ಉದ್ಘಾಟನೆಯಾಯಿತು ಮೊದಲ 'ದಿಶಾ' ಪೊಲೀಸ್ ಠಾಣೆ; ಏನು ವಿಶೇಷ?
ಅಮರಾವತಿ, ಫೆಬ್ರವರಿ 8: ಅತ್ಯಾಚಾರ ಹಾಗೂ ಮಹಿಳಾ ದೌರ್ಜನ್ಯದ ಪ್ರಕರಣಗಳನ್ನು ಬೇಗ ಇತ್ಯರ್ಥಗೊಳಿಸುವ ಸಲುವಾಗಿ ಮುಖ್ಯಮಂತ್ರಿ ಜಗನ ಮೋಹನ್ ರೆಡ್ಡಿ ನೇತೃತ್ವದ ಆಂಧ್ರಪ್ರದೇಶ ಸರ್ಕಾರ ಇತ್ತೀಚೆಗೆ ಕ್ರಾಂತಿಕಾರಿ ಹೆಜ್ಜೆ ಇಟ್ಟಿತ್ತು.
ಇದರ ಅಂಗವಾಗಿ ಆಂಧ್ರಪ್ರದೇಶದಲ್ಲಿ ದಿಶಾ ಮಹಿಳಾ ಪೊಲೀಸ್ ಠಾಣೆಗಳನ್ನು ತೆರೆಯಲಾಗುವುದು ಎಂದು ಘೋಷಿಸಿದ್ದರು. ಅದರಂತೆ ಶನಿವಾರ ಆಂಧ್ರಪ್ರದೇಶದ ರಾಜಮಂಡ್ರಿಯಲ್ಲಿ ಮೊದಲ ದಿಶಾ ಮಹಿಳಾ ಪೊಲೀಸ್ ಠಾಣೆಯನ್ನು ಜಗನ್ ಮೋಹನ್ ರೆಡ್ಡಿ ಉದ್ಘಾಟಿಸಿದರು.
ರಾಜಮಂಡ್ರಿಯಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಸಿಎಂ ಜಗನ್ ಮೋಹನ್ ರೆಡ್ಡಿ ದಿಶಾ ಮೊದಲ ಪೊಲೀಸ್ ಠಾಣೆಯನ್ನು ಮಹಿಳೆಯರಿಂದಲೇ ಉದ್ಘಾಟಿಸಿ, ಮಹಿಳೆ ಮತ್ತು ಮಕ್ಕಳಿಗೆ ಅಭಯ ನೀಡಿದ್ದಾರೆ.


ದಿಶಾ ಠಾಣೆಯ ವಿಶೇಷ ಏನು?
ಆಂಧ್ರಪ್ರದೇಶದಲ್ಲಿ ಒಟ್ಟು 18 ದಿಶಾ ಪೊಲೀಸ್ ಠಾಣೆಗಳನ್ನು ತೆರೆಯಲಾಗಿದೆ. ಡಿವೈಎಸ್ಪಿ ದರ್ಜೆಯ ಮಹಿಳಾ ಪೊಲೀಸ್ ಅಧಿಕಾರಿ ಇದರ ನೇತೃತ್ವ ವಹಿಸಿರುತ್ತಾರೆ. ಇಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಇತರರಿಗಿಂತ ಪ್ರತಿ ಶತ ಮೂವತ್ತು ಹೆಚ್ಚು ಸಂಬಳ ನೀಡಲಾಗುತ್ತದೆ. ದಾಖಲಾದ ಪ್ರಕರಣದ ತ್ವರಿತ ವಿಚಾರಣೆಗೆ 1 ಲಕ್ಷ ರುಪಾಯಿ ನೀಡಲಾಗುತ್ತದೆ. ಈ ಠಾಣೆಯಲ್ಲಿ ತನಿಖೆಗೆ ಬೇಕಾಗಿರುವ ಹಾಗೂ ಪೊಲೀಸರಿಗೆ ಅತ್ಯಾಧುನಿಕ ಸೌಲಭ್ಯಗಳನ್ನು ಆಂಧ್ರ ಸರ್ಕಾರ ಒದಗಿಸಿದೆ.

