೆ ಅದಕ್ಕೆ ಬದಲಾಗಿ ಅವರು ತಿತ್ಲಿಯ ಮೂಲಕ ರಾಜಕೀಯ ಮಾಡುತ್ತಿದ್ದಾರೆ. ಜನರು ಇಂಥ ಸಂಕಷ್ಟದಲ್ಲಿರುವಾಗ ರಾಜಕೀಯ ಮಾಡುವುದು ಸರಿಯಲ್ಲ ಎಂದು ಅವರು ಹೇಳಿದರು.
ಬಂಗಾಳಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತದಿಂದಾಗಿ ಎದ್ದ ತಿತ್ಲಿ ಎಂಬ ಚಂಡ ಮಾರುತಕ್ಕೆ ಆಂದ್ರದಲ್ಲಿ ಇದುವರೆಗೆ ಹತ್ತಕ್ಕೂ ಹ ಎಚ್ಚು ಮಂದಿ ಮೃತರಾಗಿದ್ದು, ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಪಾಸ್ತಿ ಹಾನಿಯಾಗಿದೆ.
ಗಂಟೆಗೆ 120 ರಿಂದ 140 ಕಿ ಮೀ ವೇಗದಲ್ಲಿ ಚಲಿಸುವ ತಿತ್ಲಿ ಚಂಡಮಾರುತದ ಅಬ್ಬರ ಈಗ ಆಂಧ್ರಪ್ರದೇಶದಲ್ಲಿ ಕೊಂಚ ಕಡಿಮೆಯಾಗಿದ್ದರೂ, ಚಂಡಮಾರುತದ ಪರಿಣಾಮ ರಾಜ್ಯದಲ್ಲಿ ಅಲ್ಲಲ್ಲಿ ಮಳೆ ಸುರಿಯುತ್ತಿದೆ. ಒಡಿಶಾ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ತಿತ್ಲಿ ಆರ್ಭಟ ಹೆಚ್ಚಾಗಿದೆ. ಒಡಿಶಾದಲ್ಲಿ ತಿತ್ಲಿಗೆ 52 ಜನ ಬಲಿಯಾಗಿದ್ದಾರೆ.












Click it and Unblock the Notifications