ಮಹಿಳೆ ಮತ್ತು ಮಕ್ಕಳ ಸುರಕ್ಷತೆಗೆ 24x7 ಕೆಲಸ
ಈ ವೇಳೆ ಮಾತನಾಡಿರುವ ಸಿಎಂ ಜಗನ್ ಮೋಹನ್ ರೆಡ್ಡಿ, 'ಮಹಿಳೆ ಮತ್ತು ಮಕ್ಕಳ ಸುರಕ್ಷತೆಗೆ 24x7 ಅತ್ಯಂತ ತ್ವರಿತವಾಗಿ ಕೆಲಸ ಮಾಡುವ ದಿಶಾ ಮಹಿಳಾ ಪೊಲೀಸ್ ಠಾಣೆಗಳನ್ನು ತೆರೆಯಲಾಗಿದೆ. ನಮ್ಮ ಸರ್ಕಾರ ಮಹಿಳೆ ಮತ್ತು ಮಕ್ಕಳನ್ನು ಏಂತಹದೇ ಸಂದರ್ಭದಲ್ಲೂ ಕಾಪಾಡಲು ಬದ್ಧವಾಗಿದೆ. ಮಹಿಳಾ ಸುರಕ್ಷತೆಯಲ್ಲಿ ದಿಶಾ ಪೊಲೀಸ್ ಠಾಣೆಗಳು ಇಡೀ ರಾಷ್ಟ್ರಕ್ಕೆ ಮಾದರಿಯಾಗಲಿವೆ' ಎಂದು ಹೇಳಿದರು.

ಏನಿದು ದಿಶಾ ಕಾನೂನು?
'ಆಂಧ್ರ ಪ್ರದೇಶ ದಿಶಾ ಕಾನೂನು-2019' ಹೆಸರಿನ ಮಸೂದೆಯನ್ನು ಕಳೆದ ವರ್ಷ ನಡೆದ ಸಚಿವ ಸಂಪುಟ ಸಭೆಯಲ್ಲಿ ಅಂಗೀಕರಿಸಿ ಕಾಯ್ದೆ ಸ್ವರೂಪ ನೀಡಲಾಗಿತ್ತು. ದೌರ್ಜನ್ಯಕ್ಕೆ ಒಳಗಾಗುವ ಮಹಿಳೆಯರಿಗೆ, ಮಕ್ಕಳಿಗೆ ತ್ವರಿತ ನ್ಯಾಯದಾನ, ದೋಷಿಗಳಿಗೆ ಮರಣದಂಡನೆವೆರೆಗೆ ಶಿಕ್ಷೆ ನೀಡುವುದು ಈ ಕಾಯ್ದೆಯಲ್ಲಿ ಸೇರಿಸಲಾಗಿದೆ. 21 ದಿನಗಳೊಳಗೆ ಸಂತ್ರಸ್ತರಿಗೆ ನ್ಯಾಯ ಸಿಗಬೇಕು ಎಂಬ ಮಹತ್ವದ ಅಂಶ ಇದರಲ್ಲಿ ಅಡಕವಾಗಿದೆ. ನೂತನ ಆಂಧ್ರ ಪ್ರದೇಶ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಜಗನ್ಮೋಹನ ರೆಡ್ಡಿ ಅವರು ಹಲವಾರು ಕ್ರಾಂತಿಕಾರಿ ಕ್ರಮಗಳನ್ನು ಕೈಗೊಳ್ಳುತ್ತಿರುವ ಭಾಗವಾಗಿ ಈ ಮಸೂದೆಯನ್ನು ತಂದಿದ್ದಾರೆ.

ದಿಶಾ ಸಾಮೂಹಿಕ ಅತ್ಯಾಚಾರ
ಹೈದರಾಬಾದ್ನ ಪಶುವೈದ್ಯೆ ದಿಶಾಳನ್ನು ನವೆಂಬರ್ 26 ರಂದು ನಾಲ್ವರು ಕಾಮುಕರು ಅಪಹರಿಸಿ ಸಾಮೂಹಿಕ ಅತ್ಯಾಚಾರ ಮಾಡಿದ್ದರು. ಅಲ್ಲದೇ ದಿಶಾಳನ್ನು ಭೀಕರವಾಗಿ ಕೊಲೆ ಮಾಡಿದ್ದರು. ನವೆಂಬರ್ 28 ರಂದುಆರೋಪಿಗಳನ್ನು ಬಂಧಿಸಲಾಗಿತ್ತು. ಡಿಸೆಂಬರ್ 6 ರಂದು ಸ್ಥಳ ಮಹಜರಿಗೆ ಕರೆದುಕೊಂಡು ಹೋದಾಗ ಎನ್ಕೌಂಟರ್ನಲ್ಲಿ ಆರೋಪಿಗಳು ಹತರಾಗಿದ್ದರು.












Click it and Unblock the Notifications